ಕನ್ನಡಪ್ರಭ ವಾರ್ತೆ ಮಧುಗಿರಿ
24 ರಂದು ಬಗರ್ ಹುಕುಂ ಸಭೆ ನಡೆಸಿ ರೈತರಿಗೆ ನ್ಯಾಯ ದೊರಕಿಸುವುದಾಗಿ ಶಾಸಕ ಕೆ.ಎನ್.ರಾಜಣ್ಣ ಭರವಸೆ ನೀಡಿದರು.ತಾಲೂಕಿನ ದೊಡ್ಡೇರಿಯಲ್ಲಿ ಬುಧವಾರ ಹೋಬಳಿ ಮಟ್ಟದ ಜನಸ್ಪಂದನ ಸವಲತ್ತುಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಡ ರೈತರು ಅಲ್ಪ ಸ್ವಲ್ಪ ಜಮೀನನ್ನು ಉಳುಮೆ ಮಾಡುತ್ತಿದ್ದು, ಅವರಿಗೂ ನ್ಯಾಯ ದೊರಕಿಸಲು ಬದ್ಧನಿದ್ದೇನೆ. ಇದರಿಂದ ರೈತರಿಗೆ ಅನುಕೂಲ ಮಾಡಿ ಕೊಡಲು ಅಧಿಕಾರಿಗಳು ಕಾಳಜಿ ವಹಿಸಬೇಕು. ಇಲ್ಲಿ ಕೆಲವರು ಬೆಂಗಳೂರಿಂದ ಬಂದು ಜಮೀನು ಹಿಡಿದು ಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಅರ್ಜಿಗಳು ಸಹ ಬಂದಿದ್ದು ಈ ಬಗ್ಗೆ ನ್ಯಾಯದೊರೆಕಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಶೇ. 70ರಷ್ಟು ಅರ್ಜಿಗಳು ಜನ ಸಂಪರ್ಕ ಸಭೆಗಳಲ್ಲಿ ಕಂದಾಯ ಇಲಾಖೆಯ ಅರ್ಜಿಗಳು ಬರುತ್ತಿದ್ದು, ಪೌತಿ ಖಾತೆ ಆಂದೋಲನ ಶುರು ಮಾಡಿದ ನಂತರ ಜಿಲ್ಲೆಯಲ್ಲಿ 33.566 ಪೌತಿ ಖಾತೆ ಅರ್ಜಿಗಳನ್ನು ಬಂದಿದ್ದು, ಈ ಪೈಕಿ ಮಧುಗಿರಿ ತಾಲೂಕಿನಲ್ಲಿ 1351 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, ರಾಜ್ಯದಲ್ಲೇ ನಮ್ಮ ತುಮಕೂರು ಜಿಲ್ಲೆ 2ನೇ ಸ್ಥಾನದಲ್ಲಿದ್ದು, ಜಿಲ್ಲಿಯಲ್ಲಿ 3 ಲಕ್ಷ ಪೌತಿ ಖಾತೆಗಳು ಬಾಕಿಯಿವೆ ಎಂದು ಮಾಹಿತಿ ನೀಡಿದರು.ಜಿಪಂ ಸಿಇಒ ಜಿ.ಪ್ರಬು ಮಾತನಾಡಿ, ನರೇಗಾದಲ್ಲಿ ರಾಜ್ಯಕ್ಕೆ ನಮ್ಮ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು ರಾಜ್ಯದಲ್ಲಿ 500 ಆಸ್ಪತ್ರೆಗಳನ್ನು ಪ್ರಾರಂಭಿಸುವ ಗುರಿಯಿದ್ದು, ಜಿಲ್ಲೆಯಲ್ಲಿ 135, ಮಧುಗಿರಿ ತಾಲೂಕಿನಲ್ಲಿ 26 ಹೊಸ ಆಸ್ಪತ್ರೆ ಕಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶದ ಪರಶುರಾಮ್ ಚಿನ್ನೋಳ್,ತಹಸೀಲ್ದಾರ್ ಎಚ್.ಶ್ರೀನಿವಾಸ್ ,ತಾಪಂ ಮಾಜಿ ಸದಸ್ಯ ಪ್ರಸನ್ನಕುಮಾರ್ ಮಾತನಾಡಿದರು. ಸಮಾರಂಭದಲ್ಲಿ ಎಸಿ ಗೋಟೂರು ಶಿವಪ್ಪ, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್,ಪಿಡಬ್ಲ್ಯೂಡಿ ಇಇ ಹನುಮಂತರಾವ್, .ಜಿಪಂ.ಎಇಇ ಮಂಜನಾಥ್ ಇತರರಿದ್ದರು.