ಶಿಗ್ಗಾಂವಿ: ಮನುಷ್ಯನ ಬುದ್ಧಿಮಟ್ಟವು ಪರಿಸರ ಸಂರಕ್ಷಣೆಗೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು ಎಂದು ಅಪರ ಜಿಲ್ಲಾಧಿಕಾರಿ ನಾಗರಾಜ್ ಎಲ್. ತಿಳಿಸಿದರು.ಗುರುವಾರ ತಾಲೂಕಿನ ಗಂಗೆಬಾವಿಯ ಕೆಎಸ್ಆರ್ಪಿ ೧೦ನೇ ಪಡೆಯ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೈಕ್ರೋ ಪ್ಲಾಸ್ಟಿಕ್ ಪರಿಸರವಾದಿಗಳಿಗೆ ಬಹಳಷ್ಟು ತಲೆಬಿಸಿ ಮಾಡಿದೆ. ಕ್ಯಾನ್ಸರ್ಕಾರಕ ವಸ್ತು ಅದರಿಂದ ಹೆಚ್ಚಾಗುತ್ತಿದೆ. ಅದನ್ನು ತಡೆಯಲು ನಮ್ಮಲ್ಲಿ ಇಂದಿಗೂ ಪರಿಹಾರ ಇಲ್ಲವಾಗಿದೆ. ಪ್ಲಾಸ್ಟಿಕ್ ಬಳಕೆ ವಿಚಾರದಲ್ಲಿ ಕಠಿಣ ಕ್ರಮಗಳನ್ನು ಅನುಸರಿಸಬೇಕಿದೆ. ಅಂದಾಗ ಪರಿಸರದ ಹಾನಿ ತಡೆಯಬಹುದು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಬಾರದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೆಎಸ್ಆರ್ಪಿ ೧೦ನೇ ಪಡೆಯ ಕಮಾಂಡೆಂಟ್ ಎನ್.ಬಿ. ಮೆಳ್ಳೆಗಟ್ಟಿ ಮಾತನಾಡಿ, ಮನುಷ್ಯನ ಬುದ್ಧಿಮಟ್ಟ ಬೆಳೆದ ಹಾಗೆ ಕೇಂದ್ರಿಕೃತ ಮನುಷ್ಯವಾಗಿ ಬಿಟ್ಟಿದ್ದಾನೆ. ಪರಿಸರ ಸಮತೋಲನಕ್ಕೆ ಬಹಳಷ್ಟು ಜೀವಿಗಳು ಅನುಕೂಲಕರವಾಗಿವೆ. ಆದರೆ ಮನುಷ್ಯ ಜೀವಿ ಪರಿಸರವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಪರಿಸರ ನಾಶಕ್ಕೆ ಕಾರಣವಾಗಿ ತನ್ನ ನಾಶಕ್ಕೆ ಕಾರಣ ಮಾಡಿಕೊಳ್ಳುತ್ತಿದ್ದಾನೆ. ಅಗತ್ಯಕ್ಕೆ ತಕ್ಕಂತೆ ಪ್ಲಾಸ್ಟಿಕ್ ಬಳಸಬೇಕು. ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್ ಬಳಸುತ್ತಿರುವುದರಿಂದ ಪರಿಸರಕ್ಕೆ ಅಡ್ಡ ಪರಿಣಾಮ ಬೀರುವಂತಾಗಿದೆ ಎಂದರು.ದುಂಡಶಿ ವಲಯ ಅರಣ್ಯಾಧಿಕಾರಿ ರವಿ ಪುರಾಣಿಕಮಠ ಮಾತನಾಡಿ, ವಾಯುಮಾಲಿನ್ಯ, ಜಲಮಾಲಿನ್ಯ ಹೆಚ್ಚುತ್ತಿದೆ. ಇದರಿಂದ ಪ್ರಕೃತಿಯಲ್ಲಿ ವ್ಯತ್ಯಾಸ ಕಾಣುತ್ತಿದ್ದೇವೆ. ಪರಿಸರದ ಕಾಳಜಿ ವಹಿಸಿ ಪ್ರತಿಯೊಬ್ಬರೂ ಆಸಕ್ತಿ ವಹಿಸಿ ಗಿಡಮರಗಳನ್ನು ನೆಡಬೇಕು ಎಂದರು.ಈ ಸಂದರ್ಭದಲ್ಲಿ ಡೆಪ್ಯೂಟಿ ಕಮಾಂಡೆಂಟ್ ಮಂಜಪ್ಪ ಕೋಟಿಯಾಲ, ಸಹಾಯಕ ಕಮಾಂಡೆಂಟ್ ಸುಲೇಮಾನ್ ಹಂಚಿನಮನಿ, ಶಾಲೆಯ ಪ್ರಾಚಾರ್ಯ ಎಸ್.ಬಿ. ನೀರಲಗಿ ಸೇರಿದಂತೆ ಶಾಲೆಯ ಶಿಕ್ಷಕರು, ೧೦ನೇ ಪಡೆಯ ಪೊಲೀಸರು, ವಿದ್ಯಾರ್ಥಿಗಳು ಇದ್ದರು.ಗಿಡ- ಮರ ಹೆಚ್ಚಾದರ ಮಳೆ ಸಮೃದ್ಧಿ
ರಾಣಿಬೆನ್ನೂರು: ನಶಿಸಿ ಹೋಗುತ್ತಿರುವ ಅರಣ್ಯ ಸಂಪತ್ತನ್ನು ಪುನರ್ ಸ್ಥಾಪಿಸುವ ಮೂಲಕ ಜೀವ ಜಗತ್ತಿನ ರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಮ್ಮ ಗೋಣೆಮಠ ತಿಳಿಸಿದರು.ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಸದ್ಗುರು ಶಿವಾನಂದ ಸಂಯುಕ್ತ ಪಪೂ ಕಾಲೇಜಿನ ಆವರಣದಲ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನದ ಪ್ರಯುಕ್ತ ಸಸಿ ನೆಟ್ಟು ಮಾತನಾಡಿದರು.ಮರ- ಗಿಡಗಳು ಹೆಚ್ಚಾದರೆ ಮಳೆ ಸಮೃದ್ಧಿಯಾಗಿ ಬರುತ್ತದೆ. ಪ್ರಕೃತಿಯನ್ನು ಸಂರಕ್ಷಣೆ ಮಾಡಿದರೆ ಪ್ರಕೃತಿ ನಮ್ಮನ್ನು ಕಾಪಾಡುತ್ತದೆ ಎಂದರು.ಗ್ರಾಪಂ ಅಭಿವೃದ್ಧಿ ಅಧಿಕಾರಿ ವೆಂಕಟೇಶ ಉಕ್ಕಡಗಾತ್ರಿ ಮಾತನಾಡಿ, ಪ್ರತಿಯೊಬ್ಬರೂ ಆಮ್ಲಜನಕ ಪಡೆಯಬೇಕಾದರೆ ಮರ- ಗಿಡಗಳು ಬೇಕೆ ಬೇಕು. ಹಸಿರೆ ಉಸಿರಾಗಿದ್ದು, ಪ್ರತಿಯೊಬ್ಬರೂ ತಮ್ಮ ಮನೆ, ಹೊಲಗಳಲ್ಲಿ ಸಸಿಗಳನ್ನು ಬೆಳೆಸಬೇಕು ಎಂದರು.ಜಿಲ್ಲಾ ಎನ್ನೆಸ್ಸೆಸ್ ನೋಡಲ್ ಅಧಿಕಾರಿ ಎಚ್. ಶಿವಾನಂದ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಭರಮಗೌಡ ಕುಡುಪಲಿ ಸದಸ್ಯರಾದ ಬಸವಣ್ಣೆಪ್ಪ ನೊಟದ, ಲೋಕೇಶ ಹಾಲಿವಾಣದ, ಸುನಿತಾ ಕುಡುಪಲಿ, ಮಲ್ಲೇಶಪ್ಪ ಹೂರಗಿ, ಶಂಕ್ರಗೌಡ ಪೊಲೀಸಗೌಡ್ರ, ಉಪನ್ಯಾಸಕರಾದ ಸಂತೋಷ ಅಂಗಡಿ, ಶಿದ್ರಾಮಗೌಡ ಪಾಟೀಲ, ಶಿಕ್ಷಕರಾದ ಚಂದ್ರಶೇಖರ ಎಚ್.ಎಂ., ರವಿ ಕೆ.ಎಸ್., ಶಿವಮೂರ್ತಯ್ಯ ಎಚ್.ಎಂ., ಪ್ರಕಾಶ ಸಿ., ಕವಿತಾ ಪುಟ್ಟನಗೌಡ್ರ, ಶಾಂತವ್ವ ಹಲಗಣ್ಣನವರ, ಆರ್. ಪ್ರವೀಣಕುಮಾರ, ಜಗದೀಶ ಭಜಂತ್ರಿ, ಈರಪ್ಪ ಅಂಗಡಿ ಮತ್ತಿತರರಿದ್ದರು.