ಟಿಬಿ ವೃತ್ತದಲ್ಲಿ ಕಾಮಗಾರಿ ವೀಕ್ಷಿಸಿ ಶಾಸಕ ಗೋವಿಂದಪ್ಪ ಹೇಳಿಕೆಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದ ಟಿಬಿ ವೃತ್ತದಲ್ಲಿ ಹಾದುಹೊಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುಣಮಟ್ಟ ದಿಂದ ಕೂಡಿದ್ದು ವೈಜ್ಞಾನಿಕವಾಗಿಯೇ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ಗುರುವಾರ ಟಿಬಿ ವೃತ್ತದಲ್ಲಿ ಕಾಮಗಾರಿ ವೀಕ್ಷಿಸಿ ಮಾತನಾಡಿ, ಕೆಲವರು ಉದ್ದೇಶಪೂರ್ವಕವಾಗಿಯೇ ಟೀಕೆ ಮಾಡುವುದು ಸಹಜ ಅವರಿಗೆಲ್ಲಾ ಉತ್ತರಿಸಬೇಕಾದ ಅನಿವಾರ್ಯತೆಯಿಲ್ಲ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ ವಾಹನ ಸವಾರರಿಗೆ ಅಲ್ಪ ಪ್ರಮಾಣದಲ್ಲಿ ತೊಂದರೆಯಾಗಿರಬಹುದು ಕಾಮಗಾರಿ ಪೂರ್ಣಗೊಂಡ ನಂತರ ಎಲ್ಲವೂ ಸರಿಯಾಗಲಿದೆ ಎಂದರು.
ಪಟ್ಟಣದಿಂದ ಹೊರ ವಲಯದಲ್ಲಿ ಹಾದು ಹೊಗುತ್ತಿದ್ದ ಹೆದ್ದಾರಿಯನ್ನು ಪಟ್ಟಣದ ಅಭಿವೃದ್ದಿಯ ದೃಷ್ಠಿಯಿಂದ ಪಟ್ಟಣದ ಮೂಲಕ ಹಾದುಹೊಗುವಂತೆ ಮಾಡಿದ್ದೇನೆ. ಹಳ್ಳಿ ಕಟ್ಟೆಗಳ ಮೇಲೆ ಮಾಡುವ ಟೀಕೆಗಳಿಗೆಲ್ಲಾ ನಾನು ಉತ್ತರಿಸಬೇಕಿಲ್ಲ ಎಂದ ಅವರು ಸ್ಥಳದಲ್ಲಿದ್ದ ಹೆದ್ದಾರಿ ಪ್ರಾಧಿಕಾರದ ಎಇಇ ನರೇಂದ್ರ ಅವರಿಗೆ ಪಟ್ಟಣದ ಒಳಹೊಗುವ ರಸ್ತೆಯನ್ನು ಅಗಲಿಸುವಂತೆ ಹಾಗೆಯೇ ವೃತ್ತವನ್ನು ಯಾವರೀತಿ ಸುಂದರವಾಗಿ ಮಾಡಿದ್ದೀರೋ ಅದೇ ರೀತಿ ಅಂಬೇಡ್ಕರ್ ಪ್ರತಿಮೆಯಲ್ಲಿ ವೃತ್ತದಲ್ಲಿ ಸುಂದರವಾಗಿ ಕಾಣುವಂತೆ ಸ್ಥಾಪಿಸಬೇಕು ಎಂದು ಸೂಚಿಸಿದರು.ವೀಕ್ಷಣೆ ವೇಳೆ ಹಾಜರಿದ್ದ ಹೆದ್ದಾರಿ ಪ್ರಾಧಿಕಾರದ ಎಇಇ ನರೇಂದ್ರ ಮಾತನಾಡಿ ಟಿಬಿ ವೃತ್ತದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ರಸ್ತೆ ಕಾಮಗಾರಿ ಹೆದ್ದಾರಿ ಪ್ರಾಧಿಕಾರದ ಮಾರ್ಗ ಸೂಚಿಯಂತೆಯೇ ಮಾಡಲಾಗುತ್ತಿದೆ . ವೃತ್ತ ನಿರ್ಮಾಣ ಅವೈಜ್ಞಾನಿಕವಾಗಿಲ್ಲ . ಕಾಮಗಾರಿ ಪೂರ್ಣಗೊಂಡ ನಂತ ರಸ್ತೆ ಉಬ್ಬುಗಳನ್ನು, ಮಾರ್ಗ ಸೂಚಿ ಫಲಕಗಳನ್ನು ಅಳವಡಿಸಲಾಗುವುದು. ಆಗ ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಲು ಸಹಕಾರಿಯಾಗಲಿದೆ ಎಂದರು. ಈ ವೇಳೆ ಶಾಸಕರ ಆಪ್ತ ಸಲಹೆಗಾರ ಕೆ ಸಿ ನಿಂಗಪ್ಪ, ಮುಖಂಡರಾದ ಆಗ್ರೋ ಶಿವಣ್ಣ ಸೇರಿದಂತೆ ಕಾಂಗ್ರೇಸ್ ಮುಖಂಡರು ಹಾಜರಿದ್ದರು.