ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ನೀಡಿದಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ. ಅಲ್ಲದೆ ಸಂಸ್ಕಾರದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಗಮನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅರಕಲಗೂಡು ತಾಲೂಕು ಘಟಕದ ಅಧ್ಯಕ್ಷ ಎಂ.ಎಂ. ಸುರೇಶ್ ತಿಳಿಸಿದರು.ಅವರು ಬಸವಾಪಟ್ಟಣ ಗ್ರಾಮದ ಎಸ್.ಸಿ.ವಿ.ಡಿ.ಎಸ್ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಮತ್ತು ವಯೋ ನಿವೃತ್ತಿ ಹೊಂದುತ್ತಿರುವ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಗುರುವಿಗೆ ಸಮಾಜದಲ್ಲಿ ಉತ್ತಮ ಸ್ಥಾನವಿದೆ. ಗುರುವಿನಿಂದಲೇ ಹೆಚ್ಚು ಸಂಸ್ಕಾರ ದೊರೆಯುತ್ತದೆ. ತಂದೆ- ತಾಯಿಗಳು, ಸಮಾಜ ಈ ನಿಟ್ಟಿನಲ್ಲಿ ಚಿಂತನೆ ಮಾಡಿ ಮಕ್ಕಳಿಗೆ ಸಂಸ್ಕಾರ ನೀಡಲು ಮುಂದಾಗುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಸಿ.ವಿ.ಡಿ.ಎಸ್ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಎಚ್. ಬಿ. ಲಿಂಗಮೂರ್ತಿ ಹಾಗೂ ಕೆ.ವಿ. ಚಂದ್ರಶೇಖರ್ ರವರಿಗೆ ಸನ್ಮಾನ ಅಲ್ಲದೆ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಎನ್. ಎಚ್. ಶಿವಮೂರ್ತಿ, ಬಿ. ಎಮ್. ಜಯಣ್ಣ, ಶ್ರೀ ಜಿ. ಮಹೇಶ್, ಶ್ರೀಮತಿ ನಳಿನಿ ಹಾಗೂ ಅಶೋಕ್ ಇವರಿಗೆ ಗುರುವಂದನೆ, ಪ್ರಸ್ತುತ ಶಿಕ್ಷಕರಿಗೆ ಅಭಿನಂದನೆ ಜೊತೆಗೆ ೨೦೨೪-೨೫ ನೇ ಸಾಲಿನಲ್ಲಿ ಹೆಚ್ಚು ಅಂಕಪಡೆದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಾಣಿಜ್ಯೋದ್ಯಮಿ ಅಂಬರೀಷ್, ಬಿ. ಜಿ. ಚನ್ನಬಸಪ್ಪ, ಮಹೇಂದ್ರ ಕುಮಾರ್ ಮಾತನಾಡಿ, ಎಸ್.ಸಿ.ವಿ. ಡಿ. ಎಸ್ ಶಾಲೆಯ ಬಗ್ಗೆ ಮೆಚ್ಚುಗೆಯ ಮಾತು ಮತ್ತು ವಿದ್ಯಾರ್ಥಿಗಳಿಗೆ ಹಿತನುಡಿ ಹೇಳಿದರು.ಸನ್ಮಾನಿತರ ಪರವಾಗಿ ಎಚ್. ಬಿ. ಲಿಂಗಮೂರ್ತಿ ಮಾತನಾಡಿದರು. ಹಿರಿಯ ವಿದ್ಯಾರ್ಥಿ ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ಬಸವಾಪಟ್ಟಣ ಸಿಆರ್ ಪಿ ವಿಶ್ವಶ್ವೇರಯ್ಯ, ಸಹ ಶಿಕ್ಷಕ ಸಂಘದ ಅಧ್ಯಕ್ಷ ಜಗದೀಶ್, ನಿವೃತ್ತ ಶಿಕ್ಷಕ ಟಿ. ಮಲ್ಲೇಶ್, ಪತ್ರಕರ್ತರಾದ ಎಂ. ಎನ್. ಕುಮಾರಸ್ವಾಮಿ, ಶಿಕ್ಷಣ ಇಲಾಖೆಯ ಅನೇಕರು ಹಾಜರಿದ್ದರು.
ವಯೋನಿವೃತ್ತಿ ಹೊಂದಿದ ಹಾಲಿ ಶಿಕ್ಷಕರಾದ ಕೆ. ವಿ. ಚಂದ್ರಶೇಖರವರಿಗೆ ತಾಲೂಕು ಶಿಕ್ಷಣ ಇಲಾಖೆ, ಹಿರಿಯ ವಿದ್ಯಾರ್ಥಿಗಳು, ಹಾಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಹೃದಯ ಸ್ಪರ್ಶಿ ಬೀಳ್ಕೊಡುಗೆ ಸನ್ಮಾನ ನೆರವೇರಿಸಿದರು.