ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ವರ್ಕ್ಶಾಪ್ ಮಾಲೀಕರ ಸಂಘದ ಅಧ್ಯಕ್ಷರಾಗಿ ಬಿ.ಎಸ್. ರಮೇಶ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಣಿಕಂಠ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಯಿತು. ಇತ್ತೀಚೆಗೆ ನಡೆದ ವರ್ಕ್ ಶಾಪ್ ಮಾಲೀಕರ ಸಂಘದ 23ನೇ ಮಹಾಸಭೆಯು ಬಿ ಎಸ್ ರಮೇಶ ಅವರ ಅಧ್ಯಕ್ಷತೆಯಲ್ಲಿ ಸೌಮ್ಯ ಇಂಜಿನಿಯರಿಂಗ್ ವರ್ಕ್ಸ್ನಲ್ಲಿ ನಡೆಸಲಾಯಿತು. ಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ಆಯ್ಕೆಗೊಳಿಸಲಾಗಿದ್ದು ಉಪಾಧ್ಯಕ್ಷರಾಗಿ ತಂಗವೇಲು, ಸಹ ಕಾರ್ಯದರ್ಶಿಯಾಗಿ ರಜಾಕ್, ಖಜಾಂಜಿಯಾಗಿ ಸಂದೀಪ್, ಸಂಘಟನಾ ಕಾರ್ಯದರ್ಶಿಯಾಗಿ ಪೆಲಿಕ್ಸ್ ಡಿಸೋಜ, ಗೌರವಾಧ್ಯಕ್ಷರಾಗಿ ವಿ ಎ ಸಂತೋಷ್, ಕೆ ಪಿ ವಿನೋದ್, ಪಿ.ಆರ್. ಸುಕುಮಾರ್ ಹಾಗೂ 11 ಮಂದಿ ನಿರ್ದೇಶಕರನ್ನು ಆಯ್ಕೆಗೊಳಿಸಲಾಯಿತು.--------------------------------------
ಇಂದು ಗೋಣಿಕೊಪ್ಪಲಿನಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ, ವೃತ್ತಿ ಜೀವನ ಮಾರ್ಗದರ್ಶನ ಶಿಬಿರಕನ್ನಡಪ್ರಭ ವಾರ್ತೆ ಪೊನ್ನಂಪೇಟೆಗೋಣಿಕೊಪ್ಪಲಿನ ಯುನೈಟೆಡ್ ಜಮಾಅತ್ (ಯುಜೆಜಿ) ವತಿಯಿಂದ 6ನೇ ತರಗತಿಯ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗಾಗಿ ಮಾದಕ ವಸ್ತು ವಿರೋಧಿ ಜಾಗೃತಿ ಮತ್ತು ವೃತ್ತಿ ಜೀವನ ಮಾರ್ಗದರ್ಶನ ಶಿಬಿರವನ್ನು ಮೇ 27ರಂದು ಮಂಗಳವಾರ ಗೋಣಿಕೊಪ್ಪಲಿನಲ್ಲಿ ಆಯೋಜಿಸಲಾಗಿದೆ.
‘ನಮ್ಮ ನಡೆ ಮಾದಕ ವಸ್ತು ಮುಕ್ತ ಸಮಾಜ ಮತ್ತು ಅರಿವಿನ ಕಡೆ’ ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮವು ಗೋಣಿಕೊಪ್ಪಲಿನ ಜ್ಯೂಸ್ ಫ್ಯಾಕ್ಟರಿ ರಸ್ತೆಯಲ್ಲಿರುವ ಕೊಡಗು ಇಂಟರ್ನ್ಯಾಷನಲ್ ಕಮ್ಯುನಿಟಿ (ಹಳೆಯ ರಾಧ ಟೂರಿಸ್ಟ್ ಹೋಂ) ಸಭಾಂಗಣದಲ್ಲಿ ಜರುಗಲಿದೆ ಎಂದು ಗೋಣಿಕೊಪ್ಪಲು ಯುನೈಟೆಡ್ ಜಮಾಅತ್ತಿನ ಅಧ್ಯಕ್ಷರಾದ ಎಂ.ಎ. ಸಮೀರ್ ತಿಳಿಸಿದ್ದಾರೆ.ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಗೋಣಿಕೊಪ್ಪಲು ಯುನೈಟೆಡ್ ಜಮಾಅತ್ತಿನ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ. ರಾಮರಾಜನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಉಮೀದ್ ರಿಹೆಬ್ ಸೆಂಟರ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಮೊಹಮ್ಮದ್ ರಫಿಉದ್ದೀನ್ ರಶೀದ್ ಹಾಗೂ ಪುಣೆಯ ಅನೀಸ್ ಡಿಫೆನ್ಸ್ ಅಕಾಡೆಮಿಯ ಸ್ಥಾಪಕ ನಿರ್ದೇಶಕರಾದ ಅನೀಶ್ ಕುಟ್ಟಿ ಆಗಮಿಸಲಿದ್ದಾರೆ ಎಂದು ಸಮೀರ್ ವಿವರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ನೋಂದಣಿ ಕಾರ್ಯ ಅಂದು ಬೆಳಗ್ಗೆ 9 ಗಂಟೆಯಿಂದಲೇ ಆರಂಭಗೊಳ್ಳಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.ಶಿಕ್ಷಾರ್ಹ ಅಪರಾಧ:ಇಂದು ನಾನಾ ಮಾರ್ಗಗಳಲ್ಲಿ ಮಾದಕ ವಸ್ತುಗಳ ವಹಿವಾಟು ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕುರಿತು ತೀವ್ರ ಎಚ್ಚರ ವಹಿಸಬೇಕಿದೆ. ಮಾದಕ ವಸ್ತುಗಳ ಸಾಗಣೆ, ಮಾರಾಟ ಮಾತ್ರ ಅಪರಾಧವಲ್ಲ. ಮಾದಕ ವಸ್ತು ಸೇವನೆ ಕೂಡ ಶಿಕ್ಷಾರ್ಹ ಅಪರಾಧವಾಗಿದೆ. ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳನ್ನು ಕ್ಷಣಿಕ ಸುಖಕ್ಕಾಗಿ ವ್ಯಸನಿಗಳು ಬಳಕೆ ಮಾಡುತ್ತಿದ್ದಾರೆ. ಈ ಪೈಕಿ ಚಿಕ್ಕ ವಯಸ್ಸಿನ ಪ್ರಾಯದವರು ಇದೀಗ ಮಾದಕ ವ್ಯಸನಿಗಳಾಗುತ್ತಿರುವುದು ಸಮಾಜದ ಬಹುದೊಡ್ಡ ದುರಂತ. ಈ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮತ್ತು ಮುಂದಿನ ವೃತ್ತಿ ಜೀವನದ ಕುರಿತು ಸೂಕ್ತ ಮಾರ್ಗದರ್ಶನ ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಜಾತಿ-ಧರ್ಮಗಳ ಭೇದವಿಲ್ಲದೆ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಬಹುದಾಗಿದೆ ಎಂದು ಸಮೀರ್ ಹೇಳಿದರು.ಮಾದಕ ವ್ಯಸನದಿಂದ ಮುಕ್ತವಾಗಬೇಕು:ಗೋಷ್ಠಿಯಲ್ಲಿ ಹಾಜರಿದ್ದ ಗೋಣಿಕೊಪ್ಪಲು ಯುನೈಟೆಡ್ ಜಮಾಅತ್ತಿನ ಕಾರ್ಯದರ್ಶಿ ಅಬ್ದುಲ್ ಸಮದ್ ಟಿ.ಕೆ. ಮಾತನಾಡಿ, ಕೊಡಗು ಜಿಲ್ಲೆ ಪೂರ್ಣವಾಗಿ ಮಾದಕ ವ್ಯಸನದಿಂದ ಮುಕ್ತವಾಗಬೇಕು. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಇದು ಸಮಾಜದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ. ಯುವಕರು ಮಾದಕ ವಸ್ತುಗಳ ಬಳಕೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಳೆದುಕೊಳ್ಳುತ್ತಾರೆ. ಈ ಏರುಪೇರಿನಿಂದ ಯೌವ್ವನದಲ್ಲೇ ಸಂಕಷ್ಟ ಅನುಭವಿಸುತ್ತಾರೆ. ಅದರಿಂದ ಈ ಕುರಿತು ಯುವಕರನ್ನು ಅಪಾಯದಿಂದ ಪಾರು ಮಾಡುವುದು ಸಾಮಾಜಿಕ ಸಂಘಟನೆಗಳ ಜವಾಬ್ದಾರಿಯೂ ಆಗಿರುತ್ತದೆ. ಮಾದಕ ವಸ್ತುಗಳ ವ್ಯಸನಿಗಳನ್ನು ಗುರುತಿಸಿ ಅವರನ್ನು ವ್ಯಸನ ಮುಕ್ತರನ್ನಾಗಿ ಮಾಡಲು ಶಕ್ತಿಮೀರಿ ಶ್ರಮಿಸಬೇಕಿದೆ. ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ ತಿಳಿಸಬೇಕಿದೆ. ಸಂಘ-ಸಂಸ್ಥೆಗಳು ಸೇರಿದಂತೆ ಜಿಲ್ಲೆಯ ನಾಗರೀಕರು ಮಾದಕ ವ್ಯಸನ ಮುಕ್ತ ಕೊಡಗು ನಿರ್ಮಿಸಲು ಪಣತೊಡಬೇಕಿದೆ. ವಿದ್ಯಾರ್ಥಿಗಳನ್ನೇ ಹೆಚ್ಚಾಗಿ ಕೇಂದ್ರೀಕರಿಸಿ ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕಾಗಿದೆ. ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಗೋಣಿಕೊಪ್ಪಲು ಯುನೈಟೆಡ್ ಜಮಾಅತ್ತಿನ ಗೌರವಾಧ್ಯಕ್ಷರಾದ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು), ಸಂಚಾಲಕರಾದ ತನ್ವೀರ್ ಅಹಮದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ನಾಸರ್, ನಜೀರ್ ಮೌಲವಿ ಮೊದಲಾದವರು ಉಪಸ್ಥಿತರಿದ್ದರು.