ಗೋ ರಕ್ಷಣೆಗೆ ಹೋದ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ

KannadaprabhaNewsNetwork | Published : Jun 15, 2024 1:12 AM

ಸಾರಾಂಶ

ಸೋಮಶೇಖರ ಚೆನ್ನಶೆಟ್ಟಿ ಹಾಗೂ ಗಣೇಶ ಎಂಬ ಇಬ್ಬರು ಬಜರಂಗದಳದ ಕಾರ್ಯಕರ್ತರು ಹಲ್ಲೆಗೊಳಗಾಗಿದ್ದು ವ್ಯಕ್ತಿಯೋರ್ವರು ಇವರಿಗೆ ಫೋನ್‌ ಕರೆ ಮಾಡಿ ಆಕಳಿಗೆ ಗಾಯವಾಗಿದೆ ಬನ್ನಿ ಎಂದು ಹೇಳಿ ಕರೆಯಿಸಿಕೊಂಡಿದ್ದಾರೆ. ಆಗ ಇವರಿಬ್ಬರು ಎಪಿಎಂಸಿ ಬಳಿ ಹೋದ ಸಂದರ್ಭದಲ್ಲಿ ಅನ್ಯ ಕೋಮಿನ 30ಕ್ಕೂ ಹೆಚ್ಚಿನ ಜನರು ಹಲ್ಲೆ ನಡೆಸಿದ್ದಾರೆ

ಧಾರವಾಡ:

ಗೋ ರಕ್ಷಣೆಗೆ ಹೋದ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಕಾರ್ಯಕರ್ತರಿಬ್ಬರಿಗೆ ಅನ್ಯ ಕೋಮಿನವರು ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ಇಲ್ಲಿಯ ಹಳೆಯ ಎಪಿಎಂಸಿ ಪ್ರದೇಶದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಇದನ್ನು ಖಂಡಿಸಿ ರಾತ್ರಿ ಧಾರವಾಡ ಉಪ ನಗರ ಪೊಲೀಸ್ ಠಾಣೆಯ ಎದುರು ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸದೆ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಸೋಮಶೇಖರ ಚೆನ್ನಶೆಟ್ಟಿ ಹಾಗೂ ಗಣೇಶ ಎಂಬ ಇಬ್ಬರು ಬಜರಂಗದಳದ ಕಾರ್ಯಕರ್ತರು ಹಲ್ಲೆಗೊಳಗಾದವರು. ವ್ಯಕ್ತಿಯೋರ್ವರು ಇವರಿಗೆ ಫೋನ್‌ ಕರೆ ಮಾಡಿ ಆಕಳಿಗೆ ಗಾಯವಾಗಿದೆ ಬನ್ನಿ ಎಂದು ಹೇಳಿ ಕರೆಯಿಸಿಕೊಂಡಿದ್ದಾರೆ. ಆಗ ಇವರಿಬ್ಬರು ಎಪಿಎಂಸಿ ಬಳಿ ಹೋದ ಸಂದರ್ಭದಲ್ಲಿ ಅನ್ಯ ಕೋಮಿನ 30ಕ್ಕೂ ಹೆಚ್ಚಿನ ಜನರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ಇಬ್ಬರು ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಬಜರಂಗದಳದ ಕಾರ್ಯಕರ್ತರು ಉಪ ನಗರ ಠಾಣೆಗೆ ತೆರಳಿ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಹು-ಧಾ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಆಗಮಿಸಿದ್ದು, ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಸ್ಥಳಕ್ಕೆ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ, ಶಾಸಕ ಅರವಿಂದ ಬೆಲ್ಲದ ಹಾಗೂ ಮಾಜಿ ಶಾಸಕ ಅಮೃತ ದೇಸಾಯಿ ಸಹ ಆಗಮಿಸಿ ಆರೋಪಿಗಳ ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ರಾತ್ರಿ 10.30ರ ಸುಮಾರಿಗೆ ಪ್ರತಿಭಟನೆ ನಿಲ್ಲಿಸಲಾಗಿದೆ.

ಪೊಲೀಸರು ಪಕ್ಷಪಾತ ಮಾಡದೇ ಜಿಹಾದಿ ಮುಸ್ಲಿಂ ಕಿಡಿಗೇಡಿಗಳ ಬಂಧನ ಮಾಡಬೇಕು. ಈ ಕುರಿತು ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this article