ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿ ತುಂಗಭದ್ರಾ ಜಲಾಶಯ ಅರ್ಧ ಖಾಲಿ : ರೈತರಿಗೆ ತಂದ ಸಂಕಷ್ಟ

KannadaprabhaNewsNetwork |  
Published : Aug 12, 2024, 01:10 AM ISTUpdated : Aug 12, 2024, 01:23 PM IST
11ಎಚ್‌ಪಿಟಿ2- ಹೊಸಪೇಟೆಯ ತುಂಗಭದ್ರಾ ಜಲಾಶಯದ 31 ಗೇಟ್‌ಗಳಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದ ರೈತರ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯದ ನೀರು ಪೋಲಾಗುತ್ತಿರುವುದರಿಂದ ಜಲಾಶಯ ನೆಚ್ಚಿರುವ ರೈತರಲ್ಲಿ ಆತಂಕ ಮನೆ ಮಾಡಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಕಲ್ಯಾಣ ಕರ್ನಾಟಕ ಭಾಗದ ರೈತರ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯದ ನೀರು ಪೋಲಾಗುತ್ತಿರುವುದರಿಂದ ಜಲಾಶಯ ನೆಚ್ಚಿರುವ ರೈತರಲ್ಲಿ ಆತಂಕ ಮನೆ ಮಾಡಿದೆ.

ಜಲಾಶಯದ ಗೇಟ್‌ ನಂ. 19 ಈಗ ಕಳಚಿ ಬಿದ್ದಿರುವ ಹಿನ್ನೆಲೆಯಲ್ಲಿ ಮೂರು ದಿನಗಳಲ್ಲಿ ಜಲಾಶಯದಿಂದ 52 ಟಿಎಂಸಿ ನೀರು ನದಿಗೆ ಹರಿಬಿಡುವ ಅನಿವಾರ್ಯ ಎದುರಾಗಿದೆ. ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಜಲಾಶಯ ನೆಚ್ಚಿರುವ ರೈತರಲ್ಲಿ ಆತಂಕ ಮನೆ ಮಾಡಿದೆ. ತುಂಗಭದ್ರಾ ಜಲಾಶಯದ ನೀರನ್ನು ನೆಚ್ಚಿಕೊಂಡು ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ 10 ಲಕ್ಷ ಎಕರೆ ಪ್ರದೇಶಕ್ಕೆ ನೀರು ಉಣಿಸುತ್ತದೆ. ಇನ್ನು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ಈ ಜಲಾಶಯ ನೀರು ಒದಗಿಸುತ್ತದೆ.

ತಗ್ಗಿದ ಒಳಹರಿವು:

ತುಂಗಭದ್ರಾ ಜಲಾಶಯದ ಒಳಹರಿವು ಭಾರೀ ಪ್ರಮಾಣದಲ್ಲಿ ಏರಿಕೆ ಇದ್ದುದರಿಂದ ಈ ಬಾರಿ ಜಲಾಶಯದಿಂದ ಜು. 22ರಿಂದಲೇ ನದಿಗೆ ನೀರು ಹರಿಸಲಾಗಿತ್ತು. ಹಾಗಾಗಿ ಜಲಾಶಯದಿಂದ ಈಗಾಗಲೇ 100 ಟಿಎಂಸಿ ನೀರು ನದಿ ಪಾಲಾಗಿದೆ. ಈಗ ಜಲಾಶಯ ಭರ್ತಿಯಾಗಿ ಕಾಲುವೆಗಳ ಮೂಲಕ ನೀರು ಬಿಡುತ್ತಿರುವುದರಿಂದ ರೈತರು, ಬತ್ತ, ಬಾಳೆ, ಕಬ್ಬು, ಮೆಣಸಿನಕಾಯಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಈಗ ಜಲಾಶಯದಿಂದ ಅನಿವಾರ್ಯವಾಗಿ 52 ಟಿಎಂಸಿ ನೀರು ನದಿಗೆ ಹರಿಸುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಎರಡನೇ ಬೆಳೆಗೂ ನೀರು ದೊರೆಯುವ ಸಾಧ್ಯತೆ ತೀರಾ ಕಡಿಮೆ ಇದೆ.

ಜಲಾಶಯದ ಒಳಹರಿವು 28 ಸಾವಿರ ಕ್ಯುಸೆಕ್‌ಗೆ ತಗ್ಗಿರುವುದರಿಂದ ಈಗ ಅಕ್ಟೋಬರ್‌ ತಿಂಗಳ ವರೆಗೆ ಮಲೆನಾಡಿನ ಮಳೆ ನೆಚ್ಚಿಕೊಳ್ಳುವ ಸ್ಥಿತಿ ಬಂದೊದಗಿದೆ.

ಇನ್ನು ಕೈಗಾರಿಕೆ, ಕುಡಿಯುವ ನೀರಿಗೂ ನೀರು ಹೊಂದಾಣಿಕೆ ಮಾಡಬೇಕಾದ ಸ್ಥಿತಿ ಇರುವುದರಿಂದ ಬೇಸಿಗೆ ಕಾಲದಲ್ಲಿ ಮತ್ತೆ ಗುದ್ದಾಟ ಶುರುವಾಗುವ ಸ್ಥಿತಿ ನಿರ್ಮಾಣವಾಗಿದೆ.

ತುಂಗಭದ್ರಾ ಜಲಾಶಯ ನೆಚ್ಚಿರುವ ರೈತರು ಈಗಾಗಲೇ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಆತಂಕಗೊಂಡಿದ್ದು, ಈ ಬಗ್ಗೆ ಜಲ ಸಂಪನ್ಮೂಲ ಸಚಿವರ ಬಳಿಯೂ ಅಳಲು ತೋಡಿಕೊಂಡಿದ್ದಾರೆ. ಇನ್ನು ತುಂಗಭದ್ರಾ ಮಂಡಳಿ ನಿರ್ಲಕ್ಷ್ಯದಿಂದಲೇ ಇಂತಹದೊಂದು ಪ್ರಮಾದ ಸೃಷ್ಟಿಯಾಗಿದೆ ಎಂದು ರೈತರು ದೂರಿದ್ದಾರೆ.

ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿರುವುದರಿಂದ ಈಗ ಸಾಲ-ಸೋಲ ಮಾಡಿ ಬೆಳೆದಿರುವ ಬೆಳೆಗೆ ನೀರು ಸಿಗುವುದಿಲ್ಲವೇ ಎಂಬ ಆತಂಕವೂ ರೈತರಲ್ಲಿದೆ. ಆದರೆ, ಜಲಾಶಯದಲ್ಲಿ ಅರ್ಧದಷ್ಟು ನೀರು ಉಳಿಸಲು ಶತಪ್ರಯತ್ನ ನಡೆಯುತ್ತಿರುವುದರಿಂದ ಈಗ ಬೆಳೆದಿರುವ ಬೆಳೆಗೆ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಲಾಗುತ್ತಿದೆ. ಒಂದನೇ ಬೆಳೆಗೆ ನೀರಿನ ಸಮಸ್ಯೆ ಇಲ್ಲ ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.ತುಂಗಭದ್ರಾ ಜಲಾಶಯದಲ್ಲಿ 53 ಟಿಎಂಸಿ ನೀರು ಉಳಿಸಲು ಪ್ರಯತ್ನ ನಡೆದಿದೆ. ಈಗಾಗಲೇ ಜಲಾಶಯದ ರಕ್ಷಣೆಗೆ ಒತ್ತು ನೀಡಲಾಗಿದೆ. ಇನ್ನು ಅಕ್ಟೋಬರ್‌ ವರೆಗೆ ಮಳೆ ನಿರೀಕ್ಷಿಸಲಾಗಿದೆ. ಆಗ ಜಲಾಶಯದ ಒಳಹರಿವು ಉತ್ತಮಗೊಂಡರೆ ರೈತರಿಗೂ ಅನುಕೂಲ ಆಗಲಿದೆ ಎನ್ನುತ್ತಾರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ.

ಜಲಾಶಯದ ಗೇಟ್‌ ನಂಬರ್‌ 19 ಕಳಚಿ ಬೀಳಲು ತುಂಗಭದ್ರಾ ಮಂಡಳಿ ಅಧಿಕಾರಿಗಳೇ ಕಾರಣರಾಗಿದ್ದಾರೆ. ಹಾಗಾಗಿ ಜಲಾಶಯದಿಂದ ಅರ್ಧ ಡ್ಯಾಂ ನೀರು ಖಾಲಿ ಮಾಡಲಾಗುತ್ತಿದೆ. ಇದಕ್ಕೆ ಕಾರಣಕರ್ತರಾಗಿರುವ ತುಂಗಭದ್ರಾ ಮಂಡಳಿ ಕಾರ್ಯದರ್ಶಿಯನ್ನು ಅಮಾನತು ಮಾಡಬೇಕು ಎನ್ನುತ್ತಾರೆ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ
ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ