ಬಾಲ್ಯವಿವಾಹಕ್ಕೆ ಮದುವೆ ಮುನ್ನಾದಿನ ತಡೆ

KannadaprabhaNewsNetwork |  
Published : Apr 06, 2026, 02:15 AM IST
5ಕೆಪಿಎಲ್21 ಶಾಲಾ ದಾಖಲಾತಿ ಪರಿಶೀಲಿಸುತ್ತಿರುವ ತಂಡ | Kannada Prabha

ಸಾರಾಂಶ

ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಮದುವೆ ಸಿದ್ಧತೆ ಭರದಿಂದ ನಡೆಯುತ್ತಿತ್ತು. ಬಾಲಕಿಯಾಗಿದ್ದರೂ ಆಕೆಯ ಆಧಾರ ಕಾರ್ಡ್‌ನಲ್ಲಿ 19 ವರ್ಷವಾಗಿರುವ ಮಾಹಿತಿ ಇದ್ದಿದ್ದರಿಂದ ಪಾಲಕರು ಅದನ್ನೇ ಮುಂದಿಟ್ಟುಕೊಂಡು ಮದುವೆ ಸಿದ್ಧತೆ ಮಾಡಿಕೊಂಡಿದ್ದರು.

ಸೋಮರಡ್ಡಿ ಅಳವಂಡಿ ಕೊಪ್ಪಳ

ಎಲ್ಲದಕ್ಕೂ ಆಧಾರ್‌ ಕಾರ್ಡ್‌ ಆಧಾರ. ಅದರ ಆಧಾರದಲ್ಲಿಯೇ ಎಲ್ಲವೂ ವ್ಯವಹಾರ ನಡೆಯುತ್ತದೆ. ಸರ್ಕಾರದ ಯೋಜನೆಯಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯಲು ಆಧಾರ ಕಾರ್ಡ್ ಬೇಕೇಬೇಕು. ಆದರೆ, ಇದೇ ಆಧಾರ್‌ ಕಾರ್ಡ್ ಆಧಾರದಲ್ಲಿಯೇ ಬಾಲ್ಯವಿವಾಹವೊಂದು ಏರ್ಪಟ್ಟಿದೆ. ಅದನ್ನೇ ಮುಂದಿಟ್ಟುಕೊಂಡು ಬಾಲಕಿಯನ್ನೇ ಹಸಿಮಣೆ ಏರಿಸಲು ಮುಂದಾಗಿದ್ದಾರೆ. ಅದೃಷ್ಟವಶಾತ್ 1098 ಬಂದ ಕರೆಯಿಂದ ತಪಾಸಣೆ ಮಾಡಿದಾಗ ಆಕೆ ಬಾಲಕಿ ಎನ್ನುವುದು ಗೊತ್ತಾಗಿದೆ. ಮದುವೆಯ ಮುನ್ನಾ ದಿನವೇ ಮದುವೆ ರದ್ದು ಮಾಡಲಾಗಿದೆ.

ಹೌದು, ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಮದುವೆ ಸಿದ್ಧತೆ ಭರದಿಂದ ನಡೆಯುತ್ತಿತ್ತು. ಬಾಲಕಿಯಾಗಿದ್ದರೂ ಆಕೆಯ ಆಧಾರ ಕಾರ್ಡ್‌ನಲ್ಲಿ 19 ವರ್ಷವಾಗಿರುವ ಮಾಹಿತಿ ಇದ್ದಿದ್ದರಿಂದ ಪಾಲಕರು ಅದನ್ನೇ ಮುಂದಿಟ್ಟುಕೊಂಡು ಮದುವೆ ಸಿದ್ಧತೆ ಮಾಡಿಕೊಂಡಿದ್ದರು. ಇದೆಲ್ಲವೂ ಗೊತ್ತಿದ್ದರೂ ಬಾಲ್ಯ ಎನ್ನುವುದನ್ನು ಮುಚ್ಚಿಡಲು ಬಂದವರಿಗೆಲ್ಲ ಬಾಲಕಿಯ ಆಧಾರ್‌ ಕಾರ್ಡ್ ತೋರಿಸುತ್ತಿದ್ದರು.

ಇನ್ನೇನು ಮದುವೆ ನಡೆದು ಹೋಗಬೇಕು. ಆದರೆ, ಈ ಕುರಿತು ವಿವಾಹವಾಗುತ್ತಿರುವುದು ಯುವತಿಯೇ ಅಲ್ಲ, ಆಕೆ ಬಾಲಕಿ ಎನ್ನುವ ಮಾಹಿತಿ 1098ಗೆ ಕರೆ ಮಾಡಿ ಯಾರೋ ಪುಣ್ಯಾತ್ಮರು ಮಾಹಿತಿ ನೀಡಿದರು.

ಇದನ್ನು ಬೆನ್ನು ಹತ್ತಿದ ಮಕ್ಕಳ ರಕ್ಷಣಾ ಘಟಕ ಮತ್ತು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೊಡ್ಡ ಸವಾಲು ಎನ್ನುವಂತಾಯಿತು. ಆದರೆ ಮಾಹಿತಿ ನೀಡಿದವರ ಮೇಲೆ ಖಚಿತ ನಂಬಿಕೆ ಇದ್ದಿದ್ದರಿಂದ ಆಧಾರ್‌ ಕಾರ್ಡ್‌ನಲ್ಲಿರುವ ಮಾಹಿತಿಯಲ್ಲಿ 19 ವರ್ಷ ಆಗಿದ್ದರೂ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ನಂಬಲಿಲ್ಲ. ಬದಲಾಗಿ ಶಾಲಾ ದಾಖಲಾತಿ ಪರಿಶೀಲನೆ ಮಾಡಲು ಮುಂದಾದರು. ಬಾಲಕಿಯ ವಯೋಮಿತಿ ಖಾತ್ರಿಪಡಿಸಿಕೊಳ್ಳಲು ಪ್ರಥಮವಾಗಿ ಜನನ ಪ್ರಮಾಣಪತ್ರ ಬೇಕು, ಎರಡನೆಯದಾಗಿ ಶಾಲಾ ದೃಢೀಕರಣ ಬೇಕು, ಒಂದು ವೇಳೆ ಮಗು ಶಾಲೆ ಕಲಿತಿಲ್ಲ ಅಂದಾಗ ಆ ವ್ಯಾಪ್ತಿಯ ಮುಖ್ಯೋಪಾಧ್ಯಾಯರಿಂದ ಮಗು ಶಾಲೆ ಕಲಿತಿಲ್ಲ ಎಂದು ದೃಢೀಕೃತ ಪತ್ರ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನೀಡಬೇಕು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ವೈದ್ಯಕೀಯ ತಪಾಸಣೆಗಾಗಿ ಪತ್ರ ನೀಡುತ್ತಾರೆ. ಇದರಿಂದ ವೈದಕೀಯ ತಪಾಸಣೆ ಮಾಡಿ, ಮೆಡಿಕಲ್ ಸರ್ಟಿಫಿಕೆಟ್ ತೆಗೆದುಕೊಳ್ಳಬೇಕು. ಈ ಮೂರನ್ನು ಹೊರತುಪಡಿಸಿ ಬೇರೆ ಯಾವುದೇ ದಾಖಲೆ ವಿವಾಹಕ್ಕೆ ನಡೆಯುವುದಿಲ್ಲ ಎಂದು ಕುಟುಂಬಸ್ಥರಿಗೆ ಅರಿವು ಮೂಡಿಸಿದ್ದಾರೆ.

ಶಾಲೆ ಕಲಿತಿಲ್ಲ ಎಂದು ಪಾಲಕರು ಹೇಳಿದ್ದರಿಂದ ಆ ವ್ಯಾಪ್ತಿಯ ಶಾಲೆಯಲ್ಲಿ ಮಗುವಿನ ಮಾಹಿತಿ ಪಡೆಯೋಣ ಎಂದು ಶಾಲೆಯ ಮುಖ್ಯೋಪಾಧ್ಯಾಯರ ಬಳಿ ಹೋಗಿದ್ದಾರೆ. ಶಾಲಾ ದಾಖಲಾತಿ ಪರಿಶೀಲಿಸಿದಾಗ ಬಾಲಕಿ ಶಾಲೆಗೆ ಹೋಗಿರುವುದು ಗೊತ್ತಾಗಿದೆ. ಶಾಲಾ ದಾಖಲಾತಿಯ ಪ್ರಕಾರ ಬಾಲಕಿಗೆ 17 ವರ್ಷ ಎಂಬುದು ತಂಡಕ್ಕೆ ಖಾತ್ರಿಯಾಗಿದೆ. ಶಾಲೆ ಕಲಿತಿಲ್ಲ ಎಂದು ಸುಳ್ಳು ಹೇಳಿ, ಆಧಾರ್‌ ಕಾರ್ಡ್ ಆಧಾರದಲ್ಲಿಯೇ ಮದುವೆ ಮಾಡಲು ಮುಂದಾಗಿದ್ದ ಕುಟುಂಬಕ್ಕೆ ಶಾಕ್ ಆಗಿದೆ.

ವಯಸ್ಸನ್ನು ಖಾತ್ರಿಪಡಿಸಿಕೊಂಡು ಬಾಲಕಿಯನ್ನು ರಕ್ಷಣೆ ಮಾಡಬೇಕೆನ್ನುವಷ್ಟರಲ್ಲಿ ಮಧ್ಯರಾತ್ರಿ 12 ಗಂಟೆಗೆ ಕುಟುಂಬಸ್ಥರು ಗಾಬರಿಯಾಗಿ ಮಗುವನ್ನು ಬೇರೆ ಕಡೆ ಕಳುಹಿಸಿದ್ದಾರೆ. ಇದನ್ನು ಗಮನಿಸಿದ್ದ ಮಕ್ಕಳ ರಕ್ಷಣಾ ತಂಡ ಕುಟುಂಬದವರಿಗೆ ಬಾಲಕಿಯನ್ನು ಕೂಡಲೇ ಒಪ್ಪಿಸಿ, ಇಲ್ಲದಿದ್ದರೆ ಕಾನೂನು ರೀತಿ ಕ್ರಮ ವಹಿಸಲಾಗುವುದು ಎಚ್ಚರಿಸಿದ್ದಾರೆ. ಆಗ ಬಾಲಕಿಯನ್ನು ಕುಟುಂಬಸ್ಥರು ಒಪ್ಪಿಸಿದ್ದಾರೆ. ಬಾಲಕಿಯನ್ನು ಬಾಲಮಂದಿರದಲ್ಲಿರಿಸಲಾಗಿದೆ. ಬೆಳಗಾಗಿದ್ದರೆ ಬಾಲ್ಯವಿವಾಹವೊಂದು ನಡೆದು ಹೋಗಬೇಕಾಗಿದ್ದನ್ನು ಮಕ್ಕಳ ರಕ್ಷಣಾ ಘಟಕದವರು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಗುವಿನ ರಕ್ಷಣಾ ತಂಡದಲ್ಲಿ ಬಿಆರ್‌ಸಿ, ವಲಯ ಮೇಲ್ವಿಚಾರಕರು, ಅಕ್ಕಪಡೆ, ಮಕ್ಕಳ ಸಹಾಯವಾಣಿ ಸಂಯೋಜಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕರು, ಶಾಲಾ ಮುಖ್ಯೋಪಾಧ್ಯಾಯರು ಇದ್ದರು.

ವಯೋ ಲೆಕ್ಕಾಚಾರಕ್ಕಲ್ಲ ಆಧಾರ್‌ ಕಾರ್ಡ್: ಆಧಾರ್‌ ಕಾರ್ಡ್ ಆಧಾರದಲ್ಲಿ ವಯಸ್ಸಿನ ಲೆಕ್ಕಾಚಾರ ಮಾಡುವುದು ಅಧಿಕೃತ ಅಲ್ಲವೇ ಅಲ್ಲ. ಜನ್ಮ ಪ್ರಮಾಣ ಪತ್ರ, ಶಾಲಾ ದೃಢೀಕರಣ ಕಡ್ಡಾಯ. ಇವೆರಡು ಇರದಿದ್ದರೆ ವೈದ್ಯಕೀಯ ತಪಾಸಣೆ ಮಾಡಬೇಕು. ಆಧಾರ್‌ ಕಾರ್ಡ್ ಆಧಾರದಲ್ಲಿ ಮದುವೆ ವಯಸ್ಸು ನಿರ್ಧರಿಸುವಂತೆಯೇ ಇಲ್ಲ.

ಬಾಲ್ಯ ವಿವಾಹ ಮಾಡಲು ಮುಂದಾದ ಮಾಹಿತಿಯನ್ನಾಧರಿಸಿ ನಮ್ಮ ಸಿಬ್ಬಂದಿ ದಾಳಿ ಮಾಡಿದ್ದರಿಂದ ಬಾಲ್ಯವಿವಾಹವೊಂದು ತಪ್ಪಿದೆ. ಮದುವೆ ಮುನ್ನಾ ದಿನವೇ ಮದುವೆ ರದ್ದು ಮಾಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜೀ, ಅಂಬೇಡ್ಕರ್‌ ಸಮಾಜದ ಎರಡು ಕಣ್ಣುಗಳಿದ್ದಂತೆ
ದಲಿತೋದ್ಧಾರಕ ಬಾಬು ಜಗಜೀವನರಾಮ್