ಕನ್ನಡಪ್ರಭ ವಾರ್ತೆ ಉಡುಪಿಕರಾವಳಿಯಲ್ಲಿ ಔರಂಗಜೇಬನ ಕಾಲ ಮತ್ತೆ ಬಂದಿದೆ, ಅವನ ಕಾಲದಲ್ಲಿ ಹಿಂದುಗಳು ರಾಜನಿಗೆ ತಲೆಕಂದಾಯ ಕೊಡಬೇಕಿತ್ತು, ಹಿಂದುಗಳನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನೊಡಲಾಗುತಿತ್ತು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅದನ್ನೇ ಮಾಡುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರುಣ್ ಪುತ್ತಿಲ ಮೇಲೆ ಕೊಲೆ, ದರೋಡೆ ಕೇಸ್ ಇಲ್ಲ, ಅವರು ಬಾಂಬ್ ಇಟ್ಟಿಲ್ಲ, ಬೆಂಕಿ ಹಾಕಿಲ್ಲ, ಪಾಕ್ ಗೆ ಜೈ ಎಂದೂ ಹೇಳಿಲ್ಲ, ಆದರೂ ಅವರನ್ನು ಗಡಿಪಾರು ಮಾಡಲಾಗಿದೆ. ಕಲ್ಲಡ್ಕ ಪ್ರಭಾಕರ್ ಭಟ್ರು ಕೊಲೆಯಾದ ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗಿ ಸಾಂತ್ವನ ಹೇಳಿದ್ದಕ್ಕೆ, ಮಾತನಾಡಿದ್ದಕ್ಕೆ ಅವರ ಮೇಲೆ ಎಫ್ಐಆರ್ ಹಾಕಲಾಗಿದೆ, ಶ್ರೀಕಾಂತ್ ಶೆಟ್ಟಿ ಈ ಕೊಲೆ ಪ್ರಕರಣವನ್ನು ಎನ್.ಐ ಎ ಗೆ ಪ್ರಕರಣ ಕೊಡಿ ಎಂದು ಒತ್ತಾಯಿಸಿದರು, ಅದಕ್ಕೆ ಅವರ ಮೇಲೆ ಎಫ್ ಐಆರ್ ಆಗಿದೆ. ರಾಜ್ಯದಲ್ಲಿ ಹಿಂದು ನಾಯಕರ ಗಡಿಪಾರ್ - ಹಿಂದು ನಾಯಕರ ಮೇಲೆ ಎಫ್ಐಆರ್ ಸರ್ಕಾರ ಅಧಿಕಾರ ನಡೆಸುತ್ತಿದೆ ಎಂದರು.ಪ್ರವೀಣ್, ದೀಪಕ್, ಪ್ರಶಾಂತ್, ಸುಹಾಸ್ ಕೊಲೆಯಾದಾಗ ಸಚಿವ ದಿನೇಶ್ ಗುಂಡೂರಾವ್ ಧರ್ಮಗ್ರಂಥಗಳ ಬಗ್ಗೆ ಮಾತಾಡಲಿಲ್ಲ, ಅವರಿಗೆ ಮುಸ್ಲಿಮರ ಕೊಲೆಯಾದಾಗ ರಾಮಾಯಣ, ವೇದ, ಧರ್ಮಗ್ರಂಥ ನೆನಪಾಗುತ್ತದೆ ಎಂದ ಸಂಸದರು, ಕರಾವಳಿಯಲ್ಲೀಗ ತುರ್ತುಪರಿಸ್ಥಿತಿ ಮಾದರಿಯಲ್ಲಿ ಹಿಂದೂ, ಪ್ರತಿಪಕ್ಷಗಳ ದನಿ ಉಡುಗಿಸುವ ಪ್ರಯತ್ನ ಆಗುತ್ತಿದೆ. ಸರ್ಕಾರ ದ.ಕ. ಜಿಲ್ಲೆಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ತಮ್ಮದೇ ಅಧಿಕಾರ ನಡೆಯುತ್ತದೆ ಅಂದುಕೊಂಡಿದ್ದಾರೆ ಎಂದು ಆರೋಪಿಸಿದರು.ಕಾಂಗ್ರೆಸ್ ಸರ್ಕಾರ ಹಿಂದುತ್ವದ ಕೆಲಸ ಮಾಡುವವರ ಮೇಲೆ ದಬ್ಬಾಳಿಕೆ ನಿಲ್ಲಿಸಿ, ಇಲ್ಲದಿದ್ದಲ್ಲಿ ಬಿಜೆಪಿ ಜನಾಂದೋಲನ ಮಾಡಬೇಕಾಗುತ್ತದೆ, ಈ ಅಹಂಕಾರದ ದುರಾಡಳಿತ ಹೆಚ್ಚುದಿನ ನಡೆಯೋದಿಲ್ಲ ಎಂದವರು ಎಚ್ಚರಿಕೆ ನೀಡಿದರು.