ಮಂಗಳೂರು: ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಿರುವ ಕೆನರಾ ಎಂಜಿನಿಯರಿಂಗ್ ಕಾಲೇಜಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸ್ವಾಯತ್ತ ಸಂಸ್ಥೆಯ ಮಾನ್ಯತೆ ನೀಡಿದೆ. ಸ್ವಾಯತ್ತ ಸಂಸ್ಥೆಯ ಮಾನ್ಯತೆಯಿಂದ ಕಾಲೇಜು ತನ್ನದೇ ತಾಂತ್ರಿಕ ಪಠ್ಯವಸ್ತು, ಪರೀಕ್ಷೆ, ಫಲಿತಾಂಶ ನೀಡಲು ಸಾಧ್ಯವಾಗಲಿದೆ ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಎಂ.ರಂಗನಾಥ ಭಟ್ ತಿಳಿಸಿದರು.
ಮಂಗಳೂರಿನಲ್ಲಿ ಗುರುವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆನರಾ ಎಂಜಿನಿಯರಿಂಗ್ ಕಾಲೇಜು ರಜತ ಮಹೋತ್ಸವ ಸಂಭ್ರಮದ ಸಿದ್ಧತೆಯಲ್ಲಿರುವಾಗಲೇ ಈ ಸ್ಥಾನಮಾನ ಲಭಿಸಿರುವುದು ಹರ್ಷ ತಂದಿದೆ. ಶೈಕ್ಷಣಿಕ ಅನ್ವೇಷಣೆ, ಸರಳೀಕೃತ ದಕ್ಷತೆಯ ಹೊಸ ಅಧ್ಯಾಯ ಆರಂಭವಾಗಲಿದೆ. ಕಾಲೇಜಿನ ಸ್ವಾಯತ್ತ ಸ್ಥಾನಮಾನದಿಂದಾಗಿ ಇದೀಗ ವಿದ್ಯಾರ್ಥಿಗಳ ಪಠ್ಯದಲ್ಲಿ ಅನ್ವೇಷಣಾ ವಿಷಯಗಳು, ಕೈಗಾರಿಕಾ ಸ್ನೇಹಿ ಕೌಶಲಗಳು, ಉನ್ನತ ಶೈಕ್ಷಣಿಕ ಆಡಳಿತ ಸಾಧ್ಯವಾಗಲಿದ್ದು, ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಯ ಪರಂಪರೆ ಮತ್ತು ಮೂಲ ಆಶಯವನ್ನು ಇನ್ನಷ್ಟು ಬಲಗೊಳಿಸಿದಂತಾಗಿದೆ ಎಂದರು.ಪ್ರಸ್ತುತ ಕೆನರಾ ಎಂಜಿನಿಯರಿಂಗ್ ಕಾಲೇಜು ಏಳು ಯುಜಿ ಎಂಜಿನಿಯರಿಂಗ್ ಕೋರ್ಸುಗಳನ್ನು ನೀಡುತ್ತಿದೆ. ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮೆಶಿನ್ ಲರ್ನಿಂಗ್, ಇನ್ಫಾರ್ಮೆಶನ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಅಂಡ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಅಂಡ್ ಡಿಸೈನ್, ಕಂಪ್ಯೂಟರ್ ಸೈನ್ಸ್ ಅಂಡ್ ಬ್ಯುಸಿನೆಸ್ ಸಿಸ್ಟಮ್, ಮೆಕ್ಯಾನಿಕಲ್ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಕೋರ್ಸ್ಗಳಿವೆ ಎಂದರು.ಕಾಲೇಜು ನ್ಯಾಕ್ನಿಂದ ಎ ಗ್ರೇಡ್ ಮಾನ್ಯತೆ ಹೊಂದಿದೆ. ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ಕೋರ್ಸುಗಳು 2028ರ ಜೂ.30ರ ವರೆಗೆ ಎನ್ಬಿಎ ಮಾನ್ಯತೆ ಹೊಂದಿವೆ. ಕಾಲೇಜು ಐಎಸ್ಒ 9001:2015 ಮತ್ತು ಐಎಸ್ಒ 21001: 2018 ಪ್ರಮಾಣ ಪತ್ರವನ್ನೂ ಪಡೆದಿದೆ ಎಂದರು.ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಉಪಾಧ್ಯಕ್ಷ ಕೆ. ಸುರೇಶ್ ಕಾಮತ್, ಕೋಶಾಧಿಕಾರಿ ಎಂ. ಜಗನ್ನಾಥ ಕಾಮತ್, ಕೆನರಾ ವಿಕಾಸ್ ಸಮೂಹ ಸಂಸ್ಥೆಗಳ ಸಂಯೋಜಕ ಬಸ್ತಿ ಪುರುಷೋತ್ತಮ ಶೆಣೈ, ಪ್ರಮುಖರಾದ ಡಿ. ವಿಕ್ರಮ್ ಪೈ, ರಾಘವೇಂದ್ರ ಕುಡ್ವ, ಎಂ. ನರೇಶ್ ಶೆಣೈ, ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ನಾಗೇಶ್ ಎಚ್.ಆರ್. ಇದ್ದರು.ಶೇ.73ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉದ್ಯೋಗಸುಮಾರು 26 ಎಕರೆ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಕಾಲೇಜು ಪ್ರಸ್ತುತ 2,171 ವಿದ್ಯಾರ್ಥಿಗಳನ್ನು ಹೊಂದಿದ್ದು 126 ಬೋಧಕರ ಪೈಕಿ 30 ಮಂದಿ ಪಿಎಚ್ಡಿ ಪದವೀಧರರಿದ್ದಾರೆ. ಕೆನರಾ ಎಂಜಿನಿಯರಿಂಗ್ ಕಾಲೇಜು ತನ್ನ ಪ್ಲೇಸ್ಮೆಂಟ್ಗಾಗಿ ಖ್ಯಾತಿ ಹೊಂದಿದ್ದು 2024-25ರ ಸಾಲಿನಲ್ಲಿ 152 ಪ್ರತಿಷ್ಠಿತ ಕಂಪೆನಿಗಳ ಪ್ಲೇಸ್ಮೆಂಟ್ ಡ್ರೈವ್ ಮೂಲಕ ಶೇ.73ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ. 2024-25ರ ಸಾಲಿನಲ್ಲಿ ಶೇ.100 ಫಲಿತಾಂಶವನ್ನು ಪಡೆದಿದೆ. ಸುಸಜ್ಜಿತ ಲ್ಯಾಬ್ಗಳು, 705 ಕಂಪ್ಯೂಟಿಂಗ್ ಸಿಸ್ಟಂ, 600 ಎಂಬಿಪಿಎಸ್ ನೆಟ್ವರ್ಕ್, 2,000 ಆಸನಗಳ ಅಡಿಟೋರಿಯಂ, 200 ಕೆವಿ ಸೋಲಾರ್ ಛಾವಣಿ ಹೊಂದಿದೆ. ಸಮಗ್ರ ಹಾಸ್ಟೆಲ್ ಸೌಲಭ್ಯ, ಆರೋಗ್ಯ, ಸಾರಿಗೆ, ಕೌನ್ಸೆಲಿಂಗ್ ಸೌಲಭ್ಯಗಳನ್ನೂ ಒದಗಿಸುತ್ತಿದೆ ಎಂದು ಎಂ.ರಂಗನಾಥ ಭಟ್ ತಿಳಿಸಿದರು.