ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಭದ್ರಾವತಿ ತಾಲೂಕಿನ ಹೊಸ ಜಂಬರಘಟ್ಟೆಯ ಕಬರಸ್ಥಾನದ ಜಾಗದಲ್ಲಿ ಭಾನುವಾರ ಅಕೇಶಿಯಾ ಮರದ ಕೊಂಬೆ ಕಡಿದ ವಿಚಾರಕ್ಕೆ ಎರಡು ಕೋಮುಗಳ ಮಧ್ಯೆ ನಡೆದ ಗಲಾಟೆ ಗಂಭೀರ ರೂಪ ಪಡೆದು ಈಗ ಹೊಳೆಹೊನ್ನೂರು ಠಾಣೆ ಮೇಟ್ಟಿಲೇರಿದೆ.ಹೊಸ ಜಂಬಘಟ್ಟೆ ನಿವಾಸಿ ರವಿ (20) ಎಂಬಾತ ಜೀವನೋಪಾಯಕ್ಕಾಗಿ ಕುರಿಗಳನ್ನು ಸಾಕಿಕೊಂಡಿದ್ದ. ಮನೆಯಲ್ಲಿ ಕುರಿ ಕಟ್ಟುವ ಗೂಟ ಮುರಿದಿದ್ದ ಕಾರಣ ಹೊಸಗೂಟಕ್ಕಾಗಿ ಮರ ಹುಡುಕಾಡಿಕೊಂಡು ಹೋಗಿದ್ದಾರೆ. ಆಗ ಕಬರಸ್ಥಾನದ ಬಳಿ ಇದ ಅಕೇಶಿಯಾ ಮರದಿಂದ ಕೊಂಬೆಯೊಂದನ್ನು ಕಡಿದುಕೊಂಡು, ಕುರಿ ಕಟ್ಟಲು ಬೇಕಾದ ಗೂಟವಾಗಿ ಸಿದ್ಧಪಡಿಸಿಕೊಂಡು ಹೋಗಿದ್ದಾನೆ.
ಮರ ಕಡಿಯುವುದನ್ನು ಕಂಡ ಕೆಲ ಮುಸ್ಲಿಂ ಯುವಕರು ರವಿ ಅವರನ್ನು ತಡೆದು, ಪ್ರಶ್ನಿಸಿ ಹಲ್ಲೆಗೆ ಮುಂದಾಗಿದ್ದಾರೆ. ಸ್ಥಳದಲ್ಲಿದ ಕೆಲವರು ಸಮಾಧಾನಪಡಿಸಿ ಪ್ರಕರಣ ಗ್ರಾಮ ಸಮಿತಿಯ ಬಳಿ ತೆಗೆದುಕೊಂಡು ಹೋಗಿದ್ದಾರೆ. ಗ್ರಾಮ ಸಮಿತಿಯವರು ಸಣ್ಣದನ್ನೇ ದೊಡ್ಡದು ಮಾಡಿಕೊಂಡು ಹೋಗುವುದು ಬೇಡ ಎಂದು ಎರಡೂ ಕಡೆಯವರಿಗೂ ತಿಳಿಹೇಳಿ ಕಳುಹಿಸಿದ್ದರು.ಮರದ ಕೊಂಬೆ ಕಡಿದ ವಿಚಾರ ಗ್ರಾಮ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಯಲ್ಲಿ ಇತ್ಯರ್ಥವಾಗಿದ್ದರೂ ಸುಮ್ಮನಾಗದ ಕೆಲ ಮುಸ್ಲಿಂ ಯುವಕರು, ರವಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಗಲಾಟೆ ವಿಷಯ ಅಕ್ಕಪಕ್ಕದವರಿಗೆ ತಿಳಿದು, ಗ್ರಾಮದಲ್ಲಿ ಜನ ಜಮಾಯಿಸಿದ್ದಾರೆ. ಈ ವೇಳೆ ನಡೆದ ತಳ್ಳಾಟ, ನೂಕಾಟದಲ್ಲಿ ಎರಡು ಕಡೆಯ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು.
ಗಲಾಟೆ ಸಂಬಂಧ ಹೊಳೆಹೊನ್ನೂರು ಪೊಲೀಸರು 4 ಜನ ಆರೋಪಿಗಳನ್ನು ಜಾತಿ ನಿಂದನೆ ಆರೋಪಡಿ ಬಂಧಿಸಿದ್ದಾರೆ. ಭದ್ರಾವತಿ ತಾಲೂಕು ಹೊಸ ಜಂಬರಘಟ್ಟೆಯ ಸಿದ್ದೀಕ್ (32), ಅಲಿಮ್ (27), ನೂರ್ ಅಹಮದ್ (67) ಹಾಗೂ ಸಮೀವುಲ್ಲಾ (17) ಬಂಧಿತರು. ಹೊಳೆಹೊನ್ನೂರು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಠಾಣೆಗೆ ಕರೆಸಿ, ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.- - - ಬಾಕ್ಸ್ ಭದ್ರಾವತಿ ತಾಲೂಕಿನ ಹೊಸ ಜಂಬರಘಟ್ಟೆಯಲ್ಲಿ ಮರದ ಕೊಂಬೆ ಕಡಿದ ವಿಚಾರಕ್ಕೆ ಗಲಾಟೆ ನಡೆದಿದ್ದು, ಕುರಿ ಕಟ್ಟಲು ಗೂಟಕ್ಕಾಗಿ ರವಿ ಎಂಬ ವ್ಯಕ್ತಿ ಮರ ಕಡಿಯಲು ಹೋಗಿದ್ದ ವೇಳೆ, ಮುಸ್ಲಿಂ ಯುವಕರಿಂದ ವಿರೋಧ ವ್ಯಕ್ತವಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ನೂಕಾಟ ನಡೆದಿತ್ತು. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ನಲ್ಲಿ ದೂರು ಕೂಡ ದಾಖಲಾಗಿದ್ದು, ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ
- ಜಿ.ಕೆ. ಮಿಥುನ್ಕುಮಾರ್, ಜಿಲ್ಲಾ ಎಸ್ಪಿ- - -