ಬಕ್ರೀದ್‌: ಆಕ್ರಮ ಗೋಹತ್ಯೆ, ಸಾಗಾಟ ತಡೆಯಿರಿ

KannadaprabhaNewsNetwork | Published : Jun 3, 2025 12:04 AM
ಇದೇ ಜೂನ್‌ 6ರಂದು ಬಕ್ರಿದ್‌ ಹಬ್ಬದ ಆಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಅಕ್ರಮ ಗೋಹತ್ಯೆ ಹಾಗೂ ಗೋ ಸಾಗಾಟ ತಡೆಯಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ತಿಳಿಸಿದರು.

ಕನ್ನಡಪ್ರಭ, ವಾರ್ತೆ, ಬೀದರ್‌

ಇದೇ ಜೂನ್‌ 6ರಂದು ಬಕ್ರಿದ್‌ ಹಬ್ಬದ ಆಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಅಕ್ರಮ ಗೋಹತ್ಯೆ ಹಾಗೂ ಗೋ ಸಾಗಾಟ ತಡೆಯಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ತಿಳಿಸಿದರು.

ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, ಜಿಲ್ಲಾ ಪೊಲೀಸ್‌ ಅಧೀಕ್ಷಕರು, ಜಿಲ್ಲಾಧಿಕಾರಿಗಳು, ಆರ್‌ಟಿಓ ಮತ್ತು ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಬೀದರ್‌ ಜಿಲ್ಲೆಯ ಗಡಿಯಲ್ಲಿ ಅಕ್ರಮ ಗೋವು ಸಾಗಾಟ ಕಂಡುಬಂದರೆ ಅವರನ್ನು ಬಂಧಿಸಿ, ವಾಹನಗಳನ್ನು ಜಪ್ತಿ ಮಾಡಿ, ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಲ್ಲಿದೆ. ಅದನ್ನು ಪಾಲಿಸಿದರೆ ಗೋಹತ್ಯೆ ತಡೆಯಬಹುದು. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು. ಕೆಲವು ಸೀಮಿತ ಪ್ರದೇಶಗಳಲ್ಲಿ ಗೋಹತ್ಯೆ ಹೆಚ್ಚಾಗಿ ನಡೆಸಲಾಗುತ್ತದೆ. ಅಂತಹ ಪ್ರದೇಶಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಡಬೇಕು. ಗೋಹತ್ಯೆ ನಿಷೇಧ ಹಾಗೂ ಸಂರಕ್ಷಣಾ ಕಾಯಿದೆ ಅನ್ವಯ ಕ್ರಮಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದರು.

ಅಗತ್ಯ ಕ್ರಮದ ಕುರಿತು ಚರ್ಚಿಸಲು ಪೊಲೀಸ್‌, ಪ್ರಾದೇಶಿಕ ಸಾರಿಗೆ, ಪಶು ಸಂಗೋಪನೆ ಇಲಾಖೆ ಸೇರಿದಂತೆ ವಿವಿದ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ನಿಯಮದ ಪ್ರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಒಂದು ವೇಳೆ ಸರ್ಕಾರದ ಕಾಯ್ದೆ, ಕಾನೂನು ಉಲ್ಲಂಘಿಸಿ ಇಂತಹ ಪ್ರಕರಣಗಳು ನಡೆಸುವುದು ಗಮನಕ್ಕೆ ಬಂದರೆ ನಮ್ಮ ಸಂಘಟನೆ ತೀವ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಶಿವಕುಮಾರ ಎಚ್ಚರಿಸಿದರು.

ಇದೇ ವೇಳೆ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತಿಯ ಕಾರ್ಯಕಾರಿಣಿ ಸದಸ್ಯರಾದ ರಾಮಕೃಷ್ಣನ್‌ ಸಾಳೆ, ವಿಭಾಗ ಕಾರ್ಯದರ್ಶಿ ಅಂಬರೇಶ್‌ ಸೂಲೆಗಾಂವೆ, ಪ್ರಾಂತ ವಿಶೇಷ ಸಂಪರ್ಕ ಸಹ ಪ್ರಮುಖರಾದ ಸತೀಶ ನೌಬಾದೆ, ಜಿಲ್ಲಾ ಉಪಾಧ್ಯಕ್ಷ ಸಂಗಮೇಶ ಗಾದಗಿ, ಭಜರಂಗ ದಳದ ಜಿಲ್ಲಾ ಸಂಯೋಜಕ ಭೀಮಣ್ಣ ಸೊರಳ್ಳಿ, ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಯದಲಾಪುರೆ, ಬೀದರ್‌ ನಗರಾಧ್ಯಕ್ಷ ವೀರೇಂದ್ರ ಶಾಸ್ತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

---------

ಅಧಿಕಾರಿಗಳು ಈ ಕುರಿತು ಎಚ್ಚರಿಕೆಯಿಂದ ಗೋಹತ್ಯೆ ನಿಷೇಧ ಕಾಯಿದೆ-2020ರ ಪ್ರಕಾರ ಅಪರಾಧ ತಡೆಹಿಡಿಯಬೇಕು. ಇಲ್ಲದಿದ್ದರೆ ಆ ಕೆಲಸ ನಾವು ಮಾಡಬೇಕಾಗುತ್ತದೆ.

ಶಿವಕುಮಾರ ಬೋಳಶೆಟ್ಟಿ, ವಿಹಿಂಪ ಪ್ರಾಂತ ಕಾರ್ಯದರ್ಶಿ