ಪುರಸಭೆ ಅಧಿಕಾರಿಗಳಿಗೆ ಬಾನಂದೂರು ಗ್ರಾಮಸ್ಥರ ತರಾಟೆ

KannadaprabhaNewsNetwork |  
Published : Sep 12, 2026, 01:15 AM IST
1.ಬಿಡದಿ ಪುರಸಭೆ ಮುಖ್ಯಾಧಿಕಾರಿ ಪ್ರಮೀಳಮ್ಮರವರು ಬಾನಂದೂರು ಗ್ರಾಮದಲ್ಲಿ ರಾಜಕಾಲುವೆ ಒತ್ತುವರಿ ಆಗಿರುವುದನ್ನು ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ಪೌರಾಡಳಿತ ಸಚಿವರಾದ ಬಾಲಕೃಷ್ಣರ ತವರು ಮಾಗಡಿ ಕ್ಷೇತ್ರ ವ್ಯಾಪ್ತಿಯ ಬಾನಂದೂರು ಗ್ರಾಮದಲ್ಲಿ ನಡೆದಿರುವ ಕಳಪೆ ಕಾಮಗಾರಿಯಿಂದ ಬೇಸತ್ತ ಗ್ರಾಮಸ್ಥರು ಶುಕ್ರವಾರ ಬಿಡದಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 16ರ ಬಾನಂದೂರು ಗ್ರಾಮದಲ್ಲಿ ನಡೆದಿರುವ ಚರಂಡಿ ಮತ್ತು ರಸ್ತೆ ಕಾಮಗಾರಿ ವೀಕ್ಷಣೆಗಾಗಿ ಆಗಮಿಸಿದ ಬಿಡದಿ ಪುರಸಭೆ ಮುಖ್ಯಾಧಿಕಾರಿ ಪ್ರಮೀಳಮ್ಮ ಮತ್ತು ಎಂಜಿನಿಯರ್ ಶಿಲ್ಪಾ ಅವರನ್ನು ಯುವ ಮುಖಂಡ ಹೋಟೆಲ್ ಜಗದೀಶ್ ನೇತೃತ್ವದಲ್ಲಿ ಗ್ರಾಮಸ್ಥರು ಕಳಪೆ ಕಾಮಗಾರಿ ನಡೆಯುತ್ತಿರುವುದನ್ನು ಪ್ರಶ್ನಿಸಿ ತರಾಟೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ರಾಮನಗರ

ಪೌರಾಡಳಿತ ಸಚಿವರಾದ ಬಾಲಕೃಷ್ಣರ ತವರು ಮಾಗಡಿ ಕ್ಷೇತ್ರ ವ್ಯಾಪ್ತಿಯ ಬಾನಂದೂರು ಗ್ರಾಮದಲ್ಲಿ ನಡೆದಿರುವ ಕಳಪೆ ಕಾಮಗಾರಿಯಿಂದ ಬೇಸತ್ತ ಗ್ರಾಮಸ್ಥರು ಶುಕ್ರವಾರ ಬಿಡದಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 16ರ ಬಾನಂದೂರು ಗ್ರಾಮದಲ್ಲಿ ನಡೆದಿರುವ ಚರಂಡಿ ಮತ್ತು ರಸ್ತೆ ಕಾಮಗಾರಿ ವೀಕ್ಷಣೆಗಾಗಿ ಆಗಮಿಸಿದ ಬಿಡದಿ ಪುರಸಭೆ ಮುಖ್ಯಾಧಿಕಾರಿ ಪ್ರಮೀಳಮ್ಮ ಮತ್ತು ಎಂಜಿನಿಯರ್ ಶಿಲ್ಪಾ ಅವರನ್ನು ಯುವ ಮುಖಂಡ ಹೋಟೆಲ್ ಜಗದೀಶ್ ನೇತೃತ್ವದಲ್ಲಿ ಗ್ರಾಮಸ್ಥರು ಕಳಪೆ ಕಾಮಗಾರಿ ನಡೆಯುತ್ತಿರುವುದನ್ನು ಪ್ರಶ್ನಿಸಿ ತರಾಟೆ ತೆಗೆದುಕೊಂಡರು.

ಗ್ರಾಮದ ಪ್ರಮುಖ ಮುಖ್ಯ ರಸ್ತೆ ಅಭಿವೃದ್ದಿ ಹಾಗೂ ಡೇರಿ ರಸ್ತೆಯಲ್ಲಿ ಚರಂಡಿಗಳನ್ನು ಅಸಮರ್ಪಕವಾಗಿ

ನಿರ್ಮಿಸಿದ್ದು, ಸಾರ್ವಜನಿಕರ ರಸ್ತೆಯನ್ನು ಉಳಿಸಬೇಕಾದ ಪುರಸಭೆ ಅಧಿಕಾರಿಗಳೇ ರಸ್ತೆಯನ್ನು ನುಂಗಿದ್ದಾರೆ. ರಸ್ತೆಯಲ್ಲಿ ನಿರ್ಮಿಸಿರು ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂದು ಗ್ರಾಮಸ್ಥರು ಎಂಜಿನಿಯರ್ ಶಿಲ್ಪಾ ಗಮನ ಸೆಳೆದರು.

ಇದಕ್ಕೆ ಕ್ಯಾರೆ ಎನ್ನದ ಎಂಜಿನಿಯರ್ ಶಿಲ್ಪಾ ನಿರ್ಲಕ್ಷ್ಯ ತೋರಿದಾಗ ಗ್ರಾಮಸ್ಥರು, ಕೂಡಲೇ ಹೊಸದಾಗಿ ಚರಂಡಿ ಕಾಮಗಾರಿ ನಡೆಸಬೇಕು. ಕಾಮಗಾರಿಗಳ ಅಸಮರ್ಪಕ ಮತ್ತು ಕಳಪೆಗೆ ಗುತ್ತಿಗೆದಾರರು ಮತ್ತು ಮೇಲ್ವಿಚಾರಣೆ ಮಾಡಿರುವ ಎಂಜಿನಿಯರ್ ಶಿಲ್ಪಾ ನೇರ ಕಾರಣರಾಗಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ರಾಜಕಾಲುವೆ-ನಕಾಶೆ ರಸ್ತೆ ಒತ್ತುವರಿ:

ಬೈರವನದೊಡ್ಡಿ-ಬಾನಂದೂರು ರಸ್ತೆ 80 ಅಡಿಗಳ ನಕಾಶೆ ರಸ್ತೆಯಾಗಿದ್ದು, ಪ್ರಭಾವಿ ವ್ಯಕ್ತಿಗಳು ರಸ್ತೆ ಒತ್ತುವರಿ ಮಾಡಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ, ಮಳಿಗೆ ಹಿಂಭಾಗ ಸಣ್ಣ ನೀರಾವರಿ ಇಲಾಖೆಗೆ ಸೇರಿದ ರಾಜಕಾಲುವೆಯನ್ನೂ ಒತ್ತುವರಿ ಮಾಡಿಕೊಳ್ಳಲಾಗಿದೆ. ನಲ್ಲಿಗುಡ್ಡೆಯಿಂದ ಬರುವ ನೀರು ಗೊಲ್ಲಹಳ್ಳಿ ಚೆಕ್ ಡ್ಯಾಂ ಮೂಲಕ ಬಾನಂದೂರು ಗ್ರಾಮದಲ್ಲಿ ಹಾದು ಹೋಗಿರುವ ರಾಜಕಾಲುವೆಯಲ್ಲಿ ಹರಿಯುತ್ತದೆ. ಆದರೆ, ನಾಲೆಯನ್ನೇ ಒತ್ತುವರಿ ಮಾಡಿಕೊಳ್ಳಲಾಗಿದೆ. ಈ ಕೂಡಲೇ ಪುರಸಭೆ, ಸಣ್ಣ ನೀರಾವರಿ ಇಲಾಖೆ, ಕಂದಾಯ ಇಲಾಖಾ ಅಧಿಕಾರಿಗಳು ಜಂಟಿಯಾಗಿ ಸರ್ವೆ ನಡೆಸಿ ರಾಜಕಾಲುವೆ ಹಾಗೂ ನಕಾಶೆ ರಸ್ತೆ ಉಳಿಸಿಕೊಡುವಂತೆ ಮುಖ್ಯಾಧಿಕಾರಿಗೆ ಮನವಿ ಮಾಡಿದರು.

ಗ್ರಾಮ ಮುಖಂಡ ಹೋಟೆಲ್ ಜಗದೀಶ್ ಮಾತನಾಡಿ, ಬಿಡದಿ ಪುರಸಭೆಯ ಬಾನಂದೂರು(16ನೇ ವಾರ್ಡ್) ಬಾಲಗಂಗಾಧರನಾಥ ಸ್ವಾಮೀಜಿ ಜನಿಸಿದ ಪುಣ್ಯಭೂಮಿ. ಗ್ರಾಮದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡುವ ಬದಲಿಗೆ ಕಳಪೆ ಗುಣಮಟ್ಟದ ಕೆಲಸ ನಿರ್ವಹಿಸಿದ್ದಾರೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ಆರೋಪಿಸಿದರು.

ಪುರಸಭಾ ಎಂಜಿನಿಯರ್‌ಗಳು ಹಾಗೂ ಹಿರಿಯ ಅಧಿಕಾರಿಗಳು ತಕ್ಷಣವೇ ಕಾಮಗಾರಿಯಲ್ಲಿ ನಡೆದಿರುವ ಲೋಪವನ್ನು ಸರಿಪಡಿಸಬೇಕು. ಉನ್ನತ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ಮತ್ತು ಎಂಜಿನಿಯರ್ ವಿರುದ್ಧ ಕಠಿಣ ಕ್ರಮ ಕೈಗೊಂಡು ಗುಣಮಟ್ಟದೊಂದಿಗೆ ಕಾಮಗಾರಿಯನ್ನು ಪುನಃ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಆಗ ಪುರಸಭೆ ಮುಖ್ಯಾಧಿಕಾರಿ ಪ್ರಮೀಳಮ್ಮ ಒತ್ತುವರಿ ತೆರವು ಸಂಬಂಧ ಸಣ್ಣ ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಪತ್ರ ಬರೆದು ಜಂಟಿ ಸರ್ವೆ ನಡೆಸುವಂತೆ ಆಯಾಯ ಇಲಾಖೆಗಳಿಗೆ ಪತ್ರ ಬರೆಯುತ್ತೇನೆ. ಶೀಘ್ರದಲ್ಲಿಯೇ ಜಂಟಿ ಸರ್ವೆ ದಿನಾಂಕ ನಿಗದಿ ಪಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಾನಂದೂರು ಗ್ರಾಮಸ್ಥರಾದ ಶಿವನಂಜಪ್ಪ, ಶೇಖರ್, ನಾಗರಾಜು, ಬಸವರಾಜು, ಪೃಥ್ವಿರಾಜು, ರೇವಣಸಿದ್ದಪ್ಪ, ಮಹದೇವಣ್ಣ, ಧನುಷ್ ಮತ್ತಿತರರು ಹಾಜರಿದ್ದರು. .

ಬಾನಂದೂರು ವಾರ್ಡಿನಲ್ಲಿ ಕೈಗೆತ್ತಿಕೊಂಡಿರುವ ಚರಂಡಿ ನಿರ್ಮಾಣ ಕಾಮಗಾರಿ ಕಳಪೆಯಿಂದ ಕೂಡಿದೆ. ಸಂಬಂಧಿಸಿದ ಇಲಾಖೆಯ ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲಿಸಬೇಕು. ಎಂಜಿನಿಯರಿಂಗ್ ವಿಭಾಗದ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾಮಗಾರಿಯನ್ನು ಮರು ಪರಿಶೀಲಿಸಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಗ್ರಾಮಸ್ಥರೊಂದಿಗೆ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ.

-ಹೋಟೆಲ್ ಜಗದೀಶ್, ಗ್ರಾಮದ ಮುಖಂಡರು, ಬಾನಂದೂರು

ಬಾನಂದೂರು ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಎಂಜಿನಿಯರ್‌ಗಳು ಸ್ಥಳದಲ್ಲಿಯೇ ಇರುವುದಿಲ್ಲ. ಗುತ್ತಿಗೆದಾರರು ತಮಗಿಷ್ಟ ಬಂದಂತೆ ಕಾಮಗಾರಿ ಮಾಡುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಕಳಪೆ ಕಾಮಗಾರಿಗೆ ಪೋಲಾಗುತ್ತಿದೆ.

- ಬಸವರಾಜು, ಅಧ್ಯಕ್ಷರು, ಬಾನಂದೂರು ಹಾಲು ಉತ್ಪಾದಕರ ಸಹಕಾರ ಸಂಘ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌: ಜಿಲ್ಲೆಯ 1,05,493 ಮತದಾರರಿಗೆ ನೋಟೀಸ್‌
ಬಸವಯುಗ ಮಾನವರಿಗೆ ಘನತೆ ತಂದುಕೊಟ್ಟ ಯುಗ