ಸೋಲಾಪುರ (ಜಯದೇವಿತಾಯಿ ಲಿಗಾಡೆ ಮಹಾದ್ವಾರ):
ಇದು ಕರ್ನಾಟಕ ವಿದ್ಯಾವರ್ಧಕ ಸಂಘವು ಸೋಲಾಪುರದಲ್ಲಿ ಆಯೋಜಿಸಿರುವ ಹೊರನಾಡ ಕನ್ನಡ ಸಂಘಗಳ 10ನೇ ಮೇಳದಲ್ಲಿ ಕನ್ನಡಕ್ಕೆ ಜಯದೇವಿ ತಾಯಿ ಲಿಗಾಡೆ ಕೊಡುಗೆ ಗೋಷ್ಠಿಯಲ್ಲಿ ಕೇಳಿ ಬಂದ ಒತ್ತಾಸೆ.
ಜಯದೇವಿ ತಾಯಿ ಲಿಗಾಡೆ ಮರಾಠಿ ಪ್ರಭಾವಿತ ಪ್ರದೇಶದಲ್ಲಿದ್ದರೂ ಕನ್ನಡದ ಮೇಲಿನ ಅಭಿಮಾನ ಅವರನ್ನು ಅಪ್ಪಟ ಕನ್ನಡತಿಯನ್ನಾಗಿಸಿದೆ. 1952ರಲ್ಲಿ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರೂ ಆಗಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ವಿಕಾಸಕ್ಕಾಗಿ ಸ್ಮರಣೀಯ ಸೇವೆ ಸಲ್ಲಿಸಿದ ಓರ್ವ ಮಹಿಳೆಯರಿಗೆ ಪ್ರತಿ ವರ್ಷ ಸಂಘವು ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಬೇಕೆಂದು ಗೋಷ್ಠಿಯಲ್ಲಿ ವಿದ್ಯಾವರ್ಧಕ ಸಂಘಕ್ಕೆ ಮನವಿ ಮಾಡಲಾಯಿತು.ಜತೆಗೆ ಜಯದೇವಿ ತಾಯಿ ಮುಂದಿನ ಪೀಳಿಗೆಗೆ ಸ್ಫೂರ್ತಿ ಆಗಲು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಸರ್ಕಾರಿ ಶಾಲೆಗಳಿಗೆ ಅವರ ಹೆಸರು ನಾಮಕರಣ ಮಾಡಲು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲು ಗೋಷ್ಠಿಯ ವಿಷಯ ಮಂಡನೆಕಾರರು ವಿದ್ಯಾವರ್ಧಕ ಸಂಘಕ್ಕೆ ಮನವಿ ಮಾಡಿದರು.
ಇದಕ್ಕೂ ಮುಂಚೆ ನಡೆದ ಮರಾಠಿ ಸಾಹಿತ್ಯಕ್ಕೆ ಬೇಂದ್ರೆಯವರ ಕೊಡುಗೆ ಗೋಷ್ಠಿಯಲ್ಲಿ ಶ್ರೀನಿವಾಸ ವಾಡಪ್ಪಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಗುರುಸಿದ್ದಯ್ಯಸ್ವಾಮಿ ವಿಷಯ ಮಂಡಿಸಿದರು. ಬೇಂದ್ರೆ ಅವರ ಮರಾಠಿ ಸಾಹಿತ್ಯ, ಅವರು ಕನ್ನಡಿಗರನ್ನು ನೋಡಿದ ದೃಷ್ಟಿಗೂ ಭಿನ್ನವಿದೆ. ಅವರು ಮರಾಠಿಯಲ್ಲಿ ಬಿಡಿ ಸನ್ಯಾಸಿಗಳಾಗಿ, ಕರ್ನಾಟಕದಲ್ಲಿ ಪೀಠಸ್ಥ ಯತಿಗಳಾಗಿದ್ದರು ಎಂದು ಆನಂದ ಝಂಜರವಾಡ ನುಡಿದರು. ಜಯದೇವಿ ತಾಯಿ ಲಿಗಾಡೆ ಅವರ ಸೊಸೆ ಮಧುಮಾಲಾ ಲಿಗಾಡೆ ಅಧ್ಯಕ್ಷತೆ ವಹಿಸಿದ್ದರು. ಗೋಷ್ಠಿಯನ್ನು ಡಾ. ಜಿನದತ್ತ ಹಡಗಲಿ ನಿರ್ವಹಿಸಿದರು. ಇದೇ ವೇಳೆ ಸೋಲಾಪುರದ ಕನ್ನಡ ಪತ್ರಕರ್ತರಾದ ಶಿವಾನಂದ ಗೋಗಾಂವ ಹಾಗೂ ರಮೇಶ ನಾಯಕ ಅವರನ್ನು ಸಂಘದ ಪರವಾಗಿ ಗೌರವಿಸಲಾಯಿತು.