ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಸಂವಿಧಾನ ಉಳಿಸಿ ಜಾಗೃತಿಜಾಥಾ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಎಸ್.ಕೆ.ಪೋತಿ, ನಾವು ನಮ್ಮ ಸಂವಿಧಾನವನ್ನು ಒಪ್ಪಿ ೭೫ ವರ್ಷ ಗಳು ಕಳೆದಿದ್ದು, ಇಂದಿಗೂ ಸಹ ನಮ್ಮ ಎಲ್ಲಾ ಆಡಳಿತದ ಸಂವಿಧಾನದ ಮೂಲಕವೇ ನಡೆಯುತ್ತಿದೆ. ಆದರೆ, ಇತ್ತೀಚೆಗೆ ಕೆಲವು ಶಕ್ತಿಗಳು ಸಂವಿಧಾನವನ್ನು ಬದ ಲಾಯಿಸುವ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂವಿಧಾನ ಉಳಿಸಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಉಪನ್ಯಾಸಕ ಅರುಣ್ ಜೋಳದ ಕೂಡ್ಲಿಗಿ ಭಾರತದ ಸಂವಿಧಾನ ವಿಶ್ವಮನ್ನಣೆ ಪಡೆದಿದೆ. ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ ಮತ್ತು ತಂಡ ಸಂವಿಧಾನ ರಚಿಸುವ ಸಂದರ್ಭದಲ್ಲಿ ದೇಶದ ಹಿತ, ಭದ್ರತೆ, ಜನಕಲ್ಯಾಣ ಸೇರಿದಂತೆ ಹಲವಾರು ವಿಷಯಗಳ ಮಾನದಂಡದಲ್ಲಿ ಸಂವಿಧಾನ ರಚಿಸಲಾಗಿದೆ. ದೇಶದ ನೂರಾರು ಜಾತಿ, ಧರ್ಮಗಳಲ್ಲಿ ಸಮನ್ವಯತೆಯನ್ನು ಕಾಣಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದೆ. ಸಂವಿಧಾನ ಇಂದು ಸಮಾಜದ ಎಲ್ಲರ ಮನದಲ್ಲಿ ಆಳವಾಗಿ ಬೇರೂರಿದೆ. ಇಂತಹ ಸಂವಿಧಾನವನ್ನು ಬದಲಾವಣೆ ಮಾಡುವ ಬಗ್ಗೆ ಚರ್ಚಿಸುವ ದುಷ್ಟಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹಾಗೂ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಡಿ.ಮಂಜುನಾಥ ಮಾತನಾಡಿ, ಸಂವಿಧಾನ ಜಾಗೃತಿಜಾಥಾ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಸಂವಿಧಾನ ನಮಗೆ ಎಲ್ಲವನ್ನೂ ನೀಡಿದೆ. ಸಂವಿಧಾನವಿಲ್ಲದಿದ್ದರೆ, ನಮ್ಮೆಲ್ಲರ ಬದುಕು ಅಸ್ಥಿರತೆಯ ಗೂಡಾಗುತ್ತಿತ್ತು. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಕಾರ್ಯನಿರ್ವಹಿಸುವುದೇ ಸಂವಿಧಾನದ ಆಧಾರದ ಮೇಲೆ ಎಂದರು.