ವಿಬಿ ಜಿ ರಾಮ್ ಜಿ ಯೋಜನೆಯ ಸದುಪಯೋಗ ಪಡೆಯಿರಿ: ಶರಣಪ್ಪ ನರೇಗಲ್ಲ

KannadaprabhaNewsNetwork |  
Published : Aug 27, 2026, 02:45 AM IST
ಕುಂಟೋಜಿಯಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನದ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಗ್ರಾಪಂಗಳಲ್ಲಿ ಯೋಜನೆಯಡಿ ನಿರಂತರ ಕೆಲಸ ನೀಡಲಾಗುತ್ತಿದ್ದು, ಕಾಯಕ ಬಂಧುಗಳು ನಮೂನೆ ೬ ನೀಡಿ ಕೆಲಸ ಪಡೆಯಬೇಕು. ವೈಯಕ್ತಿಕ ಕಾಮಗಾರಿಗಳನ್ನು ರೈತರು ತಮ್ಮ ಜಮೀನುಗಳಲ್ಲಿ ಮಾಡಿಕೊಂಡು ಆರ್ಥಿಕವಾಗಿ ಸದೃಡರಾಗಬೇಕು.

ಗಜೇಂದ್ರಗಡ: ಗ್ರಾಮೀಣ ಭಾಗದ ರೈತರ, ಕೂಲಿಕಾರರ ಮತ್ತು ಜೀವನೋಪಾಯ ಚಟುವಟಿಕೆಗಳ ಮೂಲಕ ಆರ್ಥಿಕ ಸದೃಢಕ್ಕಾಗಿ ಜಾರಿಯಾದ ವಿಬಿ ಜಿ ರಾಮ್ ಜಿ ಯೋಜನೆಯಿಂದ ಗ್ರಾಮದ ಕೂಲಿಕಾರರ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿ ಎಂದು ತಾಪಂ ಸಹಾಯಕ ನಿರ್ದೇಶಕ ಶರಣಪ್ಪ ನರೇಗಲ್ಲ ಹೇಳಿದರು.

ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಐಇಸಿ ಚಟುವಟಿಕೆ ಕಾರ್ಯಕ್ರಮದಡಿ ಜಾಬ್ ಕಾರ್ಡ್ ಮೇಳ ಅಭಿಯಾನದ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಕಸಿತ ಬಾರತ ಗ್ಯಾರಂಟಿ ಫಾರ್ ರೋಜಗಾರ ಆ್ಯಂಡ್ ಆಜೀವಿಕ ಮಿಷನ್(ಗ್ರಾಮೀಣ) ಯೋಜನೆ ಜು. ೧ರಿಂದ ಪ್ರಾರಂಭವಾಗಿದ್ದು, ೩೧೮ ಕಾಮಗಾರಿಗಳನ್ನು ಆಳವಡಿಕೆ ಮಾಡಲಾಗಿದೆ. ಪ್ರತಿಯೊಬ್ಬ ಕೂಲಿಕಾರರಿಗೂ ₹೩೭೦ ಕೂಲಿ ಇತ್ತು. ಅದರ ಬದಲಾಗಿ ₹೩೮೨ ಕೂಲಿ ಮೊತ್ತ ಹೆಚ್ಚಿಸಲಾಗಿದೆ. ವರ್ಷಕ್ಕೆ ೧೨೫ ದಿನಗಳ ಕೆಲಸ ಸಿಗಲಿದೆ ಎಂದರು.

ಗ್ರಾಪಂಗಳಲ್ಲಿ ಯೋಜನೆಯಡಿ ನಿರಂತರ ಕೆಲಸ ನೀಡಲಾಗುತ್ತಿದ್ದು, ಕಾಯಕ ಬಂಧುಗಳು ನಮೂನೆ ೬ ನೀಡಿ ಕೆಲಸ ಪಡೆಯಬೇಕು. ವೈಯಕ್ತಿಕ ಕಾಮಗಾರಿಗಳನ್ನು ರೈತರು ತಮ್ಮ ಜಮೀನುಗಳಲ್ಲಿ ಮಾಡಿಕೊಂಡು ಆರ್ಥಿಕವಾಗಿ ಸದೃಡರಾಗಬೇಕು ಎಂದರು.

ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುತ್ತದೆ. ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಅಂತರ್ಜಲ ಮರುಪೂರಣ, ಜಲಮೂಲಗಳ ಪುನಶ್ಚೇತನ, ಜಲಾನಯನ ಪ್ರದೇಶದ ಅಭಿವೃದ್ಧಿ, ಅರಣ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಲ್ಲಿ ಗ್ರಾಮೀಣ ಭಾಗದ ರೈತರು ವೈಯಕ್ತಿಕ ಕಾಮಗಾರಿಗಳ ಮಾಡಿಕೊಳ್ಳಲು ವಿಶೇಷ ಆದ್ಯತೆ ನೀಡಲಾಗಿದೆ ಎಂದರು.

ಐಇಸಿ ಸಂಯೋಜಕ ಮಂಜುನಾಥ ಹಳ್ಳದ ಮಾತನಾಡಿ, ವಿಜಿ ಜಿ ರಾಮ್ ಜಿ ಯೋಜನೆಯಡಿಯಲ್ಲಿ ಆ. ೧೫ರಿಂದ ಸೆ. ೧೫ರ ವರೆಗೆ ಜಾಬ್ ಕಾರ್ಡ್ ಮೇಳ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಜಾಬ್ ಕಾರ್ಡ್ ಇಲ್ಲದವರು ಹೊಸ ಜಾಬ್ ಕಾರ್ಡ್ ಮಾಡಿಸಿಕೊಳ್ಳಬೇಕು. ಜಾಬ್ ಕಾರ್ಡ್ ತಿದ್ದುಪಡಿ ಇದ್ದರೆ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಇ ಕೆವೈಸಿ ಅಪ್ಡೇಟ್ ಮಾಡಿಸಲು ಅವಕಾಶ ನೀಡಲಾಗಿದೆ. ಗ್ರಾಪಂ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲ ಕೂಲಿಕಾರರು ಸಹಕರಿಸಬೇಕು ಎಂದರು.

ಈ ವೇಳೆ ಗ್ರಾಪಂ ಕಾರ್ಯದರ್ಶಿ ರಾಜು ಗಾರಗಿ, ಡಿಇಒ ಮುದಕಪ್ಪ ದೊಣೆಗುಡ್ಡ, ಜಿಕೆಎಂ ಅನ್ನಪೂರ್ಣ ಹಿರೇಮಠ ಸೇರಿದಂತೆ ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಾಸ ಸೌಹಾರ್ದ ಕೋ​ ಆಪರೇಟಿವ್ ಬ್ಯಾಂಕ್ ಶೇ. 16 ಡಿವಿಡೆಂಡ್ ಘೋಷಣೆ
ವಿಜಯನಗರ ಜಿಲ್ಲೆಯಲ್ಲಿ ಸಂಭ್ರಮದಿಂದ ಈದ್‌ ಮಿಲಾದ್‌ ಆಚರಣೆ