ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ಸಭಾಂಗಣದಲ್ಲಿ ನಡೆದ "ಮಕ್ಕಳ ದಿನಾಚರಣೆ " ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ ಡಿ.ಆರ್. ಅವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಮಕ್ಕಳು ಶಾಲಾ ಕಾಲೇಜುಗಳಲ್ಲಿ ನಡೆಸುವ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವುದರೊಂದಿಗೆ ತಮ್ಮ ಪ್ರತಿಭೆಯನ್ನು ಕಲಿಕೆಯ ಜೊತೆಗೆ ಕಲೆಗಳನ್ನು ಬೆಳಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ 9-16 ವರ್ಷದ ಮಕ್ಕಳು ವಿವಿಧ ಸ್ಫರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಲಾಯಿತು.
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮಕ್ಕಳನ್ನು ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿರುತ್ತಾರೆ ಎಂದರು.ಸುಗಮ ಸಂಗೀತದಲ್ಲಿ ವಿಜೇತರಾದವರು ಅಪೇಕ್ಷ ಆರ್ ರೈ, ಭರತ್ಯ ನಾಟ್ಯದಲ್ಲಿ ವಿಜೇತರಾದವರು ಶ್ರೀವರ್ದನ್ ಕೆ.ಎಸ್. ವಿಜ್ಞಾನ ವಿಭಾಗದಲ್ಲಿ ವಿಜೇತರಾದವರು ಜಶ್ವಿನ್ ಬೆಳ್ಯಪ್ಪ, ರಕ್ಷಿತ ಎಸ್., ಕಥೆ-ಕವನ-ಪ್ರಬಂದ ಸ್ಪರ್ಧೆಯಲ್ಲಿ ಅರ್ಪಿತಾ ಬೆಳ್ಯಪ್ಪ, ದೀಕ್ಷಿತ್ ಎಂ.ಪಿ. ಹಾಗೂ ಚಿತ್ರಕಲೆ-ಜೇಡಿ ಮಣ್ಣಿನ ಕಲೆ ವಿಜೇತರಾದವರು ಬಿ.ಎಸ್.ನಿಶಾನ್ ಹಾಗೂ ಐಶ್ವರ್ಯ ಎ.ಎಸ್. ಈ ಎಂಟು ಮಕ್ಕಳು ರಾಜ್ಯ ಮಟ್ಟದಲ್ಲಿ ನಡೆಯುವ ಕಲಾ ಶ್ರೀ ಪ್ರಶಸ್ತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.