- ಡ್ರೈವರ್ ಡಿಸ್ಪ್ಲೇ, ನೂತನ ಡಿವಿಜಿ ಸಂಖ್ಯೆ ನೀಡಲು ಎಸ್ಪಿಗೆ ಒಕ್ಕೂಟ ಮನವಿ
ಕನ್ನಡಪ್ರಭ ವಾರ್ತೆ ದಾವಣಗೆರೆ ಕರ್ನಾಟಕ ಚಾಲಕರ ಒಕ್ಕೂಟದಿಂದ ನಗರದ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಲಾಯಿತು.
ಒಕ್ಕೂಟದ ರಾಜ್ಯ ಸಂಚಾಲಕ ಡಿ.ಆರ್. ಅರವಿಂದಾಕ್ಷ ಮಾತನಾಡಿ, ದಾವಣಗೆರೆ ನಗರ ಸೇರಿದಂತೆ ರಾಜ್ಯಾದ್ಯಂತ ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಈ ಆದೇಶವನ್ನು ಕರ್ನಾಟಕ ಚಾಲಕ ಒಕ್ಕೂಟ ಸ್ವಾಗತಿಸುತ್ತದೆ ಎಂದರು.ಇದು ಶ್ರಮಜೀವಿ ಚಾಲಕರಿಗೆ ಹಾಗೂ ಕರ್ನಾಟಕ ಚಾಲಕರ ಒಕ್ಕೂಟಕ್ಕೆ ಸಿಕ್ಕ ಜಯವಾಗಿದೆ. ಕೋರ್ಟ್ಈ ಆದೇಶದ ಮೇರೆಗೆ ದಾವಣಗೆರೆಯಲ್ಲಿ ಸಾರಿಗೆ ಅಧಿಕಾರಿಗಳು ರಸ್ತೆಗೆ ಇಳಿದು ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಗರದಲ್ಲಿ ವಿವಿಧ ಕೆಲಸ ಮಾಡುವವರು ಪಾರ್ಟ್ ಟೈಂ ಆಗಿ ಆಟೋ ಚಾಲನೆ ಮಾಡುತ್ತಿದ್ದಾರೆ. ಇಂಥವರಿಗೆ ಲೈಸೆನ್ಸ್ ಆಗಲೀ, ಸಂಚಾರಿ ನಿಯಮದ ಅರಿವಾಗಲೀ ಇಲ್ಲ. ಪ್ರಯಾಣಿಕರ ಆಟೋಗಳಲ್ಲಿ ನಿಯಮ ಮೀರಿ ಲಗೇಜು ಸಾಗಾಣೆ ಮಾಡುತ್ತಿದ್ದಾರೆ. ಇದರಿಂದ ಇತರೆ ವಾಹನ ಸವಾರರಿಗೂ ರಸ್ತೆಯಲ್ಲಿ ತೊಂದರೆಗಳಾಗುತ್ತಿವೆ ಎಂದು ದೂರಿದರು.
ಈ ಕೂಡಲೇ ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಆದೇಶ ಮಾಡಿ, ಆಟೋ ಚಾಲಕರಿಗೆ ಡೈವರ್ ಡಿಸ್ಪ್ಲೇ ಹಾಗೂ ನಗರದ ಪರ್ಮಿಟ್ ಹೊಂದಿರುವ ಆಟೋಗಳಿಗೆ ಮಾತ್ರ ಡಿವಿಜಿ ಸಂಖ್ಯೆ ನೀಡುವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಬಿ. ಅಂಜುಕುಮಾರ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ್ ಪಿ., ಸದಸ್ಯರಾದ ವಿ.ಲೋಕೇಶ್, ಎಂ.ರಾಘವೇಂದ್ರ, ಗುಡ್ಡಪ್ಪ ಬಿಸಲೇರಿ ನಾಗರಾಜ್, ಎನ್.ಗುರುರಾಜ್ ಮತ್ತಿತರರಿದ್ದರು.
- - - -3ಕೆಡಿವಿಜಿ40.ಜೆಪಿಜಿ:ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಕರ್ನಾಟಕ ಚಾಲಕರ ಒಕ್ಕೂಟದಿಂದ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಲಾಯಿತು.