ಮೀಸಲು ಅರಣ್ಯ ಗೊಂದಲ ಬಗೆಹರಿಸಲು ಬಿ. ಶಿವರಾಂ ಆಗ್ರಹ

KannadaprabhaNewsNetwork |  
Published : Sep 30, 2025, 12:00 AM IST
29ಎಚ್ಎಸ್ಎನ್19 :  | Kannada Prabha

ಸಾರಾಂಶ

ಜಿಲ್ಲೆಯ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಇಲ್ಲಿನ ಜನಪ್ರತಿನಿಧಿಗಳು ರೈತರ ಸಮಸ್ಯೆ ಬಗೆಹರಿಸುವ ಬದಲು ಅಧಿಕಾರಿಗಳ ವರ್ಗಾವಣೆಯ ಸ್ಪರ್ಧೆಯಲ್ಲಿ ನಿರತರಾಗಿದ್ದಾರೆ. ‘ತಾ ಮುಂದು, ನಾ ಮುಂದು’ ಎಂಬಂತೆ ಒತ್ತಡ ಹಾಕುವ ಪೈಪೋಟಿ ಮಾತ್ರ ನಡೆಯುತ್ತಿದೆ. ರೈತರ ಜ್ವಲಂತ ಸಮಸ್ಯೆಗಳಿಗೆ ಅವರಿಗೆ ಆಸಕ್ತಿ ಇಲ್ಲ.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಾದ್ಯಂತ ೩೬ ಪ್ರದೇಶಗಳು ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಟ್ಟಿವೆ ಎಂಬ ಅಧಿಕೃತ ದಾಖಲೆಗಳಿದ್ದರೂ, ದಶಕಗಳಿಂದ ಯಾವುದೇ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ಬಿ. ಶಿವರಾಮ್ ಗಂಭೀರವಾಗಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ೧೯೨೮ರಿಂದ ಇಂದಿನವರೆಗೆ ಮೀಸಲು ಅರಣ್ಯ ಘೋಷಣೆ ದಾಖಲೆಗಳಲ್ಲಿ ಮಾತ್ರ ಉಳಿದಿದೆ. ಕಂದಾಯ ಇಲಾಖೆಯಲ್ಲಿಯೂ ಪರಿಷ್ಕರಣೆ ನಡೆಯದ ಕಾರಣ ಗೊಂದಲ ಮುಂದುವರಿದಿದೆ. ೨೦೨೨ ಡಿಸೆಂಬರ್ ೩೦ರಂದು ಕರ್ನಾಟಕ ಅರಣ್ಯ ಅಧಿನಿಯಮ ೧೯೬೩ರ ೫ನೇ ಪ್ರಕಾರದಡಿ ಅರಣ್ಯ ಇಲಾಖೆ ಹೊಸದಾಗಿ ಘೋಷಣೆ ಹೊರಡಿಸಿ, ಅರಣ್ಯ ವ್ಯವಸ್ಥಾಪನಾಧಿಕಾರಿಗೆ ಭೂಮಿಯ ಸರ್ವೇ ನಡೆಸಿ ವಶಪಡಿಸಿಕೊಳ್ಳಲು ಸೂಚನೆ ನೀಡಿತ್ತು. ಆದರೆ ಇದುವರೆಗೆ ಯಾವುದೇ ಅನುಷ್ಠಾನ ನಡೆದಿಲ್ಲ ಎಂದು ಅವರು ದೂರಿದರು. ಅರಸೀಕೆರೆ ತಾಲೂಕಿನ ಅತ್ತಿಗುಡ್ಡ ಹಾಗೂ ನೀಲಗಿರಿ ಕಾವಲು ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದರೂ, ಅತ್ತಿಗುಡ್ಡ ಕಾವಲಿನಲ್ಲಿ ೩೦೦ಕ್ಕೂ ಹೆಚ್ಚು ರೈತರು, ನೀಲಗಿರಿ ಪ್ರದೇಶದಲ್ಲಿ ೧,೬೦೦ಕ್ಕೂ ಹೆಚ್ಚು ರೈತರು ಅತಿಕ್ರಮಣ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಕೇವಲ ನೋಟಿಸ್ ನೀಡಿದ ಮೇಲೆ ಸುಮ್ಮನಾಗಿರುವುದು ಅರಣ್ಯ ರಕ್ಷಣೆಗೂ, ಸಾರ್ವಜನಿಕರ ಹಿತಕ್ಕೂ ಧಕ್ಕೆಯಾಗಿದೆ ಎಂದು ಶಿವರಾಂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

೫೦ ಸಾವಿರ ಎಕರೆ ಮೀಸಲು ಅರಣ್ಯ ಭೂಮಿ, ೪೦ ಸಾವಿರಕ್ಕೂ ಹೆಚ್ಚು ಕುಟುಂಬಗಳ ಒತ್ತುವರಿ:

ಜಿಲ್ಲೆಯ ೩೬ ಪ್ರದೇಶಗಳಲ್ಲಿ ಒಟ್ಟಾರೆ ೫೦ ಸಾವಿರ ಎಕರೆ ಭೂಮಿ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಟ್ಟಿದೆ. ಇದರಲ್ಲಿ ೪೦ ಸಾವಿರಕ್ಕೂ ಹೆಚ್ಚು ಕುಟುಂಬಗಳು ಒತ್ತುವರಿ ಮಾಡಿರುವ ಅಂದಾಜು ಇದೆ. ಇಷ್ಟು ದೊಡ್ಡ ವಿಷಯವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಚರ್ಚೆಗೂ ತೆಗೆದುಕೊಂಡಿಲ್ಲ. ಇದು ಅವರ ದೂರದೃಷ್ಟಿ ಕೊರತೆ ಹಾಗೂ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಶಿವರಾಂ ಕಿಡಿಕಾರಿದರು.

ಜಿಲ್ಲೆಯ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಇಲ್ಲಿನ ಜನಪ್ರತಿನಿಧಿಗಳು ರೈತರ ಸಮಸ್ಯೆ ಬಗೆಹರಿಸುವ ಬದಲು ಅಧಿಕಾರಿಗಳ ವರ್ಗಾವಣೆಯ ಸ್ಪರ್ಧೆಯಲ್ಲಿ ನಿರತರಾಗಿದ್ದಾರೆ. ‘ತಾ ಮುಂದು, ನಾ ಮುಂದು’ ಎಂಬಂತೆ ಒತ್ತಡ ಹಾಕುವ ಪೈಪೋಟಿ ಮಾತ್ರ ನಡೆಯುತ್ತಿದೆ. ರೈತರ ಜ್ವಲಂತ ಸಮಸ್ಯೆಗಳಿಗೆ ಅವರಿಗೆ ಆಸಕ್ತಿ ಇಲ್ಲ ಎಂದು ಮಾಜಿ ಸಚಿವ ಕಿಡಿಕಾರಿದರು.

ಅರಣ್ಯ ಸಂರಕ್ಷಣೆ ಜೊತೆಗೆ, ದಶಕಗಳಿಂದ ಭೂಮಿಯನ್ನು ಬಳಸಿಕೊಂಡು ಬದುಕುತ್ತಿರುವ ರೈತರಿಗೆ ಪರಿಹಾರ ಒದಗಿಸಬೇಕು. ಅರಣ್ಯ ಇಲಾಖೆಯ ದಾಖಲೆಗಳು ಸ್ಪಷ್ಟವಾಗಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ಸಮಸ್ಯೆಗೆ ಗಮನ ಹರಿಸದಿರುವುದು ಸರ್ಕಾರದ ನಿಷ್ಠೆಯ ಮೇಲೆ ಅನುಮಾನ ಹುಟ್ಟಿಸುತ್ತಿದೆ ಎಂದು ಕಿಡಿಕಾರಿದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ