ಕಾಂಗ್ರೆಸ್‌ ಮುಖಂಡ ತಮಟಗಾರ ಮೇಲೆ ಹಲ್ಲೆಗೆ ಯತ್ನ!

KannadaprabhaNewsNetwork | Published : Aug 12, 2024 1:10 AM

ಸಾರಾಂಶ

ಆರೇಳು ಜನರ ಅಪರಿಚಿತರ ಗುಂಪೊಂದು ನಗರದ ಅಂಜುಮನ್ ಸಂಸ್ಥೆಯ ಆವರಣದಲ್ಲಿ ತಮಟಗಾರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯೋಜನೆ ರೂಪಿಸಿದ್ದು, ಅವರು ಸ್ಥಳದಲ್ಲಿ ಇರದ ಕಾರಣ ಸಮೀಪದ ರಸೂಲಪುರ ಪ್ರದೇಶದಲ್ಲಿರುವ ಮನೆಗೆ ನುಗ್ಗಿ ಹಲ್ಲೆಗೆ ಯತ್ನ ಮಾಡಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಇಲ್ಲಿಯ ಅಂಜುಮನ್‌ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ ಮೇಲೆ ಹಲ್ಲೆಗೆ ಶನಿವಾರ ತಡರಾತ್ರಿ ಯತ್ನ ನಡೆದಿದ್ದು, ಸ್ಥಳೀಯ ಮುಸ್ಲಿಂ ಸಮುದಾಯದಲ್ಲಿ ಆತಂಕ ಹುಟ್ಟಿಕೊಂಡಿದೆ.

ಆರೇಳು ಜನರ ಅಪರಿಚಿತರ ಗುಂಪೊಂದು ನಗರದ ಅಂಜುಮನ್ ಸಂಸ್ಥೆಯ ಆವರಣದಲ್ಲಿ ತಮಟಗಾರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯೋಜನೆ ರೂಪಿಸಿದ್ದು, ಅವರು ಸ್ಥಳದಲ್ಲಿ ಇರದ ಕಾರಣ ಸಮೀಪದ ರಸೂಲಪುರ ಪ್ರದೇಶದಲ್ಲಿರುವ ಮನೆಗೆ ನುಗ್ಗಿ ಹಲ್ಲೆಗೆ ಯತ್ನ ಮಾಡಿದೆ. ತಮಟಗಾರ ಶನಿವಾರ ಬೆಂಗಳೂರಿನಲ್ಲಿದ್ದ ಕಾರಣ ಕುಟುಂಬದ ಸದಸ್ಯರೊಂದಿಗೆ ಜಗಳ ತೆಗೆದು ತಮಟಗಾರ ಸಹೋದರ ಜಮಾಲ್‌ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆಗೂ ಮುಂದಾಗಿದ್ದಾರೆ ಎಂದು ಗೊತ್ತಾಗಿದೆ. ಇದರಿಂದ ಆತಂಕಗೊಂಡ ಕುಟುಂಬದ ಸದಸ್ಯರು ತಡರಾತ್ರಿಯೇ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೊಲೆ ಸಂಚಿದು

ಘಟನೆಯ ಬೆನ್ನಲ್ಲಿಯೇ ಭಾನುವಾರ ಧಾರವಾಡಕ್ಕೆ ಆಗಮಿಸಿದ ಇಸ್ಮಾಯಿಲ್ ತಮಾಟಗಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಮ್ಮ ಸಮಾಜದ ಹುಡುಗರಿಂದಲೇ ನನ್ನ ಹೊಡೆಯಲು ವಿರೋಧಿಗಳು ಯೋಜನೆ ರೂಪಿಸಿದ್ದಾರೆ. ಹತ್ತಕ್ಕೂ ಹೆಚ್ಚು ಹುಡುಗರು ಗಾಂಜಾ ಸೇವನೆ ಮಾಡಿ ಬಂದಿದ್ದರು ಎಂಬ ಮಾಹಿತಿ ಇದೆ. ಮಣಕಿಲ್ಲಾ ಪ್ರದೇಶದಲ್ಲಿ ನನ್ನ ಹೊಡೆಯುವುದಾಗಿ ಹೇಳಿದ್ದಾರಂತೆ. ಒಂದು ವರ್ಷದಿಂದ ಮುಸ್ಲಿಂ ಯುವಕರ ಗುಂಪೊಂದು ಕೊಲೆ ಸಂಚು ರೂಪಿಸಿದೆ. ಪೋಲಿಸ್ ಇಲಾಖೆ ಮೇಲೆ ತಮಗೆ ನಂಬಿಕೆ ಇದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆ ಹುಡುಗರಿಗೆ ಪ್ರಚೋದನೆ ನೀಡಿದ್ದು ಯಾರು? ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ರಾಜಕೀಯ ದ್ವೇಷವೇ?

ನನ್ನನ್ನು ಕೊಲೆ ಮಾಡುವ ಕುರಿತು ಯೋಜನೆ ರೂಪಿಸಿದ್ದು, ಈ ಕುರಿತು ಸ್ವತಃ ಪೊಲೀಸ್‌ ಆಯುಕ್ತರಿಗೆ ದೂರು ನೀಡುತ್ತೇನೆ. ರಾಜಕೀಯ ದ್ವೇಷದಿಂದ ಕೊಲೆ ಮಾಡಲು ಯೋಜನೆ ರೂಪಿಸಿದ್ದಾರೆ. ಇಸ್ಮಾಯಿಲ್ ತಮಾಟಗಾರ ಅವರನ್ನು ಕೊಲೆ ಮಾಡಿದರೆ 25 ವರ್ಷ ಅರಾಮಾಗಿ ರಾಜಕೀಯ ಮಾಡಬಹುದು ಎಂದುಕೊಂಡಿದ್ದಾರೆ. ತನಿಖೆ ಮಾಡಿ ಪೊಲೀಸರು ಅವರು ಯಾರೆಂದು ಕಂಡು ಹಿಡಿಯಲಿ ಎಂದು ತಮಟಗಾರ ಆಗ್ರಹಿಸಿದರು.

ಇನ್ನು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಅವರು, ತಮಾಟಗಾರ ಅವರ ರಸೂಲಪುರ ಓಣಿಯ ಮನೆಗೆ ಭಾನುವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದರು. ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಸಿಪಿಐ ಕಾಡದೇವರಮಠ ಸಹ ಜತೆಗಿದ್ದರು.ವಿಡಿಯೋ ಪರಿಶೀಲನೆ

ಇಸ್ಮಾಯಿಲ್‌ ತಮಟಗಾರ ಕೊಲೆ ಸಂಚಿನ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ನಡೆದ ಘಟನೆಗೆ ಸಂಬಂಧಿಸಿದಂತೆ ಜಮಾಲ್‌ ತಮಟಗಾರ ಅವರು ನೀಡಿದ ದೂರಿನ ಅನ್ವಯ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರಿಗೆ ಬಂದಿರುವ ಕೊಲೆ ಬೆದರಿಕೆ ಕುರಿತು ಪ್ರಕರಣ ದಾಖಲಿಸಿಕೊಂಡು ಇಲಾಖೆ ಸೂಕ್ತ ತನಿಖೆ ಮಾಡಲಿದೆ. ಸದ್ಯ ಸಿಸಿ ಕ್ಯಾಮೆರಾದಲ್ಲಿರುವ ವಿಡಿಯೋ ಪರಿಶೀಲನೆ ಮಾಡಲಾಗುತ್ತಿದೆ. ಬಂಧಿತ ಆರೋಪಿಗಳ ವಿಚಾರಣೆ ನಂತರ ಘಟನೆ ಕುರಿತು ಸ್ಪಷ್ಟ ಚಿತ್ರಣ ಹೊರ ಬರಲಿದೆ.

ಎನ್‌. ಶಶಿಕುಮಾರ, ಪೊಲೀಸ್ ಆಯುಕ್ತರು

Share this article