ಧಾರವಾಡ: ಬಿಆರ್ಟಿಎಸ್ ಕಾರಿಡಾರ್ನಲ್ಲಿ ಸಾರ್ವಜನಿಕರೊಂದಿಗೆ ವಾಹನಗಳನ್ನು ಓಡಿಸಲು ಯತ್ನ ನಡೆಸಿದ ಧಾರವಾಡ ಧ್ವನಿ ಪದಾಧಿಕಾರಿಗಳು, ವಿವಿಧ ಸಂಘಟನೆ ಮುಖಂಡರನ್ನು ಗುರುವಾರ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿರುವ ಘಟನೆ ನಡೆಯಿತು.
ಇಲ್ಲಿಯ ಕಡಪಾ ಮೈದಾನದಿಂದ ಮೆರವಣಿಗೆ ಕೈಗೊಂಡ ಧ್ವನಿ ಮುಖಂಡರು ಜ್ಯುಬ್ಲಿ ವೃತ್ತದಲ್ಲಿ ಕೆಲಕಾಲ ಚಿಗರಿ ಬಸ್ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಆನಂತರ ಚಿಗರಿ ಸಂಚಾರದ ಪಥದಲ್ಲಿ ಖಾಸಗಿ ವಾಹನ ಓಡಾಟಕ್ಕೆ ಯತ್ನಿಸಿದರು. ಈ ಪಥದಲ್ಲಿ ಸಾರ್ವಜನಿಕರ ವಾಹನಗಳ ಓಡಿಸಿದಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದರೂ, ಹೋರಾಟಗಾರರು ಸ್ಪಂದಿಸದೇ ಹೊರಡಲು ಸಿದ್ಧರಾದರು. ಈ ಮಧ್ಯೆ ಪೊಲೀಸರು ಹಾಗೂ ಹೋರಾಟಗಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು.ನಂತರ ಸ್ಥಳಕ್ಕೆ ಬಂದ ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕರಾದ ಸಾವಿತ್ರಿ ಕಡಿ ಅವರೊಂದಿಗೆ ವಾಗ್ವಾದ ನಡೆಯಿತು. ಆನಂತರ ಧಾರವಾಡ ಧ್ವನಿ ಸಂಘಟನೆ ಪದಾಧಿಕಾರಿಗಳನ್ನು, ವಿವಿಧ ಸಂಘಟನೆ ಮುಖಂಡರನ್ನು ಬಂಧಿಸಿ, ಬಿಡುಗಡೆ ಮಾಡಲಾಯಿತು.
ಇಲ್ಲಿನ ಜ್ಯುಬ್ಲಿ ವೃತ್ತದಿಂದ ನವಲೂರು ವರೆಗೆ ಸಾಮಾನ್ಯ ಪಥದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ಪ್ರದೇಶದಲ್ಲಿ ಸಾರ್ವಜನಿಕರ ವಾಹನಗಳಿಗೆ ಬಿಆರ್ಟಿಎಸ್ ಕಾರಿಡಾರಿನಲ್ಲಿ ಅವಕಾಶ ಕೋರಿದ್ದು, ಸ್ಪಂದಿಸಿಲ್ಲ. ಪಾದಯಾತ್ರೆ ಮಾಡಿದರೂ ಸ್ಪಂದಿಸಿಲ್ಲ. ಜಿಲ್ಲಾಧಿಕಾರಿ, ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕರ ಮೇಲೆ, ಪೊಲೀಸ್ ಆಯುಕ್ತರ ಕಡೆ ಬೆರಳು ತೋರಿಸುವುದಾಗಿ ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ ದೂರಿದರು.ಪ್ರತಿಭಟನೆಯಲ್ಲಿ ಮಂಜು ನಡಟ್ಟಿ, ಶಂಭು ಸಾಲಮನಿ, ಬಸವರಾಜ ಜಾಧವ, ಪರಮೇಶಿ ಕಾಳೆ, ಸಂತೋಷ ಪಟ್ಟಣಶೆಟ್ಟಿ, ವೆಂಕಟೇಶ ರಾಯ್ಕರ, ತುಳಸಪ್ಪ ಪೂಜಾರ, ಮಂಜು ನೀರಲಕಟ್ಟಿ, ಪುಂಡಲೀಕ ತಳವಾರ, ಸುರೇಖಾ ಪುಜಾರ, ಮಂಜುನಾಥ ಬೋವಿ, ರಾಜೇಶ ಮನಗುಂಡಿ, ಪ್ರಕಾಶ ಬೆಂಗೇರಿ, ಇಮ್ರಾನ ತಾಳಿಕೋಟಿ, ಮನೋಜ ಸಂಗೊಳ್ಳಿ, ಪರಶುರಾಮ ಚುರಮರಿ ಇದ್ದರು.