ವಿವಿಧ ತಾಲೂಕುಗಳ ಉಪನೋಂದಣಾ ಕಚೇರಿಗಳಲ್ಲಿ ಅಧಿಕೃತ ಪತ್ರ ಬರಹಗಾರರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ
ಯಲಬುರ್ಗಾ: ನೋಂದಣಿ ನಿಯಮಗಳನ್ವಯ ಅಧಿಕೃತ ಪರವಾನಗಿ ಇಲ್ಲದೇ ನೋಂದಣಿಗೆ ಸಂಬಂಧಿಸಿದ ಅನಧಿಕೃತ ಪತ್ರ ತಯಾರಿಸಿ ನೋಂದಾಯಿಸುತ್ತಿರುವ ಏಜೆಂಟರ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ತಾಲೂಕು ದಸ್ತಾವೇಜು ಬರಹಗಾರರ ಸಂಘದಿಂದ ಇತ್ತೀಚೆಗೆ ಪಟ್ಟಣದ ಉಪನೋಂದಣಾಧಿಕಾರಿ ಯಾಸಿನ್ಸಾಬ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಲಾಯಿತು.
ವಿವಿಧ ತಾಲೂಕುಗಳ ಉಪನೋಂದಣಾ ಕಚೇರಿಗಳಲ್ಲಿ ಅಧಿಕೃತ ಪತ್ರ ಬರಹಗಾರರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಜಿಲ್ಲಾ ನೋಂದಣಾಧಿಕಾರಿಗಳಿಂದ ಅಧಿಕೃತ ಪರವಾನಗಿ ಪಡೆದಿರುವುದಲ್ಲದೆ ಸರ್ಕಾರಕ್ಕೆ ಲೈಸನ್ಸ್ ನವೀಕರಣ ಶುಲ್ಕ ಪಾವತಿಸಿ ನಿಯಮಾನುಸಾರ ಪರವಾನಗಿ ನವೀಕರಿಸಿಕೊಳ್ಳುತ್ತಿದ್ದೇವೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ನೀಡುತ್ತಿರುವ ನಿರ್ದೇಶನ ಪಾಲಿಸುತ್ತಾ ಕಾನೂನು ನಿಯಮಾನುಸಾರ ಸಾರ್ವಜನಿಕರಿಗೆ ದಸ್ತಾವೇಜು ಬರೆಯುವ ಕೆಲಸ ಮಾಡಲಾಗುತ್ತಿದೆ. ೨೦೦೩ರಲ್ಲಿ ಛಾಪಾ ಕಾಗದ ರದ್ದಾಗಿದ್ದರಿಂದ ಸ್ಟಾಂಪ್ವೆಂಡರ್ ವೃತ್ತಿಯನ್ನೇ ಅವಲಂಬಿಸಿದ ನಮ್ಮಲ್ಲಿಯ ಬಹುತೇಕ ಸ್ಟಾಂಪ್ ವೆಂಡರ್ಗಳಿಗೂ ಕೂಡ ಉದ್ಯೋಗ ಒದಗಿಸುವ ಉದ್ದೇಶದಿಂದ ಪತ್ರ ಬರಹಗಾರರ ಲೈಸನ್ಸ್ಗಳನ್ನು ನೀಡಿದೆ. ಸರ್ಕಾರ ನೂತನ ಕಾವೇರಿ-೦೨ಯೋಜನೆ ಜಾರಿಗೆ ತಂದಿದ್ದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಆದರೆ ಎಲ್ಲ ತಾಲೂಕುಗಳಲ್ಲಿನ ಸೈಬರ್ ಸೆಂಟರ್, ಡಿಟಿಪಿ ಕೇಂದ್ರಗಳಲ್ಲಿ ಪತ್ರ ಬರಹಗಾರರ ಲೈಸನ್ಸ್ ಹೊಂದಿರದ ಅನಧಿಕೃತ ವ್ಯಕ್ತಿಗಳು ದಸ್ತಾವೇಜು ಆನ್ಲೈನ್ ಮೂಲಕ ಸಲ್ಲಿಸುವುದಾಗಿ ಹೇಳಿ, ತಾವೇ ದಸ್ತಾವೇಜುಗಳನ್ನು ಡ್ರಾಫ್ಟ್ ಮಾಡುತ್ತಿದ್ದಾರೆ. ಇದರಿಂದ ನಮ್ಮ ವೃತ್ತಿ ಜೀವನಕ್ಕೆ ಪೆಟ್ಟು ಬೀಳುವುದಲ್ಲದೇ ಸಾರ್ವಜನಿಕರಿಗೆ ಅನಧಿಕೃತ ವ್ಯಕ್ತಿಗಳಿಂದ ದಸ್ತಾವೇಜು ತಯಾರಿಸಿ ಕೊಟ್ಟಂತಾಗುತ್ತದೆ. ದಸ್ತಾವೇಜು ಕಾನೂನಾತ್ಮಕವಾಗಿ ಜಾರಿಗೊಳ್ಳುವಿಕೆ, ನಿಖರತೆ ದಸ್ತಾವೇಜುಗಳಲ್ಲಿ ಒಳಗೊಂಡ ಪಕ್ಷಗಾರರ ಹಕ್ಕುಗಳು ರಕ್ಷಿಸುವಿಕೆ ಖಚಿತಗೊಳಿಸಿಕೊಳ್ಳಬೇಕಾಗಿರುವುದರಿಂದ ದಸ್ತಾವೇಜುಗಳನ್ನು ಬರೆಯುವುದು, ರಚಿಸುವುದು ಬಹುಮುಖ್ಯ ಪಾತ್ರ ವಹಿಸುತ್ತದೆ. ಕಾನೂನು ಪದವಿ ಪಡೆಯದವರು ಹಾಗೂ ಅಧಿಕೃತ ಪರವಾನಗಿ ಪಡೆಯದವರು ಡಿಟಿಪಿ ಕೇಂದ್ರಗಳಲ್ಲಿ ಅನಧಿಕೃತ ದಸ್ತಾವೇಜು ತಯಾರಿಸುವುದು ನೋಂದಣಿ ಕಾಯ್ದೆ-೧೯೦೮ರನ್ವಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಈ ಕುರಿತು ಮೌಖಿಕವಾಗಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಈವರೆಗೆ ಅನಧಿಕೃತ ವ್ಯಕ್ತಿಗಳ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಇನ್ನಾದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೇಂದು ತಾಲೂಕು ದಸ್ತಾವೇಜು ಬರಹಗಾರರ ಸಂಘದ ಖಾಜಾವಲಿ ಅತ್ತಾರ, ನಜೀರ್ಸಾಬ್ ಹಿರೇಮನಿ, ಶರಣಬಸಪ್ಪ, ವೆಂಕಟೇಶ ಜಾಲಗಾರ, ಪರಶುರಾಮ ಹೊಸಮನಿ, ಉಸ್ಮಾನ್ಸಾಬ್ ಕೊಪ್ಪಳ ಸೇರಿದಂತೆ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.