ಗೋಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಲ್ಯಾವಕ್ಕಿ ಸಂತಸ ಕನ್ನಡಪ್ರಭ ವಾರ್ತೆ ಗಜೇಂದ್ರಗಡ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಗುರುತಿಸಿ ಪಂಚಾಯ್ತಿಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಿ ನಮ್ಮನ್ನು ಪ್ರೋತ್ಸಾಹಿಸಿರುವುದು ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ ಎಂದು ಗೋಗೇರಿ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಲ್ಯಾವಕ್ಕಿ ಹೇಳಿದರು. ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಗಾಂಧಿ ಪುರಸ್ಕಾರ ಪ್ರಶಸ್ತಿ ಪಡೆದ ಬಳಿಕ ನೀಡಿರುವ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗೋಗೇರಿ ಗ್ರಾಮದಲ್ಲಿ ಶಿಶುಪಾಲನಾ ಕೇಂದ್ರ ನಿರ್ವಹಣೆಯಲ್ಲಿ ರಾಜ್ಯಕ್ಕೆ ೫ನೇ ಸ್ಥಾನ, ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದ ತಾಲೂಕಿನ ಮೊದಲ ಗ್ರಾಮವಾಗಿರುವ ಗೋಗೇರಿ ಗ್ರಾಪಂ ಆಡಳಿತವು ಕಡತಗಳ ಕ್ರಮ ಬದ್ಧ ನಿರ್ವಹಣೆ ಜತೆಗೆ ಕರ ವಸೂಲಿಯಲ್ಲಿ ಮುಂದಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶದಿಂದ ಸರ್ಕಾರವು ₹ ೫ ಲಕ್ಷ ನಗದುಳ್ಳ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸಿರುವುದು ಸಂತಸ ತಂದಿದೆ ಎಂದಿರುವ ಅವರು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಎನ್ಆರ್ಜಿಯಲ್ಲಿ ಅತಿ ಹೆಚ್ಚು ಕೆಲಸಗಳನ್ನು ಸೃಷ್ಟಿಸುವುದರ ಜತೆಗೆ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿದ ಶ್ರೇಯ ಗೋಗೇರಿ ಗ್ರಾಪಂಗೆ ಲಭಿಸಿದೆ. ಗ್ರಾಮಸ್ಥರು ಸಕಾಲದಲ್ಲಿ ಹಾಕುವ ಅರ್ಜಿಗಳ ವಿಲೇವಾರಿ ಜತೆಗೆ ನಿಗದಿತ ಸಮಯಕ್ಕೆ ಸಭೆಗಳನ್ನು ನಡೆಸಿ ಗ್ರಾಪಂ ಆಡಳಿತ ಹೆಚ್ಚಿನ ಅಂಕಗಳನ್ನು ಗಳಿಸಿದೆ. ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಗ್ರಾಮಸ್ಥರಿಗೆ ತಿಳಿಸುವುದರ ಜತೆಗೆ ಬಾಪೂಜಿ ಸೇವಾ ಕೇಂದ್ರದಲ್ಲಿ ತಾಲೂಕಿನ ಉಳಿದ ಗ್ರಾಪಂಗಳಿಗಿಂತ ಹೆಚ್ಚು ಗೃಹ ಲಕ್ಷ್ಮೀ ಅರ್ಜಿಗಳನ್ನು ಫಲಾನುಭವಿಗಳಿಗೆ ದೊರಕಿಸಿರುವ ಅಧಿಕಾರಿಗಳು ಹಾಗೂ ಆಡಳಿತ ಪಂಚತಂತ್ರ ಸಾಫ್ಟವೇರ್ ಅನುಷ್ಠಾನ, ಜಲ್ಜೀವನ ಮಿಷನ್ ಕಾರ್ಯರೂಪಕ್ಕೆ ತರಲಾಗಿದೆ. ಕ್ರಮ ಬದ್ಧವಾಗಿ ದಾಖಲಾತಿಗಳ ನಿರ್ವಹಣೆ ಮತ್ತು ಕರ ವಸೂಲಿ ಮಾಡಿ ಅಭಿವೃದ್ಧಿಗೆ ವೇಗ ನೀಡಿದೆ. ಗ್ರಾಮದಲ್ಲಿನ ಶಿಶುಪಾಲನ ಕೇಂದ್ರದ ನಿರ್ವಹಣೆಯಲ್ಲಿ ರಾಜ್ಯಕ್ಕೆ ೫ನೇ ಸ್ಥಾನ ಪಡೆಯುವ ಮೂಲಕ ತಾಲೂಕಿಗೆ ಮುಂಚೂಣಿ ಸ್ಥಾನವನ್ನು ಕಾಯ್ದುಕೊಂಡಿದೆ. ಹೀಗಾಗಿ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರು ಗಾಂಧಿ ಪ್ರಶಸ್ತಿ ಪುರಸ್ಕಾರ ನೀಡಿ ಗೋಗೇರಿ ಗ್ರಾಪಂ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಗ್ರಾಪಂ ಉಪಾಧ್ಯಕ್ಷೆ ಅನಿತಾ ಕೊಡತಗೇರಿ, ಪಿಡಿಒ ಶರಣಪ್ಪ ನರೇಗಲ್ ಸಾಕ್ಷಿಯಾದರು. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶೀ ಪರ್ವೇಜ್ ಅಂಜುಮ್ ಸೇರಿ ಇತರ ಗಣ್ಯರ ಉಪಸ್ಥಿತಿಯಲ್ಲಿ ಗ್ರಾಪಂಗೆ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.