ಬ್ಯಾಡಗಿ: ಪಟ್ಟಣದಲ್ಲಿ ಸಿಎನ್ಜಿ ಹಾಗೂ ಎಲ್ಪಿಜಿ ಬಂಕ್ಗಳನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿ ಪಟ್ಟದಲ್ಲಿನ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ, ನಂತರ ತಹಸೀಲ್ದಾರ್ಗೆ ಮನವಿ ಸಲ್ಲಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.ಪಟ್ಟಣದ ಗುಮ್ಮನಹಳ್ಳಿ ರಸ್ತೆಯಿಂದ ಆರಂಭವಾದ ಪ್ರತಿಭಟನೆ ಪಟ್ಟಣದ ಹಳೆ ಪುರಸಭೆ, ಮುಖ್ಯರಸ್ತೆ, ಸುಭಾಷ ಸರ್ಕಲ್ ಮೂಲಕ ತಹಸೀಲ್ದಾರ್ ಕಚೇರಿ ತಲುಪಿತು. ಈ ವೇಳೆ ಸುಭಾಷ ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸಮರ್ಪಕವಾಗಿ ಆಟೋಗಳಿಗೆ ಗ್ಯಾಸ್ ದೊರೆಯದಿರುವ ಬಗ್ಗೆ ಚಾಲಕರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.ಮನವಿ ಸಲ್ಲಿಸಿ ಮಾತನಾಡಿದ ಆಟೊ ಚಾಲಕರ ಸಂಘದ ಅಧ್ಯಕ್ಷ ರಾಜು ಬಸಾಪುರ “ಪಟ್ಟಣ ಸೇರಿದಂತೆ ತಾಲೂ ಕಿನಲ್ಲಿ ಸುಮಾರು 1800ಕ್ಕೂ ಹೆಚ್ಚು ಆಟೋಗಳು ಸಂಚರಿಸುತ್ತಿದ್ದು ಇವೆಲ್ಲವು ಸಿವಿಲ್ಜಿ ಹಾಗೂ ಎಲ್ಪಿಜಿ (ಗ್ಯಾಸ್ ) ಅವಲಂಬಿಸಿವೆ. ಆದರೆ ಪಟ್ಟಣದಲ್ಲಿ ಎರಡು ಬಂಕ್ ಇಲ್ಲದ ಕಾರಣ ಗ್ಯಾಸ್ ತುಂಬಿಸಲು ಮೋಟೆಬೆನ್ನೂರ, ಹಾವೇರಿ ಮತ್ತು ರಾಣಿಬೆನ್ನೂರ ಹಾಗೂ ಹೂಲಿಹಳ್ಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಇದರಿಂದ ದುಡಿಮೆಯ ಅರ್ಧ ಮೊತ್ತವನ್ನ ಓಡಾಡಲು ಖರ್ಚು ಮಾಡುವ ಅನಿವಾರ್ಯತೆ ಎದುರಾಗಿದೆ. ಇದಲ್ಲದೇ ಅಲ್ಲಿಯೂ ಸಮರ್ಪಕವಾದ ಸರಬರಾಜು ಇಲ್ಲದೇ ನಾವು ಪರಡಾಡುತ್ತಿದ್ದು ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸಿ ಎಲ್ಪಿಜಿ ಹಾಗೂ ಸಿಎನ್ಜಿ ಬಂಕ್” ಬ್ಯಾಡಗಿಯಲ್ಲಿ ತೆರೆಯಲು ಅನುಮತಿ ನೀಡುವಂತೆ ಆಗ್ರಹಿಸಿದರು.ಬದುಕು ಬೀದಿಗೆ: ಉಪಾಧ್ಯಕ್ಷ ಈರಣ್ಣ ಶಿಡೆನೂರ ಮಾತನಾಡಿ, “ರಾಜ್ಯ ಹಾಗೂ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರೊಟ್ಟಿಗೆ ಎಲ್ಪಿಜಿ ಹಾಗೂ ಸಿಎನ್ಜಿ ದರ ಸಹ ಹೆಚ್ಚಾಗಿದೆ. ನಾವುಗಳು ಮಾತ್ರ ಹಳೆಯ ಬಾಡಿಗೆ ಪಡೆಯುತ್ತಿದ್ದೇವೆ. ದರ ಹೆಚ್ಚಳ ಮಾಡಿದರೆ ನಮಗೆ ಅಂದು ಉಪವಾಸವೇ ಗತಿ, ಒಂದು ವೇಳೆ ಬ್ಯಾಡಗಿ ಪಟ್ಟಣದಲ್ಲಿಯೇ ಎರಡು ಬಂಕ್ ನಿರ್ಮಾಣವಾದಲ್ಲಿ ಅನುಕೂಲವಾಗಲಿದೆ” ಎಂದರು.ಕಾರ್ಯದರ್ಶಿ ಗಣೇಶ ವಡ್ಡರ ಮಾತನಾಡಿ, “ಪಟ್ಟಣದಲ್ಲಿ ಎಲ್.ಪಿ.ಜಿ ಹಾಗೂ ಸಿಎನ್ಜಿ ಬಂಕ್ ಇಲ್ಲದೇ ಇರುವ ಕಾರಣ ನಾವು ಅದನ್ನು ಅರಸಿ ದೂರ ಹೋಗಲೇಬೇಕಾದ ಅನಿವಾರ್ಯತೆ ಇದೆ. ಆದರೆ 12 ಕಿಲೋಮೀಟರ್ ಮೇಲೆ ನಾವು ಆಟೋ ಓಡಿಸಿದಲ್ಲಿ ಪೊಲೀಸರು ದಂಡ ಹಾಕುತ್ತಿದ್ದು, ಇದು ಆಟೋ ಚಾಲಕರಿಗೆ ಮತ್ತಷ್ಟು ಹೊರೆಯಾಗುತ್ತಿದೆ. ಇದರಿಂದ ಪ್ರತಿ ತಿಂಗಳು ಇಎಂಐ ಸಾಲವನ್ನು ತೀರಿಸಲು ಕಷ್ಟವಾಗುತ್ತಿದೆ. ಆದ್ದರಿಂದ ನಮ್ಮ ಅಳಲನ್ನ ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದರು.