ಕನ್ನಡಪ್ರಭ ವಾರ್ತೆ ವಿಜಯಪುರ
ಗುರುವಾರ ಮಧ್ಯರಾತ್ರಿ ಬಡಾವಣೆಯೊಂದರಲ್ಲಿ ಕಳ್ಳತನಕ್ಕೆ ಬಂದಿದ್ದ ವೇಳೆ ಬಂಧಿಸಲು ಯತ್ನಿಸಿದಾಗ ಕಳ್ಳರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರ ಬದಿಯಲ್ಲಿನ ತೊಗರಿ ಜಮೀನಿನಲ್ಲಿ ಓಡಿಹೋಗಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಗೋಳಗುಮ್ಮಟ ಠಾಣೆ ಸಿಪಿಐ ಮಲ್ಲಯ್ಯ ಮಠಪತಿ ಅವರು 5 ಸುತ್ತು ಗುಂಡು ಗುಂಡು ಹಾರಿಸಿದ್ದು, ಓರ್ವ ದರೋಡೆಕೋರನ ಕಾಲಿಗೆ ಗುಂಡು ತಗುಲಿದ್ದು, ಆತ ಸಿಕ್ಕಿಬಿದ್ದಿದ್ದಾನೆ. ಕಾಲಿಗೆ ಗುಂಡು ತಗುಲಿ ಪೊಲೀಸ್ರ ಕೈಗೆ ಸಿಕ್ಕಿಬಿದ್ದ ಆರೋಪಿ ಮಧ್ಯಪ್ರದೇಶದ ಮಹೇಶ ಎಂಬಾತನನ್ನು ಬಂಧಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಗರದ ಕನಕದಾಸ ಬಡಾವಣೆಗೆ ಬಂದಿದ್ದ ನಾಲ್ವರು ಮುಸುಕುಧಾರಿಗಳು, ಕಳ್ಳತನಕ್ಕೆ ಯತ್ನಿಸುತ್ತಿದ್ದ ಮೊದಲ ಮನೆಯ ಮುಂದೆಯೇ ಬಂಧನಕ್ಕೆ ಸ್ಕೆಚ್ ಹಾಕಿದ್ದರು.
ಅಷ್ಟರಲ್ಲಾಗಲೇ ಅವರು ಅಲ್ಲಿಂದ ಕಾಲ್ಕಿತ್ತಿದ್ದರಿಂದ ಮತ್ತೊಂದು ಮನೆಯ ಮುಂದೆ ಕಳ್ಳತನಕ್ಕೆ ಬಂದಾಗ ಪೊಲೀಸರು ಅಟ್ಯಾಕ್ ಮಾಡಿದ್ದಾರೆ.
ಬುಧವಾರ ರಾತ್ರಿ ಜೈನಾಪೂರ ಆರ್ಸಿ ಬಡಾವಣೆಯಲ್ಲಿ ಕಳ್ಳತನಕ್ಕೆ ಬಂದಿದ್ದ ಹೊರರಾಜ್ಯದ ಕಳ್ಳರ ಕೃತ್ಯವನ್ನು ವಿರೋಧಿಸಿದ ಮನೆ ಮಾಲೀಕ ಸಂತೋಷ ಕನ್ನಾಳ ಎಂಬಾತನನ್ನು ಮನೆಯ ಮೊದಲ ಮಹಡಿಯಿಂದಲೇ ಎತ್ತಿ ಬಿಸಾಕಿ ಅವರ ಮನೆ ದರೋಡೆ ನಡೆಸಿದ್ದರು. ಮಿತಿಮೀರಿದ್ದ ಮುಸುಕುಧಾರಿಗಳ ಅಟ್ಟಹಾಸದಿಂದಾಗಿ ಹೇಗಾದರೂ ಮಾಡಿ ಅವರನ್ನು ಹೆಡೆಮುರಿ ಕಟ್ಟಬೇಕು ಎಂದು ಮುಸುಕುಧಾರಿಗಳ ಬಂಧನಕ್ಕೆ ಗಾಂಧಿಚೌಕ್, ಗೋಳಗುಮ್ಮಟ, ಗ್ರಾಮೀಣ ಸಿಪಿಐಗಳನ್ನೊಳಗೊಂಡ ತಂಡವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ರಚಿಸಿದ್ದರು. ವಿಶೇಷ ತಂಡ ತಡರಾತ್ರಿ ಕಾರ್ಯಾಚರಣೆ ನಡೆಸಿ, ಕೊನೆಗೂ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದೆರಡು ತಿಂಗಳಿನಿಂದ ರಾತ್ರಿಯ ವೇಳೆ ದರೋಡೆಕೋರರು ಮನೆಗಳ ಬಾಗಿಲು ಮುರಿದು ಮನೆಯಲ್ಲಿದ್ದವರಿಗೆ ಚಾಕು ಚುಚ್ಚುವುದು, ಕೊಲೆಗೆ ಯತ್ನಿಸಿ ದರೋಡೆ ಮಾಡುವುದು ನೋಡಿ ನಮಗೆಲ್ಲ ಭಯವಾಗಿತ್ತು. ಗುಂಡು ಹಾರಿಸಿ ಓರ್ವವನ್ನು ಬಂಧಿಸಿರುವ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಅದರಂತೆ ಉಳಿದವರನ್ನು ಸಹ ಆದಷ್ಟು ಬೇಗ ಬಂಧಿಸುವ ಮೂಲಕ ನಗರ ಜನತೆ ನೆಮ್ಮದಿಯಿಂದ ಇರುವಂತೆ ಮಾಡಿದರೆ ಸಾಕು.