ಕನ್ನಡಪ್ರಭ ವಾರ್ತೆ ಮಂಡ್ಯ ಜಿಲ್ಲಾಡಳಿತ, ಜಿಪಂ, ನೆಹರು ಯುವ ಕೇಂದ್ರ ನೀಡುವ 2021-22ನೇ ಸಾಲಿನ ಅತ್ಯುತ್ತಮ ಯುವ ಸಂಘ ಪ್ರಶಸ್ತಿಯನ್ನು ಮಂಡ್ಯ ತಾಲೂಕಿನ ಮಂಗಲ ಗ್ರಾಮದ ನೆಲದನಿ ಬಳಗಕ್ಕೆ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರದಾನ ಮಾಡಿದರು.
ನೆಲದನಿ ಬಳಗವು ದಶಕದಿಂದಲೂ ಮಂಡ್ಯ ಜಿಲ್ಲೆಯಾದ್ಯಂತ ಸಮಾಜಮುಖಿ ಸೇವೆ ಮಾಡುತ್ತಾ ಬಂದಿದೆ. ರಕ್ತದಾನ ಶಿಬಿರ, ಕಲೆ, ಸಾಹಿತ್ಯ, ರಂಗ ಚಟುವಟಿಕೆ, ಗ್ರಾಮೀಣ ಕ್ರೀಡಾಕೂಟ ರಾಜ್ಯಮಟ್ಟದಲ್ಲಿ ಮನ್ನಣೆ ಪಡೆದಿದೆ, ನಾಟಿ ಕೋಳಿ- ರಾಗಿಮುದ್ದೆ ಉಣ್ಣುವ ಸ್ಪರ್ಧೆ ಗಮನ ಸೆಳೆದಿದೆ. ಸತಿ-ಪತಿ, ಕುಟುಂಬ ಸಮೇತ ರಕ್ತದಾನ ಮಾಡುತ್ತಾ ರಕ್ತದಾನಕ್ಕೆ ಬಳಗದ ಸದಸ್ಯರು ಜಾಗೃತಿ ಮೂಡಿಸುತ್ತಿದೆ. ಸಸಿಗಳ ವಿತರಣೆ ಸೇರಿದಂತೆ ಪರಿಸರ ಜಾಗೃತಿ ಮೂಡಿಸುತ್ತಿದೆ.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಪ್ರಾದೇಶಿಕ ಎನ್.ವೈ.ಕೆ ಅಧಿಕಾರಿ ಎಂ.ಎನ್. ನಟರಾಜು, ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಕೆ.ರಾಜೇಶ್ ಕಾರಂತ, ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಓಂ ಪ್ರಕಾಶ್, ಮಹಿಳಾ ಸರ್ಕಾರಿ ಕಾಲೇಜು ಪ್ರಾಂಶುಪಾಲರಾದ ಹೇಮಾಲತಾ, ಡಾ.ಕೆಂಪಮ್ಮ, ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ, ಉಪಾಧ್ಯಕ್ಷ ಪ್ರತಾಪ್, ಸುನೀತಾ, ಮುಖಂಡರಾದ ಕುಮಾರ್ ಗೌಡ ಎಂ.ಸಿ, ಮಹದೇವಸ್ವಾಮಿ, ಶಿವಮಲ್ಲು, ರಕ್ಷಿತ್ ರಾಜ್, ಬಿ.ರಾಜ್, ಟಿ.ಡಿ.ನಾಗರಾಜು, ಬೇಲೂರು ಸೋಮಶೇಖರ್ ಹಾಗೂ ಕೆ.ಪಿ.ಅರುಣಕುಮಾರಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.