- ಗ್ರಾಮಸ್ಥರಿಗೆ ಆರೋಗ್ಯ ಇಲಾಖೆಯಿಂದ ಸಲಹೆ ಸೂಚನೆ
ಮಲೇರಿಯಾ ರೋಗ ಹರಡದಂತೆ ಜಾಗ್ರತೆ ವಹಿಸಲು, ಸಾರ್ವಜನಿಕರು ಆರೋಗ್ಯ ಇಲಾಖೆಯ ಸಲಹೆ, ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದು ಗೋಪನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿಂದುಶ್ರೀ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಮಲೇರಿಯಾ ವಿರೋಧಿ ಮಾಸಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಸ್ಪತ್ರೆ ಸಿಬ್ಬಂದಿ ವರ್ಗ, ಆಶಾ, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಗಳಿಗೆ ತೆರಳಿ ಮಲೇರಿಯಾ ಹರಡುವ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಗ್ರಾಮೀಣ ಭಾಗಗಳಲ್ಲಿ ಸ್ವಚ್ಚತೆ ಒಂದು ಸಾವಾಲಾಗಿದೆ. ಸ್ವಚ್ಚತೆಯನ್ನು ನಿರ್ಲಕ್ಷಿಸಿದರೆ ಯಾವುದೇ ಕ್ಷಣದಲ್ಲಾದರೂ ನಾವು ರೋಗಕ್ಕೆ ತುತ್ತಾಗುತ್ತೇವೆ ಎಂದು ಸಲಹೆ ಎಚ್ಚರಿಕೆ ನೀಡಿದರು.ತಾಲೂಕು ಮಲೇರಿಯಾ ನೋಡಲ್ ಲ್ಯಾಬ್ ಅಧಿಕಾರಿ ಎಚ್.ತಿಪ್ಪೇಸ್ವಾಮಿ ಮಾತನಾಡಿ ರಸ್ತೆ, ತಗ್ಗುಗುಂಡಿಗಳಲ್ಲಿ ನಿಂತ ಕೊಳಚೆ ನೀರಿನೊಳಗೆ ಸೊಳ್ಳೆಗಳು ವಾಸ ಮಾಡುವುದೇ ಮಲೇರಿಯಾಗೆ ಮುಖ್ಯ ಕಾರಣವಾಗಿದೆ. ನಮ್ಮ ನಮ್ಮ ಸುತ್ತಮುತ್ತಲ ವಾತಾವರಣದ ಸ್ವಚ್ಚತೆ ಕಾಪಾಡಿದರೆ ಸಾಕು. ಮಳೇರಿಯಾವನ್ನು ತಡೆಯಬಹುದು. ಆರೋಗ್ಯ ಇಲಾಖೆ ನಿರಂತರವಾಗಿ ಮಲೇರಿಯಾ ಸೇರಿದದಂತೆ ಹಲವಾರು ಮಾರಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ ಎಂದರು.
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಮಲೇರಿಯಾ ವಿರೋಧಿ ದಿನಾಚರಣೆ ಜಾಗೃತಿ ಜಾಥಕ್ಕೆ ವೈದ್ಯಾಧಿಕಾರಿ ಡಾ.ಬಿಂದುಶ್ರೀ ಚಾಲನೆ ನೀಡಿದರು.