ಕನ್ನಡಪ್ರಭ ವಾರ್ತೆ ಮೈಸೂರು
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿವಿಯ ಶಾಖೆ ವತಿಯಿಂದ ಆಯೋಜಿಸಿದ್ದ ಬ್ರಹ್ಮಾಕುಮಾರಿಯ 88ನೇ ವಾರ್ಷಿಕೋತ್ಸವ ಅಂಗವಾಗಿ ಹಾಗೂ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಸರಸ್ವತಿಪುರಂನ ಸೋಮಾನಿ ಡಿ.ಇಡಿ ಕಾಲೇಜಿನ ಅವರಣದಲ್ಲಿ ಹನ್ನೊಂದು ದಿನಗಳ ಪ್ರವಚನ, ಆಧ್ಯಾತ್ಮ ಸಂಬಂಧಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.
11 ದಿನಗಳು ಕೂಡ ಪ್ರವಚನ, ಪೂಜೆ, ಪ್ರಸಾದ ವಿತರಿಸಲಾಯಿತು. ಅದರಲ್ಲೂ ಶ್ರೀ ಮಹಾಕಾಳೇಶ್ವರ ದೇವಸ್ಥಾನವನ್ನು ಆಕರ್ಷಕವಾಗಿ ನಿರ್ಮಿಸಲಾಗಿತ್ತು. ದಿನ ಸಂಜೆ ವಿಶೇಷ ಪೂಜೆ ನೆರವೇರಿಸಲಾಯಿತು. ವಿಶಾಲವಾದ ಮಂಟಪ, ಗರ್ಭಗುಡಿಯಲ್ಲಿ ಶ್ರೀ ಮಹಾಕಾಳೇಶ್ವರ ಲಿಂಗ ಸರ್ವಾಲಂಕಾರದಿಂದ ಭಕ್ತರ ಮನಸೆಳೆಯಿತು. ದೇವಸ್ಥಾನ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿತ್ತು.ಜೊತೆಗೆ ಅದೇ ಆವರಣದಲ್ಲಿ ಶಿವನ ಕುರಿತಾದ ವಿವಿಧ ಚಿತ್ರ ಪ್ರದರ್ಶನ ನಿರ್ಮಿಸಿ, ಬಂದ ಭಕ್ತರಿಗೆ ಅದರ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಲಾಯಿತು. ವಿಶಾಲವಾದ ವೇದಿಕೆಯಲ್ಲಿ ಹಲವು ಕಾರ್ಯಕ್ರಮಗಳು ದಿನದಿಂದ ದಿನಕ್ಕೆ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣ ಕೇಂದ್ರವಾಗಿದ್ದ ನವಗಾನ ಮಿಲನ ಟ್ರಸ್ಟ್ ನ ಸದಸ್ಯರು ಐದು ದಿನಗಳು ಸಂಜೆ ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ, ಹಾಗೂ ಚಲನಚಿತ್ರಗಳಲ್ಲಿ ಅಳವಳಿಸಲಾದ ಭಕ್ತಿ ಪ್ರಧಾನ ಗೀತೆಗಳನ್ನು ಸಾದರಪಡಿಸಿದರು.ಕಾರ್ಯಕ್ರಮದಲ್ಲಿ ರಮೇಶ್, ಗೌರಿಶಂಕರ್, ಪರಶಿವಮೂರ್ತಿ, ಮಹದೇವ್, ಫುಡ್ ಮಹೇಶ್, ಕಾಳಿಹುಂಡಿ ಶಿವಕುಮಾರ್, ನಂದೀಶ್, ರಾಜು, ಮಹೇಶ್ ದೀನಬಂಧು, ಧರ್ಮೇಂದ್ರ ಮೊದಲಾದವರು ತಮ್ಮ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಮಂಜುಳಾ, ಸೌಭಾಗ್ಯಾ, ಪ್ರಸಾದ್, ಚಂದ್ರಶೇಖರ್, ಲೀಲಾವತಿ, ರೇಣು ಪಾಲ್ಗೊಂಡಿದ್ದರು.ಜೊತೆಗೆ ರಶ್ಮಿ ಅವರು ತಮ್ಮ ವಿಶಿಷ್ಟ ರೀತಿಯ ಪ್ರವಚನದ ಮೂಲಕ ಎಲ್ಲರೂ ಗಮನಸೆಳೆದರು. 11 ದಿನಗಳು ಕೂಡ ಸರಸ್ವತಿಪುರಂನ ಅಕ್ಕಪಕ್ಕದ ಬಡಾವಣೆಗಳಿಂದಲೂ ಕೂಡ ಭಕ್ತರು ಬಿಡುವು ಮಾಡಿಕೊಂಡು ಬಂದು ಶ್ರೀ ಮಹಾಕಾಳೇಶ್ವರನ ಕೃಪೆಗೆ ಪಾತ್ರರಾದರು.
ಅಂತಿಮ ದಿನ ರಂಗೋಲಿ ಸ್ಪರ್ಧೆ ಮತ್ತು ಮಕ್ಕಳ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ತಮ್ಮ ಗೀತೆಗಳ ಮೂಲಕ ಭಕ್ತರ ಗಮನಸೆಳೆದ ನವಗಾನ ಮಿಲನ ಟ್ರಸ್ಟ್ ನ ಸದಸ್ಯರನ್ನು ಸನ್ಮಾನಿಸಲಾಯಿತು.