ಕೊಪ್ಪಳ: ಸರ್ವರ ಸಮಾನತೆಗಾಗಿ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಎರಡು ಕಣ್ಣುಗಳಿದ್ದಂತೆ ಎಂದು ಕೊಪ್ಪಳ ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ಶೋಷಿತ ವರ್ಗದ ಕಣ್ಣೀರು ಒರೆಸುವ ಕೆಲಸ ಬಾಬು ಜಗಜೀವನ್ ರಾಮ್ ಮಾಡಿದ್ದಾರೆ. ದೇಶದಲ್ಲಿ ಆಹಾರದ ಕೊರತೆ ಉಂಟಾದಾಗ ಆಹಾರ ಉತ್ಪಾದನೆಗೆ ಒತ್ತು ಕೊಟ್ಟು ಅದಕ್ಕೆ ಪೂರಕವಾಗಿ ಕೈಗೊಂಡ ಕ್ರಮಗಳಿಂದ ಜಗಜೀವನ ರಾಮ್ ಹಸಿರು ಕ್ರಾಂತಿಯ ಹರಿಕಾರರೆಂದು ಕರೆಯಲಾಗುತ್ತದೆ. ದೇಶ,ಶ್ರಮಿಕ ಹಾಗೂ ಶೋಷಿತ ವರ್ಗಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಡಾ.ಬಾಬು ಜಗಜೀವನ ರಾಮ್ ಜೀವನ ಸಾಧನೆ ಸಮಾಜಕ್ಕೆ ದಾರಿದೀಪವಾಗಿದ್ದು, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮಹತ್ವ ಜನರಿಗೆ ತಿಳಿಸಿವೆ.ಅವರ ಆದರ್ಶ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಡಾ. ಸುರೇಶ್ ಬಿ.ಇಟ್ನಾಳ ಮಾತನಾಡಿ, ಭಾರತದ ಕೃಷಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಬಾಬುಜಿ ಕೊಡುಗೆ ಅನನ್ಯವಾಗಿದೆ.ಅವರು ಹಾಕಿಕೊಟ್ಟ ಸಾಮಾಜಿಕ ಸಮಾನತೆಯ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ.1968ರಲ್ಲಿ ಬಾಬು ಜಗಜೀವನ ರಾಮ್ ರಾಜಕೀಯ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿತ್ತು.ಆ ಸಮಯದಲ್ಲಿ ಅವರು ಕೇಂದ್ರ ಕೃಷಿ ಮತ್ತು ಆಹಾರ ಸಚಿವರಾಗಿ ಸೇವೆ ಸಲ್ಲಿಸಿದರು.1968ರ ಅವಧಿಯಲ್ಲಿ ದೇಶವು ಆಹಾರದ ಬಿಕ್ಕಟ್ಟಿನಲ್ಲಿದ್ದಾಗ ಡಾ. ಬಾಬು ಜಗಜೀವನ ರಾಮ್ ತೋರಿದ ದೃಢ ನಿರ್ಧಾರ ಇಂದಿಗೂ ಸ್ಮರಣೀಯ. ಕೃಷಿ ಸಚಿವರಾಗಿ ಜಾರಿಗೆ ತಂದ ಕ್ರಾಂತಿಕಾರಿ ಯೋಜನೆಗಳ ಫಲವಾಗಿ ಭಾರತವು ಆಹಾರದ ದಾಸ್ತಾನು ಮಾಡುವಲ್ಲಿ ಯಶಸ್ವಿಯಾಯಿತು.1968ರ ಹಸಿರು ಕ್ರಾಂತಿ ಯಶಸ್ಸು ಬಾಬುಜಿ ಆಡಳಿತಾತ್ಮಕ ಚಾಕಚಕ್ಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.ಕುಕನೂರು ತಾಲೂಕು ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಪ್ರಭುರಾಜ ಕೆ.ಎನ್. ವಿಶೇಷ ಉಪನ್ಯಾಸ ನೀಡಿದರು.
ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ:ಬಾಬು ಜಗಜೀವನ ರಾಮ್ ಅವರ 119 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಮತ್ತು ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಸಹಯೋಗದಲ್ಲಿ ನಗರದ ಹೊಸಪೇಟೆ ರಸ್ತೆಯ ಕಿಶೋರಿ ಪೆಟ್ರೋಲ್ ಬಂಕ್ ಹತ್ತಿರದ ಶಿವಶಾಂತವೀರ ನಗರದ ಅಂಬಿಗರ ಚೌಡಯ್ಯ ಉದ್ಯಾನವನದಲ್ಲಿರುವ ಮಹನೀಯರ (ಅಂಬೇಡ್ಕರ್, ಬಸವೇಶ್ವರ ಹಾಗೂ ಬಾಬು ಜಗಜೀವನ್ರಾಂ) ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಲಾಯಿತು.