ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ನಿವಾಸದಲ್ಲಿ ಸಚಿವರಿಗೆ, ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ರಿಗೆ ಸಂಘದ ಮುಖಂಡರು ಮನವಿ ಅರ್ಪಿಸಿ, ಹರಿಹರ ತಾಲೂಕಿನ ಕೊಮಾರನಹಳ್ಳಿ ಹಾಗೂ ಕೊಪ್ಪ ಭಾಗದ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ರೈತ ಮುಖಂಡರು, ಮಲೆಬೆನ್ನೂರು ಹೋಬಳಿಯ ಕುಮಾರನಹಳ್ಳಿ ರಿ.ಸ.ನಂ.44ರಲ್ಲಿ ಗೋಮಾಳ ಸರ್ಕಾರಿ ಜಮೀನು 34.25 ಎಕರೆ, ರಿ.ಸ.ನಂ.59ರಲ್ಲಿ ಸರ್ಕಾರಿ ಗುಡ್ಡ 74.33 ಎಕರೆ, ರಿ.ಸ.ನಂ.61ರಲ್ಲಿ ಮುಫ್ಪತ್ ಗೋಮಾಳ 142.37 ಗುಂಟೆ, ಕೊಪ್ಪ ಗ್ರಾಮದ ರಿ.ಸ.ನಂ.30ರಲ್ಲಿ ಹುಲ್ಲು ಬನ್ನಿ ಖರಾಬು ಜಮೀನು 281.21 ಎಕರೆ ಸರ್ಕಾರಿ ದಾಖಲೆಯಲ್ಲಿರುತ್ತದೆ ಎಂದರು.ಕೊಮಾರನಹಳ್ಳಿ, ಕೊಪ್ಪದಲ್ಲಿ ಸಾಕಷ್ಟು ಬಡ ರೈತರು 3-4 ದಶಕದಿಂದ ಫಾರಂ-50, 53, 57 ಅರ್ಜಿ ಸಲ್ಲಿಸಿದ್ದಾರೆ. ಆದರೆ, ಒಂದು ಗ್ರಾಮದಲ್ಲಿ 100 ಜಾನುವಾರುಗಳಿದ್ದರೆ 30 ಎಕರೆ ಜಮೀನನ್ನು ಬಿಡಬೇಕಾಗುತ್ತದೆ. ಕೊಮಾರನಹಳ್ಳಿಯಲ್ಲಿ 252.15 ಗುಂಟೆ ಜಮೀನಿದೆ. ಆದರೆ, 75 ಎಕರೆ ಜಮೀನನ್ನು ಜಾನುವಾರುಗಳಿಗಿಟ್ಟರೆ 252.15 ಗುಂಟೆ ಜಮೀನಿನಲ್ಲಿ 30 ಎಕರೆ ಜಮೀನು ತೆಗೆದರೆ, 177.15 ಗುಂಟೆ ಜಮೀನು ಉಳಿಯುತ್ತದೆ ಎಂದು ತಿಳಿಸಿದರು.
ಪಶು ಸಂಗೋಪನಾ ಇಲಾಖೆ ವರದಿಯನ್ವಯ 232 ದನಗಳಿದ್ದು, 75 ಎಕರೆ ಜಮೀನು ತೆಗೆದರೆ 206.20 ಎಕರೆ ಜಮೀನು ಸರ್ಕಾರಕ್ಕೆ ಉಳಿಯುತ್ತದೆ. ಈಗಾಗಲೇ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಫಲಾನುಭವಿಗೆ ಹಕ್ಕುಪತ್ರ ನೀಡಿದರೆ, ಇನ್ನೂ ಸಾಕಷ್ಟು ಸರ್ಕಾರಿ ಜಮೀನು ಸರ್ಕಾರದ ಬಳಿ ಉಳಿಯಲಿದೆ. ಈ ಹಿಂದಿನ ಸರ್ಕಾರದ ಬಗರ್ ಹುಕುಂ ಸಮಿತಿಯ್ಲಿ ನಿರ್ಣಯವು ಸಹ ಆಗಿರುತ್ತದೆ. ಜಿಲ್ಲಾ ಸಚಿವರು, ಜಿಲ್ಲಾಧಿಕಾರಿ ಪ್ರತ್ಯಕ್ಷ ಹಾಗೂ ಪ್ರಾಮಾಣಿಕವಾಗಿ ಸ್ಥಳ ತನಿಖೆ ಮಾಡಿಸಿ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು. ಸರ್ಕಾರದ ಪಹಣಿಗಳು, ಪಶು ಸಂಗೋಪನಾ ಇಲಾಖೆ ವರದಿ ಸಮೇತ ತಾವು ಅರ್ಜಿ ಸಲ್ಲಿಸುತ್ತಿದ್ದು, ಸಾಗುವಳಿದಾರರಿಗೆ ಪ್ರಥಮಾದ್ಯತೆ ಮೇಲೆ ಹಕ್ಕು ಪತ್ರ ನೀಡುವಂತೆ ಮನವಿ ಮಾಡಿದರು.
ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ, ಕುಮಾರನಹಳ್ಳಿ ಆರ್.ಮಂಜುನಾಥ, ಕೋಗಳಿ ಪಿ.ಮಂಜುನಾತ, ಪ್ರಕಾಶ, ಫೈಜುಲ್ಲಾ, ಕೊಮಾರನಹಳ್ಳಿ ಮಂಜುನಾಥ, ರೇವಣಸಿದ್ದಪ್ಪ, ಗಂಗಪ್ಪ, ರಂಗನಾಥ, ಮಂಜುನಾಥ, ಸಂಗಪ್ಪ, ಮಲ್ಲೇಶಪ್ಪ ಇತರರಿದ್ದರು.