ಇನ್ನೂ ಸಾಂಸ್ಕೃತಿಕ ಜೀತಗಾರಿಕೆ ಮುಕ್ತವಾಗಲು ಸಾಧ್ಯವಾಗಿಲ್ಲ: ಕವಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ವಿಷಾದ

KannadaprabhaNewsNetwork |  
Published : Mar 11, 2024, 01:16 AM IST
9 | Kannada Prabha

ಸಾರಾಂಶ

ಈ ನೆಲದ ಬೇರುಗಳಾದ ಜೀವನ ಮಾರ್ಗವಾದ ಬೌದ್ಧ ಧರ್ಮವನ್ನು ಹೊರ ಹಾಕಲಾಯಿತು. ಡಾ. ಅಂಬೇಡ್ಕರ್‌ ಕಾರಣದಿಂದ ಬೌದ್ಧ ದರ್ಮ ಮರಳಿತು. ಜೈನ ಧರ್ಮವನ್ನು ವೈದೀಕರಣದಿಂದ ಅಪೋಶನ ಮಾಡಿತು. ಚಾರ್ವಕನನ್ನು ದೈವ ದ್ರೋಹಿ ಎಂದು ಬಿಂಬಿಸಲಾಯಿತು. ಆದರೂ ಇವುಗಳು ನೆಲದೊಳಗೆ ಗರಿಕೆ ಬೇರಿನಂತೆ ಜೀವಂತವಾಗಿ ಉಸಿರಾಡುತ್ತಿವೆ

ಕನ್ನಡಪ್ರಭ ವಾರ್ತೆ ಮೈಸೂರು

ಚಾರ್ತುವರ್ಣ ವ್ಯವಸ್ಥೆ, ವರ್ಣ ನೀತಿ, ಅಸಮಾನತೆಗಳು ಇಷ್ಟು ವರ್ಷಗಳಾದರೂ ಕಳೆದು ಹೋಗಿಲ್ಲ. ರಾಜಕೀಯ, ಮತ ಹಾಕುವ ಅಧಿಕಾರ ದೊರೆತಿದೆ. ಡಾ. ಅಂಬೇಡ್ಕರ್‌ ಅವರು ತಂದ ಬದಲಾವಣೆಯ ನಡುವೆಯೂ ಸಾಂಸ್ಕೃತಿಕ ಜೀತಗಾರಿಕೆ ಮುಕ್ತವಾಗಲು ಸಾಧ್ಯವಾಗಿಲ್ಲ ಎಂದು ಹಿರಿಯ ಕವಿ, ಚಿಂತಕ ಪ್ರೊ.ಎಸ್‌‍.ಜಿ. ಸಿದ್ಧರಾಮಯ್ಯ ವಿಷಾದಿಸಿದರು.

ಮೈಸೂರಿನ ರಂಗಾಯಣವು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಬಿ.ವಿ. ಕಾರಂತರ ರಂಗಚಾವಡಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು.

ಮೂರೂವರೆ ಸಾವಿರ ವರ್ಷಗಳಿಂದ ದಾಸ್ಯದೊಳಗೆ ದೇಶ ಬಳಲುತ್ತಿದೆ. ನಾವುಗಳು ಸಾಂಸ್ಕೃತಿಕ ಜೀತಗಾರರಾಗಿದ್ದೇವೆ. ಸಾಂಸ್ಕೃತಿಕ ಜೀತದಿಂದ ಬಿಡುಗಡೆ ಪಡೆಯದಿದ್ದರೆ ಭಾರತದ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಹಾಗೂ ಡಾ. ಅಂಬೇಡ್ಕರ್ ಅವರ ಸಂವಿಧಾನವನ್ನು ಸಂರಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

ಈ ನೆಲದ ಬೇರುಗಳಾದ ಜೀವನ ಮಾರ್ಗವಾದ ಬೌದ್ಧ ಧರ್ಮವನ್ನು ಹೊರ ಹಾಕಲಾಯಿತು. ಡಾ. ಅಂಬೇಡ್ಕರ್‌ ಕಾರಣದಿಂದ ಬೌದ್ಧ ದರ್ಮ ಮರಳಿತು. ಜೈನ ಧರ್ಮವನ್ನು ವೈದೀಕರಣದಿಂದ ಅಪೋಶನ ಮಾಡಿತು. ಚಾರ್ವಕನನ್ನು ದೈವ ದ್ರೋಹಿ ಎಂದು ಬಿಂಬಿಸಲಾಯಿತು. ಆದರೂ ಇವುಗಳು ನೆಲದೊಳಗೆ ಗರಿಕೆ ಬೇರಿನಂತೆ ಜೀವಂತವಾಗಿ ಉಸಿರಾಡುತ್ತಿವೆ ಎಂದರು.

ಪರಸ್ಪರ ಮಾತಾಡಿಕೊಂಡಿ ಹುಟ್ಟಿದ್ದು ಲಿಂಗಾಯತ, ಭ್ರಷ್ಟಗೊಂಡ ಭಾಷೆ ಮತ್ತು ವೈದಿಕ ಪಠ್ಯವನ್ನು ನಿರಾಕರಿಸಿದರು. ವೇದ, ಆಗಮ, ಪುರಾಣ, ಶಾಸ್ತ್ರ, ತರ್ಕ, ಸತಿ, ಶ್ರುತಿಯನ್ನು ಶರಣರು ನಿರಾಕರಿಸಿದರು. ಆದರೆ, ಜೀವನ ಧರ್ಮವನ್ನು ಬೋಧಿಸಿದ ಉಪನಿಷತ್ತನ್ನು ನಿರಾಕರಿಸಲಿಲ್ಲ ಎಂಬುದನ್ನು ನಾವು ಗಮನಿಸಬೇಕು ಎಂದು ಅವರು ಹೇಳಿದರು.

ಮೇಲು- ಕೀಳಿನ ಭಾಷೆಯನ್ನು ಶರಣರು ತಿರಸ್ಕರಿಸಿದರು. ಜಾತಿ ನೀತಿಗೆ ಕಾಯಕ ನೀತಿ ತಂದರು. ವ್ಯಕ್ತಿ ಸಮಾಜಕ್ಕೆ ಹಿತವಾದ ಕಾಯಕ ಸಮಾಜ ನಿರೂಪಿಸಿದರು. ಭ್ರಷ್ಟಗೊಂಡ ಸನಾತನ ಪದಕ್ಕೆ ಪುರಾತನರು ಎಂಬ ಪದವನ್ನು ಬಳಕೆ ಮಾಡಿದರು. ತಮ್ಮನ್ನು ಪುರಾತನ ಪರಂಪರೆಯ ಧಾತುದ್ರವ್ಯ ಎಂದು ಕರೆ ದುಕೊಂಡರು. ಭ್ರಷ್ಟಗೊಂಡ ಭಾಷೆ ಮತ್ತು ಸಾಂಸ್ಕೃತಿಕ ಜೀತಗಾರಿಕೆಯಿಂದ ಶರಣರು ಹೊರ ಬಂದ ಪರಿಣಾಮವಾಗಿ ಇವ ನಮ್ಮವ ಇವ ನಮ್ಮವ ಪದ ಹುಟ್ಟಿಕೊಂಡಿತು. ಈಗ ರಂಗಭೂಮಿ ವಚನ ಚಳವಳಿಯನ್ನು ರಂಗ ಚಳವಳಿಯಾಗಿ ರೂಪಿಸಿ ಮುನ್ನಡೆಸಬೇಕಿದೆ ಎಂದು ಅವರು ಸಲಹೆ ನೀಡಿದರು.

ಚಾರ್ತುವರ್ಣ ತನ್ನ ವಿರುದ್ಧವಾಗಿ ಹುಟ್ಟಿದ ತತ್ವ ಸಿದ್ಧಾಂತವನ್ನು ಅಪೋಶನ ತೆಗೆದುಕೊಂಡಿತು. ಪ್ರಭುಗಳ ಕಾಲದಲ್ಲಿ ಮಾತ್ರವಲ್ಲದೇ ಪ್ರಜಾಪ್ರಭುತ್ವದ ಕಾಲದಲ್ಲಿಯೂ ವಿಜೃಂಭಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗುರು ಕುಲ ಶಿಕ್ಷಣದ ಮೂಲಕ ಸಾಂಸ್ಕೃತಿಕ ದಾಸ್ಯ ಮರುಕಳಿಸುತ್ತಿದೆ. ಇದು ಮುಕ್ತವಾಗದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದು ಅವರು ತಿಳಿಸಿದರು.

ಬಹುರೂಪಿ ಸಂಚಾಲಕ ಪ್ರೊ.ಎಚ್‌.ಎಸ್‌‍. ಉಮೇಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಇದ್ದರು.

ಬಸವಣ್ಣ ತನ್ನ ಹುಟ್ಟನ್ನು ತಿರಸ್ಕರಿಸಿ ಚನ್ನಯ್ಯ ಮತ್ತು ಕಕ್ಕಯ್ಯನ ಮನೆಯ ಮಕ್ಕಳ ಸಂಗದಲ್ಲಿ ಹುಟ್ಟಿದನೆಂದು ಘೋಷಿಸಿಕೊಂಡ. ನೀಚತ್ವದ ಒಳಗೆ ಪವಿತ್ರಿಕರೀಸಿಕೊಂಡು ಹೊಸ ಹುಟ್ಟು ಪಡೆದ. ಬಸವಣ್ಣ ಬಹುತ್ವದ ಭಾರತದ ಪ್ರತೀಕ. ನಮ್ಮ ಬಸವಣ್ಣ ಹಿಂದುತ್ವದ ಬಸವಣ್ಣ. ಹಿಂದುತ್ವದ ರಾಮನಂತಲ್ಲ. ರಾಮನ ದ್ವೇಷದ ಪ್ರತೀಕವಾಗಿ ರೂಪಿಸಲಾಗಿದೆ. ಬಸವಣ್ಣ ಪ್ರೀತಿಯ ಪ್ರತಿರೂಪ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೋದರಳಿಯ ಜತೆ ಪತ್ನಿ ಪರಾರಿ: ಮಕ್ಕಳ ಕೊಂದ ತಂದೆ ಆತ್ಮ*ತ್ಯೆ - ತಾನೇ ಸಾಕಿದ್ದ ಅಕ್ಕನ ಮಗನಿಂದ ಮಹಾಮೋಸ
ತೆಂಗಿನ ನಾರಿನ 6000 ಮ್ಯಾಟ್‌ ರಾಜ್ಯದಿಂದ ಜೈಪುರಕ್ಕೆ ರಪ್ತು