ಪುರಸ್ಕಾರ ಪಡೆದ ಮಕ್ಕಳು ಪ್ರಮುಖ ಹುದ್ದೆಗಳಿಗೇರಲಿ

KannadaprabhaNewsNetwork | Published : Jun 5, 2025 1:16 AM
ಹೊಸದುರ್ಗ: ಪುರಸ್ಕಾರ ಪಡೆದ ಮಕ್ಕಳು ದೇಶದ ಪ್ರಮುಖ ಹುದ್ದೆಗಳ ಗುರಿ ಇಟ್ಟುಕೊಂಡು ತಮ್ಮ ಮುಂದಿನ ಶಿಕ್ಷಣವನ್ನು ಹೊಂದಬೇಕು ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಸಮಾಜ ನೀಡಲಿದೆ ಎಂದು ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್‌ ಹೇಳಿದರು.

ಹೊಸದುರ್ಗ: ಪುರಸ್ಕಾರ ಪಡೆದ ಮಕ್ಕಳು ದೇಶದ ಪ್ರಮುಖ ಹುದ್ದೆಗಳ ಗುರಿ ಇಟ್ಟುಕೊಂಡು ತಮ್ಮ ಮುಂದಿನ ಶಿಕ್ಷಣವನ್ನು ಹೊಂದಬೇಕು ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಸಮಾಜ ನೀಡಲಿದೆ ಎಂದು ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್‌ ಹೇಳಿದರು.

ಪಟ್ಟಣದ ಗುರು ಒಪ್ಪತ್ತಿನಸ್ವಾಮಿ ಮಠದ ಸಭಾಂಗಣದಲ್ಲಿ ನಡೆದ ತಾಲೂಕುಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಈ ಪುರಸ್ಕಾರ ಮಾಡುವುದು ಕೇವಲ ಸಾಂಕೇತಿಕ. ಸಮಾಜ ನಿಮ್ಮ ಪ್ರತಿಭೆಯನ್ನು ಗುರುತಿಸಿ ಗೌರವಿಸಿದೆ ಹಾಗೆಯೇ ನೀವು ಕೂಡ ಸಮಾಜವನ್ನು ಈ ದೇಶದ ಜನ ಗುರುತಿಸುವಂತೆ ಮಾಡಬೇಕು ಎಂದರು.

ಈ ಬಾರಿಯ ಕೇಂದ್ರದ ಲೋಕಸೇವಾ ಪರೀಕ್ಷೆಯಲ್ಲಿ ನಮ್ಮ ಸಮಾಜದ ಇಬ್ಬರು ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಕ್ಕಳು ಇಂತಹ ಪರೀಕ್ಷೆಗಳನ್ನು ತೇರ್ಗಡೆಯಾಗಬೇಕು. ಉನ್ನತ ಹುದ್ದೆಗಳಿಗೆ ನಮ್ಮ ಸಮಾಜದ ಮಕ್ಕಳು ಬರುವಂತಾಗಬೇಕು. ಬಡತನದ ಕಾರಣಕ್ಕಾಗಿ ಓದುವ ಮಕ್ಕಳು ಹಿಂದೆ ಸರಿಯುವುದು ಬೇಡ ಇಂತಹ ಮಕ್ಕಳ ಅಭ್ಯುದಯಕ್ಕಾಗಿ ನಮ್ಮ ಸಮಾಜದಲ್ಲಿ ಸಹಾಯ ಮಾಡುವಂತಹ ಜನರಿದ್ದಾರೆ, ಈ ಸಮಾಜ ನಿಮ್ಮ ಬೆಂಬಲಕ್ಕಿದೆ ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.

ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಆಯೋಜನೆ:

ಕಳೆದ 19 ವರ್ಷಗಳಿಂದ ನಾನಾ ಕಾರಣಗಳಿಗಾಗಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸ್ಥಗಿತಗೊಂಡಿದೆ. ಈ ಬಾರಿ ಅಕ್ಟೋಬರ್‌ನಲ್ಲಿ ರಾಜ್ಯ 20 ಜಿಲ್ಲೆಗಳಿಂದ ತಲಾ ಮೂವರು ದ್ವಿತೀಯ ಪಿಯುಸಿ ಹಾಗೂ ಮೂವರು ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಪುರಸ್ಕರಿಸಲಾಗುವುದು. ಈ ಸಂಬಂಧ ಪೂರ್ವಭಾವಿ ಸಭೆಯನ್ನು ಈ ವಾರದಲ್ಲಿ ಕರೆಯಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನುಶಂಕರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಕರು ಮಕ್ಕಳಿಗೆ ಶಿಕ್ಷಣದ ಜೋತೆಗೆ ಸಂಸ್ಕಾರವನ್ನು ನೀಡಬೇಕು. ಇಂದು ಶಿಕ್ಷಣವಂತರಿಂದಲೇ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳ ಹಾಗೂ ಪೋಷಕರ ನಡುವಿನ ಬಾಂಧವ್ಯ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಇತ್ತೀಚಿಗೆ ನಿವೃತ್ತಿ ಹೊಂದಿದ ಸಮಾಜದ ಶಿಕ್ಷಕರುಗಳಾದ ಜಗದೀಶ್‌ ಹಾಗೂ ಶಿವಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 13 ಜನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಲೂಕು ಘಟಕದ ಅಧ್ಯಕ್ಷ ದಯಾನಂದ ಅಧ್ಯಕ್ಷತೆ ವಹಿಸಿದ್ದರು.

ಹರಿಹರ ಮಠದ ದಾಸೋಹ ಸಮಿತಿ ಆಧ್ಯಕ್ಷ ಷಣ್ಮುಖಪ್ಪ, ತಾಲೂಕು ಘಟಕದ ಮಹಿಳಾ ಅಧ್ಯಕ್ಷೆ ಪುಷ್ಪಲತಾ, ಸಿದ್ದರಾಮಣ್ಣ ಮತ್ತಿತರರಿದ್ದರು.