ಪೂಂಪ್ ಹಾರ್‌ನಲ್ಲಿ ಕಾವೇರಿ ಜಾಗೃತಿ ರಥಯಾತ್ರೆ ಸಮಾಪ್ತಿ

KannadaprabhaNewsNetwork |  
Published : Nov 18, 2025, 02:00 AM IST
ಸಮುದ್ರ ಸಂಗಮದಲ್ಲಿ ಪವಿತ್ರ ತೀರ್ಥ ವಿಸರ್ಜನೆ ಸಂದರ್ಭ | Kannada Prabha

ಸಾರಾಂಶ

ಕಾವೇರಿ ಜಾಗೃತಿ ರಥಯಾತ್ರೆ ಪೂಂಪ್‌ಹಾರ್‌ನಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪವಿತ್ರ ಕಾವೇರಿಯನ್ನು ಸಮುದ್ರ ಸಂಗಮದಲ್ಲಿ ವಿಸರ್ಜನೆಗೊಳಿಸುವ ಮೂಲಕ ಸಮಾಪ್ತಿಗೊಂಡಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ ಸ್ವಚ್ಛ ಕಾವೇರಿಗಾಗಿ 15ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ಪೂಂಪ್ ಹಾರ್ ನಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪವಿತ್ರ ಕಾವೇರಿಯನ್ನು ಸಮುದ್ರ ಸಂಗಮದಲ್ಲಿ ವಿಸರ್ಜನೆ ಗೊಳಿಸುವ ಮೂಲಕ ಸಮಾಪ್ತಿ ಗೊಂಡಿತು.ಅಖಿಲ ಭಾರತ ಸನ್ಯಾಸಿ ಸಂಘ ಕಾವೇರಿ ನದಿ ಸ್ವಚ್ಛತಾ ಆಂದೋಲನ ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್ ನಮಾಮಿ ಕಾವೇರಿ ಸಹಯೋಗದೊಂದಿಗೆ ತಲಕಾವೇರಿ ಕ್ಷೇತ್ರದಿಂದ ಆರಂಭಗೊಂಡ ರಥಯಾತ್ರೆ ಪವಿತ್ರ ಕಾವೇರಿ ತೀರ್ಥಕ್ಕೆ, ಕಾವೇರಿ ನದಿ ಮತ್ತು ಬಂಗಾಳ ಕೊಲ್ಲಿ ಸಮುದ್ರ ಸಂಗಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ದಕ್ಷಿಣ ಭಾರತದ ಸಾಧುಸಂತರ ಸಮ್ಮುಖದಲ್ಲಿ ಯಾತ್ರೆ ವಿದ್ಯುಕ್ತವಾಗಿ ಸಮಾಪ್ತಿಗೊಂಡಿತು. ಅಕ್ಟೋಬರ್ ತಿಂಗಳ 24ರಂದು ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಚಾಲನೆಗೊಂಡ ರಥ ಯಾತ್ರೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನದಿ ತಟಗಳಲ್ಲಿ ಕಾವೇರಿ ಮಾತೆಯನ್ನು ಹೊತ್ತ ರಥ ಮೂಲಕ ಸಾಗಿ ಜನರಿಗೆ ಕಾವೇರಿ ನದಿ ಸಂರಕ್ಷಣೆಯ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕಾರ್ಯ ಮೂರು ವಾರಗಳಿಂದ ನಡೆದಿತ್ತು. ಅಖಿಲ ಭಾರತ ಸನ್ಯಾಸಿ ಸಂಘದ ಸಂಸ್ಥಾಪಕರಾದ ಶ್ರೀ ರಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಾಗಿದ ಕಾವೇರಿ ರಥ ಯಾತ್ರೆಯಲ್ಲಿ ದಕ್ಷಿಣ ಭಾರತದ ಸುಮಾರು 50ಕ್ಕೂ ಅಧಿಕ ಸಾಧು ಸಂತರು ಪಾಲ್ಗೊಂಡಿದ್ದರು.

ನ. 16ರಂದು ತಮಿಳುನಾಡಿನ ಪೂಂಪ್ ಹಾರ್ ತಲುಪಿದ ಯಾತ್ರ ತಂಡ ಪವಿತ್ರ ಕಾವೇರಿ ತೀರ್ಥವನ್ನು ಬಂಗಾಳ ಕೊಲ್ಲಿ ಸಮುದ್ರ ಸಂಗಮದಲ್ಲಿ ವಿಸರ್ಜಿಸಿ ಸ್ವಚ್ಛ ಕಾವೇರಿಗಾಗಿ ಮತ್ತು ನಾಡಿನ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಕಾವೇರಿ ಪಟ್ಟಣ ಬಳಿ ರತ್ನ ಪೂರ್ಣೇಶ್ವರಿ ದೇವಾಲಯದಲ್ಲಿ ತಲಕಾವೇರಿಯಿಂದ ರಥದ ಮೂಲಕ ಒಯ್ದು ಪವಿತ್ರ ತೀರ್ಥಕ್ಕೆ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭ ಮಾತನಾಡಿದ ಜಾಗೃತಿ ಯಾತ್ರೆಯ ಪ್ರಮುಖರಾದ ಶ್ರೀ ಬಾಲ ರಘುನಾಥಾನಂದ ಸ್ವಾಮೀಜಿ, 15ನೇ ವರ್ಷದ ಯಾತ್ರೆ ಎರಡೂ ರಾಜ್ಯಗಳಲ್ಲಿ ಸಾಗಿ ಬಂದಿದ್ದು ಜನರಲ್ಲಿ ಜೀವನದಿ ಕಾವೇರಿ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಬಹುತೇಕ ಯಶಸ್ಸು ಕಂಡಿದೆ. ಕಾವೇರಿ ಹಲವು ರೀತಿಯಲ್ಲಿ ಕಲುಷಿತಗೊಳ್ಳುತ್ತಿದ್ದು ನದಿಯ ಸಂರಕ್ಷಣೆಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ಸಂಬಂಧ ತಮಿಳುನಾಡು ಕರ್ನಾಟಕ ರಾಜ್ಯಗಳ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರತಿನಿಧಿಗಳು ಸರ್ಕಾರದ ಬಳಿ ನಿಯೋಗ ತೆರಳಿ ನಮಾಮಿ ಕಾವೇರಿ ಯೋಜನೆ ರೂಪಿಸುವ ಸಂಬಂಧ ಮನವಿ ಸಲ್ಲಿಸಲು ಚಿಂತನೆ ಹರಿಸಲಾಗಿದೆ ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ನದಿ ಸಂರಕ್ಷಣೆಗಾಗಿ ಕಟ್ಟುನಿಟ್ಟಿನ ಕಾನೂನು ರೂಪುಗೊಳ್ಳಬೇಕಾಗಿದೆ. ಆ ಮೂಲಕ ನದಿ ಜಲಮೂಲಗಳ ಸಂರಕ್ಷಣೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ರಾಜ್ಯಗಳ ನಡುವೆ ನೀರಿನ ಪಾಲಿಗಾಗಿ ಮಾತ್ರ ಹೋರಾಟ ಸೀಮಿತವಾಗಬಾರದು. ನದಿಗಳ ಸಂರಕ್ಷಣೆಗೆ ಕೂಡ ಸರಕಾರಗಳ ಮೂಲಕ ಯೋಜನೆಗಳು ರೂಪುಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.ಈ ಸಂದರ್ಭ ಅಖಿಲ ಭಾರತ ಸನ್ಯಾಸಿಗಳ ಸಂಘದ ಶ್ರೀ ಶಿವರಾಮನಂದ ಸ್ವಾಮೀಜಿ , ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್ ನ ಸಂಚಾಲಕರಾದ ವಾಸು ರಾಮಚಂದ್ರನ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಅಧ್ಯಕ್ಷ ಎಂ ಎನ್ ಚಂದ್ರಮೋಹನ್ ನಮಾಮಿ ಕಾವೇರಿ ಅಧ್ಯಕ್ಷರಾದ ವನಿತಾ ಚಂದ್ರಮೋಹನ್, ಗೌರವ ಸಲಹೆಗಾರರಾದ ಸುಮನ ಮಳಲಗದ್ದೆ, ದೀಪಕ್ ಕುಮಾರ್, ಅಖಿಲ ಭಾರತ ಸನ್ಯಾಸಿ ಸಂಘದ ಸದಸ್ಯರು, ಪಾಲ್ಗೊಂಡಿದ್ದರು.

PREV

Recommended Stories

ಕಸ ಸುಡಲು ಹಾಕಿದ ಬೆಂಕಿಯಿಂದ ಕುಡಿಯುವ ನೀರಿನ ಪೈಪ್ ಲೈನ್‌ಗೆ ಹಾನಿ
ಚಂಡಿಗಢ ಮುಖ್ಯ ಕಾರ್ಯದರ್ಶಿ ರಾಜೇಶ್‌ ಪ್ರಸಾದ್‌ಗೆ ಅಭಿನಂದನೆ