ಸಿದ್ದಾಪುರ: ಇಲ್ಲಿನ ಮಾಲ್ದಾರೆ ಸಮೀಪದ ದುಬಾರೆ ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಳ್ಳ ಬೇಟೆಗೆ ಸಿದ್ಧತೆ ನಡೆಸಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ಬಂದೂಕಿನೊಂದಿಗೆ ಅರಣ್ಯದೊಳಗೆ ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ವಶಕ್ಕೆ ಪಡೆದವರ ಬಳಿ ಇದ್ದ ಮೂರು ಬ್ಯಾಗ್ಗಳು ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಪರಿಶೀಲಿಸಿದಾಗ ಬಟ್ಟೆ, ಅರಣ್ಯದಲ್ಲಿ ವಾಸ್ತವ್ಯಕ್ಕೆ ಬಳಸುವ ಅಡುಗೆ ಸಾಮಗ್ರಿಗಳು, ಚಾಕು, ಲೋಹ ಶೋಧಕ ಸಾಧನ, ಗಾಂಜಾ ರೀತಿಯ ಸೊಪ್ಪು ಹಾಗೂ ಸಿಡಿಮದ್ದು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಜಿಲೆಟಿನ್ ಕಡ್ಡಿಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.ವಶಕ್ಕೆ ಪಡೆದವರನ್ನು ಕೇರಳದ ತ್ರಿಶೂರ್ ಜಿಲ್ಲೆಯ ತೋಮಸ್, ಸುರೇಶ್ ಹಾಗೂ ಕೊಂಡಗೇರಿ ಗ್ರಾಮದ ಮೊಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ. ಕೇರಳದ ಕಣ್ಣೂರಿನ ನೌಷದ್ ಎ.ಎಂ. ಕೊಂಡಂಗೇರಿ, ಅಶ್ರಫ್ ಪರಾರಿಯಾಗಿದ್ದಾರೆ.
ಆರೋಪಿಗಳ ಬಳಿ ಇದ್ದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ಸಿದ್ದಾಪುರ ಠಾಣೆಗೆ ದೂರು: ಜಿಲೆಟಿನ್ ಕಡ್ಡಿಗಳು ಹಾಗೂ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿದ್ದಾಪುರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಸ್ಫೋಟಕ ವಸ್ತು ಹಾಗೂ ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಅಂಶಗಳಿರುವುದರಿಂದ ಮುಂದಿನ ಕಾನೂನು ಕ್ರಮಕ್ಕಾಗಿ ವಲಯ ಅರಣ್ಯಾಧಿಕಾರಿ ರಕ್ಷಿತ್ ಅವರು ಖುದ್ದಾಗಿ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ಠಾಣಾಧಿಕಾರಿ ಮಂಜುನಾಥ್ ಅವರಿಗೆ ದೂರು ನೀಡಿದ್ದಾರೆ.ಪ್ರಕರಣದ ಮುಂದಿನ ತನಿಖೆಯನ್ನು ಮಡಿಕೇರಿ ಡಿಎಫ್ಒ ಅಭಿಷೇಕ್ ಹಾಗೂ ಎಸಿಎಫ್ ನವೀನ್ ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸರು ಮುಂದುವರಿಯಲಿದ್ದಾರೆ. ಬಂದೂಕಿನೊಂದಿಗೆ ಅರಣ್ಯದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೂ ಶೋಧ ಕಾರ್ಯ ನಡೆಯುತ್ತಿದೆ.ಕಾರ್ಯಾಚರಣೆಯಲ್ಲಿ ಮಾಲ್ದಾರೆ ಗಸ್ತಿನ ಡಿಆರ್ಎಫ್ಒ ಹಂಸ, ಬೀಟ್ ಫಾರೆಸ್ಟರ್ ಚಂದ್ರಶೇಖರ್, ಅಜಯ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.