ಹರಿಹರದಲ್ಲಿ ತ್ಯಾಗ, ಬಲಿದಾನ ಸಂಕೇತವಾದ ಬಕ್ರೀದ್‌ ಸಂಭ್ರಮ

KannadaprabhaNewsNetwork |  
Published : Jun 18, 2024, 12:59 AM ISTUpdated : Jun 18, 2024, 10:03 AM IST
ಹರಿಹರದಲ್ಲಿ ಸೋಮವಾರ ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆ ನಡೆಸಿದರು. | Kannada Prabha

ಸಾರಾಂಶ

ತ್ಯಾಗ, ಬಲಿದಾನದ ಸಂಕೇತವಾದ ಈದ್-ಉಲ್-ಅಧಾ (ಬಕ್ರೀದ್) ಹಬ್ಬವನ್ನು ಮುಸ್ಲಿಂ ಬಾಂಧವರು ಹರಿಹರ ತಾಲೂಕಿನಾದ್ಯಂತ ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಿದರು.

 ಹರಿಹರ : ತ್ಯಾಗ, ಬಲಿದಾನದ ಸಂಕೇತವಾದ ಈದ್-ಉಲ್-ಅಧಾ (ಬಕ್ರೀದ್) ಹಬ್ಬವನ್ನು ಮುಸ್ಲಿಂ ಬಾಂಧವರು ತಾಲೂಕಿನಾದ್ಯಂತ ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಿದರು.

ನಗರದಲ್ಲಿ ಬೆಳಗ್ಗೆ ಅಹ್ಲೆ ಸುನ್ನತ್ ಪಂಗಡದವರು ಅಂಜುಮನ್ ಕಾಲೇಜು ಮುಂಭಾಗದ ಈದ್ಗಾ ಮೈದಾನದಲ್ಲಿ, ಅಹ್ಲೆ ಹದೀಸ್ ಪಂಗಡದವರು ಜೈಭೀಮ ನಗರದ ಈದ್ಗಾ ಮೈದಾನದಲ್ಲಿ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಹ್ಲೆ ಹದೀಸ್ ಈದ್ಗಾ ಮೈದಾನದಲ್ಲಿ ನೂರಾರು ಮಹಿಳೆಯರೂ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಪ್ರವಚನ ನೀಡಿದ ಮೌಲಾನಾರವರು, ಅಲ್ಲಾಹನ ಇಚ್ಚೆಯಂತೆ ಪ್ರವಾದಿ ಇಬ್ರಾಹಿಂ ಅವರು ಇಳಿವಯಸ್ಸಿನಲ್ಲಿ ಪುತ್ರ ಇಸ್ಮಾಯಿಲರನ್ನು ಬಲಿ ಕೊಡಲು ಸಿದ್ಧರಾದರು. ಆ ಘಟನೆಯ ಪ್ರತೀಕವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಪ್ರಾಣಿ ಬಲಿ ಕೊಡುವುದು ಇಲ್ಲಿ ಸಾಂಕೇತಿಕವಾಗಿದೆ. ಅಗತ್ಯ ಬಿದ್ದಾಗ ನೆರೆಹೊರೆ, ನಾಡು, ದೇಶ, ಧರ್ಮ, ಮಾನವ ಕುಲಕ್ಕಾಗಿ ಧನ, ಸಮಯ, ಶಕ್ತಿ, ಸಾಮರ್ಥ್ಯ, ಸಂಪನ್ಮೂಲಗಳ ತ್ಯಾಗ ಮಾಡಬೇಕೆಂಬುದು ಹಬ್ಬದ ತಿರುಳಾಗಿದೆ ಎಂದರು.

ನಾವು ತಿಂದುಂಡು ಪಕ್ಕದ ಮನೆಯವರು ಹಸಿದಿದ್ದರೆ ಸೃಷ್ಟಿಕರ್ತ ನಮ್ಮ ಬದುಕನ್ನು ಮೆಚ್ಚನು. ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ಸರಿ ಹಸಿದವರ ಹಸಿವು, ಕೊರತೆಗಳನ್ನು ಶಕ್ತಿ ಇದ್ದವರು ನೀಗಿಸಬೇಕು. ತೊಂದರೆಯಲ್ಲಿ ಇದ್ದವರು ಮುಸ್ಲಿಮೇತರರಿದ್ದರೂ ಸಹಾಯಹಸ್ತ ಚಾಚಬೇಕು. ಅಂತಹವರ ತ್ಯಾಗ, ಬಲಿದಾನಗಳನ್ನು ದೇವರು ಮೆಚ್ಚುತ್ತಾನೆ ಎಂದು ಹೇಳಿದರು.

ಪ್ರಾರ್ಥನೆಗೆ ಮುನ್ನ ಆಯಾ ಮಸೀದಿಗಳಿಂದ ಜನರು ಗುಂಪಾಗಿ ಧಾರ್ಮಿಕ ಕೀರ್ತನೆಗಳನ್ನು ಪಠಿಸುತ್ತ ಈದ್ಗಾ ಮೈದಾನದತ್ತ ಸಾಗಿದರು. ಹೊಸ ಬಟ್ಟೆ ತೊಟ್ಟ ಮಕ್ಕಳು ಸಂಭ್ರಮಿಸಿದರು. ಅಂಜುಮನ್-ಎ-ಇಸ್ಲಾಮಿಯಾ ಸಂಸ್ಥೆ ಪದಾಧಿಕಾರಿಗಳು, ಸಮುದಾಯದ ನಗರಸಭಾ ಸದಸ್ಯರು, ಮುಖಂಡರು ಇದ್ದರು. ವಿವಿಧ ಪಕ್ಷಗಳ ಮುಖಂಡರು ಸ್ಥಳಕ್ಕೆ ಆಗಮಿಸಿ ಶುಭ ಕೋರಿದರು.

ಎರಡೂ ಈದ್ಗಾ ಮೈದಾನಗಳಲ್ಲಿ ಮಳೆಗಾಗಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ತಾಲೂಕಿನ ಮಲೇಬೆನ್ನೂರು, ಭಾನುವಳ್ಳಿ, ಬೆಳ್ಳೂಡಿ, ಕರಲಹಳ್ಳಿ, ರಾಜನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಮಸೀದಿ, ಈದ್ಗಾ ಮೈದಾನಗಳಲ್ಲಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಅನಂತರ ಮನೆಗಳಲ್ಲಿ ವಿಶೇಷ ಅಡುಗೆ ತಯಾರಿಸಿ, ಸೇವಿಸಿದರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ
ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು