ಔಷಧೀಯ ಸಸ್ಯಗಳ ವರ್ಗೀಕರಣ, ಗುಣಗಳ ಅರಿವು ಮುಖ್ಯ: ಡಾ. ಶರತ್‌ ಕೃಷ್ಣನ್‌

KannadaprabhaNewsNetwork | Published : Jan 4, 2025 12:32 AM

ಸಾರಾಂಶ

ಔಷಧೀಯ ಗಿಡಮೂಲಿಕೆಗಳನ್ನು ಅವಶ್ಯಕತೆಗಿಂತ ಹೆಚ್ಚು ಸೇವನೆ ಮಾಡಿದರೆ ವಿಷಕಾರಿ ಪರಿಣಾಮವನ್ನು ಬೀರುತ್ತದೆ. ಈ ರೀತಿಯ ಜ್ಞಾನ ಸಾಮಾನ್ಯ ಜನರಲ್ಲಿ ಮೂಡಿಸಬೇಕು. ಹಾಗಾಗಿ ಪ್ರತಿ ಗಿಡಮೂಲಿಕೆಯ ಬಗ್ಗೆ ನಮಗೆ ಅರಿವು ಇರಬೇಕು ಎಂದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆಗಿಡಮೂಲಿಕೆಗಳನ್ನು ಬರಿ ಔಷಧ ಮಾತ್ರವಲ್ಲದೆ ಪೌಷ್ಟಿಕಾಂಶಯುಕ್ತ ಆಹಾರದ ರೀತಿಯಲ್ಲೂ ಸೇವನೆ ಮಾಡುತ್ತಾರೆ, ನೈಸರ್ಗಿಕವಾಗಿ ಸಿಗುವ ಪೂರಕ ಔಷಧ ಇದಾಗಿದೆ. ಆದರೆ ಅದನ್ನು ಹೇಗೆ ಸೇವಿಸಬೇಕು ಎನ್ನುವ ಅರಿವು ನಮ್ಮಲ್ಲಿರಬೇಕು ಎಂದು ಅಮೆರಿಕದ ಓಹಿಒ ಸೆಂಟ್ರಲ್ ಸ್ಟೇಟ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ಪ್ರಾಧ್ಯಾಪಕ ಡಾ. ಶರತ್ ಕೃಷ್ಣನ್ ಮಾತನಾಡಿದರು.

ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ದ್ರವ್ಯಗುಣ ವಿಜ್ಞಾನ ವಿಭಾಗ ಮತ್ತು ಬೆಂಗಳೂರಿನ ಹಿಮಾಲಯ ವೆಲ್‌ನೆಸ್ ಕಂಪನಿ ಆಶ್ರಯದೊಂದಿಗೆ ಧನ್ವಂತರಿ ಹಾಲ್‌ನಲ್ಲಿ ಶುಕ್ರವಾರ ನಡೆದ ‘ಆಳ್ವಾಸ್ ಸಂಜೀವಿನಿ 2025’- ಸಸ್ಯ ವರ್ಗೀಕರಣ ಮತ್ತು ಔಷಧಜ್ಞಾನ ಕುರಿತ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಔಷಧೀಯ ಗಿಡಮೂಲಿಕೆಗಳನ್ನು ಅವಶ್ಯಕತೆಗಿಂತ ಹೆಚ್ಚು ಸೇವನೆ ಮಾಡಿದರೆ ವಿಷಕಾರಿ ಪರಿಣಾಮವನ್ನು ಬೀರುತ್ತದೆ. ಈ ರೀತಿಯ ಜ್ಞಾನ ಸಾಮಾನ್ಯ ಜನರಲ್ಲಿ ಮೂಡಿಸಬೇಕು. ಹಾಗಾಗಿ ಪ್ರತಿ ಗಿಡಮೂಲಿಕೆಯ ಬಗ್ಗೆ ನಮಗೆ ಅರಿವು ಇರಬೇಕು ಎಂದರು.ಔಷಧೀಯ ಗುಣವಿರುವ ಗಿಡಗಳನ್ನು ಗುರುತಿಸುವುದು ತುಂಬಾ ಕಠಿಣ ವಿಚಾರ. ಆದರೆ ನಮ್ಮ ಭಾರತದಲ್ಲಿ ಪುರಾತನ ಕಾಲದಿಂದ ಕೆಲವೊಂದು ಔಷಧೀಯ ಗುಣವಿರುವ ಗಿಡಗಳನ್ನು ಅವರೇ ಅರಿತುಕೊಂಡು ಸೇವಿಸುತ್ತಾರೆ. ಔಷಧಗಳು ವಿಷಕಾರಿಯಾಗುವಂತೆ ಸೇವಿಸುವುದಲ್ಲ, ಬದಲಾಗಿ ವಿಷದ ವಿರುದ್ಧ ಹೋರಾಡುವಂತೆ ಸೇವಿಸಬೇಕು, ಯಾವುದು ವಿಷಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಅರಿಯಬೇಕು, ಔಷಧ ಹೆಚ್ಚಾದರೆ ವಿಷದ ರೂಪದಲ್ಲಿ ಪರಿಣಾಮ ಬೀರುತ್ತದೆ ಎಂದರು.

ಬೆಂಗಳೂರು ಹಿಮಾಲಯ ವೆಲ್‌ನೆಸ್‌ ಕಂಪನಿಯ ಸಸ್ಯಶಾಸ್ತ್ರೀಯ ವಿಭಾಗದ ಪ್ರಧಾನ ಸಂಶೋಧಕ ಡಾ. ಗುರುರಾಜ್ ಕಲಗೇರಿ ಮಾತನಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ ವಿನಯ್ ಆಳ್ವ, ಆಳ್ವಾಸ್ ಆಯುರ್ವೇದ ಕಾಲೇಜಿನ ಆಡಳಿತಾಧಿಕಾರಿ ಸುನಿಲ್ ಶೆಟ್ಟಿ ಇದ್ದರು. ಡಾ. ಸುಬ್ರಹ್ಮಣ್ಯ ಪದ್ಯಾಣ ಸ್ವಾಗತಿಸಿದರು. ಡಾ. ಗೀತಾ ಬಿ. ಮಾರ್ಕಾಂಡೆ ನಿರೂಪಿಸಿದರು. ಡಾ. ಲಕ್ಷ್ಮೀ ಪೈ ವಂದಿಸಿದರು.

Share this article