ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಗೆ ‘ಸ್ವರ್ಣ ಸಾಧನಾ ಪ್ರಶಸ್ತಿ’ ಪ್ರದಾನ

KannadaprabhaNewsNetwork |  
Published : May 05, 2024, 02:01 AM IST
ಫೊಟೋ:೪ಪಿಟಿಆರ್-ಪ್ರಶಸ್ತಿಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ ಸ್ವರ್ಣ ಸಾಧನಾ ಪ್ರಶಸ್ತಿ ಪ್ರಧಾನ ಮಾಡಲಾಯಿತು | Kannada Prabha

ಸಾರಾಂಶ

ಪುತ್ತೂರಿನ ಜೈನ ಭವನದಲ್ಲಿ ಮೂರನೇ ವರ್ಷದ ‘ಸ್ವರ್ಣ ಸಾಧನಾ ಪ್ರಶಸ್ತಿ’ ಪ್ರದಾನ, ಸಾಧಕರಿಗೆ ಅಭಿನಂದನೆ, ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ವಾರ್ಷಿಕ ಮಹಾಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ತನ್ನ ಮನಸ್ಸಿನ ಹಂಬಲವನ್ನು ಇತರರ ಹಂಬಲವಾಗಿರುವುದೇ ಬರವಣಿಗೆಯ ನೈಜ ಯಶಸ್ವು ಆಗಿದೆ. ಪ್ರಸ್ತುತ ಪ್ರಶಸ್ತಿಗಳು ಅಪಮೌಲ್ಯಕ್ಕೆ ಒಳಗಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಜೀವಮಾನ ಸಾಧನೆಯನ್ನು ಗುರುತಿಸುವುದೇ ನಿಜವಾದ ಪ್ರಶಸ್ತಿಯಾಗಿದೆ ಎಂದು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ಇದರ ವತಿಯಿಂದ ಪುತ್ತೂರಿನ ಜೈನ ಭವನದಲ್ಲಿ ಶನಿವಾರ ನಡೆದ ಮೂರನೇ ವರ್ಷದ ‘ಸ್ವರ್ಣ ಸಾಧನಾ ಪ್ರಶಸ್ತಿ’ ಪ್ರದಾನ, ಸಾಧಕರಿಗೆ ಅಭಿನಂದನೆ, ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಕವಿತೆ ಎಂಬುದು ಮಾತಿಗೆ ಮೀರಿದ ಅನುಭವ ನೀಡುವಂತಹುದಾಗಿದ್ದು, ಈ ನಿಟ್ಟಿನಲ್ಲಿ ಕವಿ ಮಾತನಾಡುವ ಬದಲು ಆತನ ಕವಿತೆಗಳು ಮಾತನಾಡುವಂತಾಗಬೇಕು ಎಂದರು.

ಅಭಿನಂದನಾ ಭಾಷಣ ಮಾಡಿದ ವಿವೇಕಾನಂದ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್.ಜಿ. ಪ್ರಕೃತಿಯೊಂದಿಗೆ ಮಾತನಾಡಲು ಮನೋಧರ್ಮ ಬೇಕು. ಕಾವ್ಯ ಪರಂಪರೆಯ ಮೂಲಕ ಅವರು ನಮ್ಮನ್ನು ಸೆಳೆದಿದ್ದಾರೆ. ತಮ್ಮ ಮನೆಯ ಎದುರಿನ ಒಂದು ಮರಕ್ಕೂ ರೆಕ್ಕೆ, ಪುಕ್ಕ, ದೃಶ್ಯ ಕಾವ್ಯವನ್ನು ಬೆಸೆದಿರುವ ಚೊಕ್ಕಾಡಿ ಅವರ ಕವಿತೆಗಳಲ್ಲಿ ಅದ್ಭುತ ಲಯ, ಹಾಸ್ಯಗಳನ್ನು ಕಾಣಬಹುದು. ಕಾವ್ಯ ಪರಂಪರೆಯಲ್ಲಿ ಓದುವ ಕಾವ್ಯದ ನಡುವೆ ಹಾಡುವ ಕಾವ್ಯಗಳನ್ನು ಬರೆದ ಚೊಕ್ಕಾಡಿಯವರ ‘ಮುನಿಸುತರವೇ’ ಎಂಬ ಭಾವಗೀತೆಯು ಮುಂದಕ್ಕೆ ಭಾಗವತಿಕೆ ಕ್ಷೇತ್ರದಲ್ಲೂ ಪಾಲು ಪಡೆದುಕೊಂಡಿದೆ. ನಿಸರ್ಗದ ಕಡೆಗೆ ಅಗಾಧವಾದ ವಿಸ್ಮಯ, ಆಧುನಿಕ ಜಗತ್ತು ಮುಗ್ಧತೆಯನ್ನು ದೂರ ಮಾಡಿದೆ ಎನ್ನುವ ವಿಚಾರಗಳನ್ನು ಎಳೆಎಳೆಯಾಗಿ ತಮ್ಮ ಕವಿತೆಗಳಲ್ಲಿ ಹೇಳಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿದ ಕ್ಯಾಂಪ್ಕೋ ಸಂಸ್ಥೆಯ ನಿವೃತ್ತ ಆಡಳಿತ ನಿರ್ದೇಶಕ ಕೆ. ಪ್ರಮೋದ್ ಕುಮಾರ್ ರೈ ಶುಭಹಾರೈಸಿದರು. ಸುಬ್ರಾಯ ಚೊಕ್ಕಾಡಿ ಹಾಗೂ ಲಕ್ಷ್ಮೀ ದಂಪತಿಯನ್ನು ಪ್ರಶಸ್ತಿಯೊಂದಿಗೆ ೧೫ ಸಾವಿರ ರು. ನಗದು, ಫಲಕ, ಸ್ಮರಣಿಕೆ, ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸಾಧಕರಾದ ಉದ್ಯಮಿ ಎಸ್.ಆರ್.ಕೆ. ಲ್ಯಾಡರ್‌ನ ಕೇಶವ ಅಮೈ, ದೆಹಲಿಯಲ್ಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ (ಎನ್.ಸಿ.ಸಿ.) ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ತೇಜಸ್ವಿನಿ ವಿ. ಶೆಟ್ಟಿ, ಸಾಂಸ್ಕೃತಿಕದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಸ್ವಾತಿ ಎನ್. ವಿ., ಶಮಾ ಚಂದುಕೊಡ್ಲು, ಪ್ರಣಮ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ದಕ್ಷಿಣ ಆಫ್ರಿಕಾದ ಟುನಿಷಿಯ ಅಂತಾರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ವಿಜೇತ ವಿವೇಕಾನಂದ ಸಿ.ಬಿ.ಎಸ್.ಇ. ಶಾಲೆಯ ಆಪ್ತ ಚಂದ್ರಮತಿ ಮುಳಿಯ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಸಂಘದಲ್ಲಿ ಸದಸ್ಯರಾಗಿದ್ದು, ೭೫, ೮೦ ಮತ್ತು ೮೫ ವರ್ಷ ಪ್ರಾಯ ಪೂರ್ಣಗೊಂಡ ೪೮ ಮಂದಿ ಹಿರಿಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಧ್ಯಾಹ್ನದ ಬಳಿಕ ಸಂಘದ ವಾರ್ಷಿಕ ಮಹಾಸಭೆಯು ನಡೆಯಿತು.

ಸಂಘದ ಕಾರ್ಯದರ್ಶಿ ತಿರುಮಲೇಶ್ವರ ಭಟ್, ಕೋಶಾಧಿಕಾರಿ ಶಾಂತಿ ಟಿ. ಹೆಗಡೆ, ಸಂಘಟನಾ ಕಾರ್ಯದರ್ಶಿ ಜಗನ್ನಾಥ ರೈ, ಜತೆ ಕಾರ್ಯದರ್ಶಿ ಎನ್. ಶಶಿಕಲಾ, ಉಪಾಧ್ಯಕ್ಷ ರಾಮದಾಸ್ ಗೌಡ, ಸಾಂಸ್ಕೃತಿಕ ಕಾರ್ಯದರ್ಶಿ ಲೀನಾ ಪುಡ್ತಾದೊ, ಸಂಘಟನಾ ಕಾರ್ಯದರ್ಶಿ ಜಗನ್ನಾಥ ರೈ, ಕಾಂಚನ ಸುಂದರ ಭಟ್ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಐತಪ್ಪ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪಾಧ್ಯಕ್ಷೆ ವತ್ಸಲಾ ರಾಜ್ಞಿ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ