-ಕೆಮ್ಮಣ್ಣು ಕಾಮಧೇನು ಗೋಶಾಲೆಗೆ ಗೋವು ಹಸ್ತಾಂತರಿಸಿದ ಪಿಎಸ್ಐ ಬಾಬು ಎಸ್.ಅಗೆರ ಗೆ ಗೌರವ
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಹೊಳೆ ಗ್ರಾಮದಿಂದ ಅಕ್ರಮವಾಗಿ ಗೋವು ಸಾಗಿಸುತ್ತಿದ್ದಾಗ ದಾಳಿ ನಡೆಸಿ ವಶಪಡಿಸಿಕೊಂಡ ಆರು ಗೋವುಗಳನ್ನು ಪೊಲೀಸರು ದೇವಗೋಡು ಗ್ರಾಮದ ಕೆಮ್ಮಣ್ಣು ಕಾಮಧೇನು ಗೋಶಾಲೆಗೆ ಹಸ್ತಾಂತರಿಸಿದರು.ಕಾಮಧೇನು ಗೋವು ಶಾಲೆಯ ಮುಖ್ಯಸ್ಥ ನಾಗೇಶ್ ಆಂಗೀರಸ ಈ ಕುರಿತು ಮಾಹಿತಿ ನೀಡಿ, ಕಳಸ ಠಾಣಾ ವ್ಯಾಪ್ತಿಯ ಬಾಳೆಹೊಳೆ ಸೈಟ್ನಿಂದ ಹಾಸನ ಮೂಲದವರು ಆರು ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲು ಯತ್ನಿಸುತ್ತಿದ್ದಾಗ, ಬಜರಂಗ ದಳದ ಕಾರ್ಯಕರ್ತರ ಗಮನಕ್ಕೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಕ್ರಮ ಗೋವು ಸಾಗಣೆ, ಗೋಹತ್ಯೆ ಕಾಯ್ದೆ ನಿಷೇಧವಿದ್ದರೂ ಕೆಲವು ಧರ್ಮಾಂಧರು ಕ್ರೂರ ಕೃತ್ಯ ನಡೆಸುತ್ತಿದ್ದು, ಇದು ಖಂಡನೀಯ. ಕಳಸ ಭಾಗದಲ್ಲಿ ಬಜರಂಗದಳದ ಕಾರ್ಯಕರ್ತರಾದ ಅಜಿತ್ ಕಳಸ, ಜಗದೀಶ್ ಭಟ್, ಕಾರ್ತಿಕ್ ಹಾಗೂ ಉಮೇಶ್ ಅವರು ಅಕ್ರಮ ಗೋವು ಸಾಗಣೆ ತಡೆಯುವಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಪೊಲೀಸ್ ಪಿಎಸ್ಐ ಬಾಬು ಎಸ್.ಅಗೆರ, ಎಎಸ್ಐ ರವಿನಾಯ್ಕ್, ಸಿಬ್ಬಂದಿ ಪ್ರಮೋದ್, ಮಂಜುನಾಥ್ ತಮ್ಮ ಕಾರ್ಯನಿಷ್ಠೆ ಮೆರೆದಿದ್ದಾರೆ. ಗೋವು ಸಂರಕ್ಷಣೆಯ ಫಲ ಇವರೆಲ್ಲರಿಗೂ ಖಚಿತವಾಗಿ ದೊರೆಯಲಿದೆ ಎಂದು ತಿಳಿಸಿದರು. ಇವರ ಸೇವಾ ಕಾರ್ಯಕ್ಕೆ ಗೋವು ಶಾಲೆಯು ಅಭಿನಂದಿಸುತ್ತ, ಗೌರವಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫೋಟೊ: ಬಾಳೆಹೊನ್ನೂರು ಸಮೀಪದ ಕೆಮ್ಮಣ್ಣು ಕಾಮಧೇನು ಗೋವು ಸೇವಾ ಕೇಂದ್ರಕ್ಕೆ ವಶಪಡಿಸಿಕೊಂಡ ಗೋವುಗಳನ್ನು ಹಸ್ತಾಂತರಿಸಿದ ಪಿಎಸ್ಐ ಬಾಬು ಎಸ್.ಅಗೆರ ಅವರನ್ನು ಗೋಶಾಲೆಯ ಮುಖ್ಯಸ್ಥ ನಾಗೇಶ್ ಆಂಗೀರಸ ಗೌರವಿಸಿದರು.