ಸಂಚಾರಿ ನಿಯಮಗಳ ಪಾಲಿಸಿ ಅಪಘಾತಗಳಿಂದ ಪಾರಾಗಿ

KannadaprabhaNewsNetwork | Published : Nov 25, 2024 1:03 AM

ಸಾರಾಂಶ

ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ಲಿಟ್ಲ ಪ್ಲವರ್ ಶಾಲೆಯಿಂದ ಹಮ್ಮಿಕೊಂಡಿದ್ದ ಸಂಚಾರಿ ನಿಯಮ ಜಾಗೃತಿ ಕುರಿತ ಜಾಥಾಕ್ಕೆ ಪಿಎಸ್‌ಐ ಧರೆಪ್ಪ ಬಾಳಪ್ಪ ದೊಡ್ಡಮನಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ರಸ್ತೆಯಲ್ಲಿ ನಡೆಯುವಾಗ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು, ಇಲ್ಲವಾದಲ್ಲಿ ಅಪಾಯಕ್ಕೆ ನಾವೇ ಆಹ್ವಾನ ಕೊಟ್ಟಂತಾಗುತ್ತದೆ. ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳು ರಸ್ತೆ ದಾಟುವಾಗ, ಬೈಸಿಕಲ್ ಮತ್ತು ದ್ವಿಚಕ್ರ ವಾಹನದಲ್ಲಿ ಚಲಿಸುವಾಗ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಪಾಯ ಕಟ್ಟಿಟ್ಟಬುತ್ತಿ. ಆದ್ದರಿಂದ ಅಪಘಾತದಿಂದ ರಕ್ಷಣೆ ಪಡೆಯಬೇಕೆಂದು ಪಿಎಸ್‌ಐ ಧರೆಪ್ಪ ಬಾಳಪ್ಪ ದೊಡ್ಡಮನಿ ತಿಳಿಸಿದರು.

ನಗರದ ಲಿಟ್ಲಪ್ಲವರ್ ಶಾಲೆಯ ಆಡಳಿತ ಮಂಡಳಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳು ಸಂಚಾರಿ ನಿಯಮಗಳ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಾತ್ಯಕ್ಷತೆಯೊಂದಿಗೆ ವಿದ್ಯಾರ್ಥಿಗಳಿಗೆ ಅಪಘಾತಗಳ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ವಿಶೇಷವಾಗಿ ದ್ವಿಚಕ್ರ ವಾಹನಗಳಲ್ಲಿ ಚಲಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ವಾಹನವನ್ನು ರಸ್ತೆಯ ತಿರುವಿನಲ್ಲಿ ಚಲಾಯಿಸುವಾಗ ಇತರೆ ವಾಹನಗಳ ಬಗ್ಗೆ ಗಮನಹರಿಸಬೇಕು. ಕೆಲವು ಸಂದರ್ಭಗಳಲ್ಲಿ ಅಪಘಾತಗಳು ನಮ್ಮಿಂದ ಆಗುವ ತಪ್ಪುಗಳಿಂದ ಹೆಚ್ಚಾಗುತ್ತವೆ. ನಾವೆಲ್ಲರೂ ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದಲ್ಲಿ ಮಾತ್ರ ರಕ್ಷಣೆ ದೊರೆಯುತ್ತದೆ. ಅದೇ ರೀತಿ ಸರ್ಕಾರಕ್ಕೆ ದಂಡ ಪಾವತಿ ಮಾಡುವುದು ತಪ್ಪುತ್ತದೆ ಎಂದರು.

ಆಡಳಿತಮಂಡಳಿ ನಿರ್ದೇಶಕ ಎಂ.ಸಂತೋಷ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಗೆ ಬರುವ ಆತುರದಲ್ಲಿ ನಿಯಮಗಳ ಉಲ್ಲಂಘನೆ ಆಗುವುದು ಸ್ವಾಭಾವಿಕ. ನಿಯಮ ಉಲ್ಲಂಘಿಸಿದರೆ ಅಪಾಯವೂ ಸಹ ನಮ್ಮ ಬೆನ್ನಹಿಂದೆ ಇರುತ್ತದೆ. ಆದ್ದರಿಂದ ಜಾಗ್ರತೆ ವಹಿಸಬೇಕು. ಪೊಲೀಸ್ ಇಲಾಖೆ ನೀಡಿದ ಸಂಚಾರಿ ನಿಯಮ ಮಾಹಿತಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಆಡಳಿತಮಂಡಳಿ ನಿರ್ದೇಶಕರಾದ ಮಂಜುನಾಥರೆಡ್ಡಿ, ರೇಖಾ, ನಟರಾಜು, ಮುಖ್ಯ ಶಿಕ್ಷಕಿ ಪಿ.ಮಮತ, ಎನ್.ಮಂಜುನಾಥ, ಶಿಕ್ಷಕರಾದ ತಿಪ್ಪೇಸ್ವಾಮಿ, ಅಭಿಲಾಷ್, ಜಯಪ್ರಕಾಶ್, ಕಾವ್ಯ, ಮಹಂತೇಶ್, ಮಹಾಲಕ್ಷ್ಮೀ, ಹನುಮಂತರಾಯ, ಲಕ್ಷ್ಮೀ, ಯಶಸ್ವಿನಿ, ಭಾರತಿ, ವಿ.ಕಮಲ, ಗೌತಮಿ, ರಾಧ, ಲಲಿತಮ್ಮ, ಕಿರಣ್‌ಕುಮಾರ್ ಮುಂತಾದವರು ಭಾಗವಹಿಸಿದ್ದರು.

Share this article