ಕಲ್ಯಾಣದಲ್ಲಿ ನಡೆದ ಶರಣ ಚಳವಳಿಯನ್ನು ಪುಸ್ತಕ ರೂಪದಲ್ಲಿ ನೀಡಿರುವ ಬಸವಯುಗ ವೈಭವ ಪುಸ್ತಕ ಒಂದು ಐತಿಹಾಸಿಕ ಕೃತಿ ಎಂದು ರಾಷ್ಟ್ರೀಯ ಚಿಂತಕರು ಮಾಜಿ ಸಂಸತ್ ಸದಸ್ಯರಾದ ಡಾ.ಬಸವರಾಜ ಪಾಟೀಲ್ ಸೇಡಂ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಕಲ್ಯಾಣದಲ್ಲಿ ನಡೆದ ಶರಣ ಚಳವಳಿಯನ್ನು ಪುಸ್ತಕ ರೂಪದಲ್ಲಿ ನೀಡಿರುವ ಬಸವಯುಗ ವೈಭವ ಪುಸ್ತಕ ಒಂದು ಐತಿಹಾಸಿಕ ಕೃತಿ ಎಂದು ರಾಷ್ಟ್ರೀಯ ಚಿಂತಕರು ಮಾಜಿ ಸಂಸತ್ ಸದಸ್ಯರಾದ ಡಾ.ಬಸವರಾಜ ಪಾಟೀಲ್ ಸೇಡಂ ಅಭಿಪ್ರಾಯಪಟ್ಟಿದ್ದಾರೆ.

ನಗರದ ಶ್ರೀಸಿದ್ದಗಂಗಾ ಮಠದಲ್ಲಿ ಲೇಖಕ ಶಾಮಲಿಂಗ ಜವಳಗಿ ಅವರು ಬರೆದಿರುವ ಬಸವಾದಿ ಶರಣರನ್ನು ಸ್ಮರಿಸುವ 12ನೇ ಶತಮಾನದಿಂದ 21ನೇ ಶತಮಾನದವರೆಗಿನ ಬಸವ ತತ್ವವನ್ನು ಪರಿಚಯಿಸುವ ಬಸವಯುಗ ವೈಭವ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು. ಶರಣ ತತ್ವದ 900 ವರ್ಷಗಳ ಇತಿಹಾಸವನ್ನು ದಾಖಲಿಸುವ ಈ ಕೃತಿ ನಾಡಿನ ಉದ್ದಗಲಕ್ಕೂ ಬೆಳಕಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಪ್ರಚಾರದಲ್ಲಿ ಮತ್ತು ಆಂತರಿಕ ಸಂಘರ್ಷದಲ್ಲಿ ಬಸವಣ್ಣ ಮೇಲುಗೈ ಸಾಧಿಸಿದ್ದರೂ, ಆಚಾರ, ವಿಚಾರದಲ್ಲಿ ಹಿಂದೆ ಉಳಿದಿದೆ. ನುಡಿ ಮತ್ತು ನಡೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿರುವ ಈ ಕಾಲದಲ್ಲಿ 900 ವರ್ಷಗಳ ಹಿಂದೆ ಜಾತಿ, ಮತ, ಹೆಣ್ಣು, ಗಂಡು, ಮೇಲು, ಕೀಳು, ಬಡವ, ಬಲ್ಲಿದ ನೆಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿರುವುದು ಇಂದು ಊಹಿಸಿಕೊಳ್ಳಲು ಕಷ್ಟ. ಇದು ಬಸವಣ್ಣ ಮಾಡಿದ ದೊಡ್ಡ ಸಾಹಸ. ಆರ್ಹವಾಗಿಯೇ ಅವರನ್ನು ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ಎಂದು ಗುರುತಿಸಲಾಗಿದೆ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ನಮ್ಮ ಶರಣರಲ್ಲಿದೆ. ಆ ಕಾರ್ಯವನ್ನು ಮಾಡುವುದೇ ನಮ್ಮನ್ನು ಆಗಲಿದೆ ಶರಣರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಡಾ.ಬಸವರಾಜು ಪಾಟೀಲ್ ಸೇಡಂ ನುಡಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ, ಬಸವಯುತ ವೈಭವ ಒಂದು ವಿಶಿಷ್ಟ ಗ್ರಂಥ. 12ನೇ ಶತಮಾನದಿಂದ 21ನೇ ಶತಮಾನದರೆಗೆ ಬಸವಣ್ಣವರ ಬಗ್ಗೆ ಬಸವ ತತ್ವವನ್ನು ಪರಿಚಯಿಸುವ ಕೆಲಸ ಆಗಿದೆ. ಬಸವಯುಗ ಮಾನವರಿಗೆ ಘನತೆ ತಂದುಕೊಟ್ಟ ಯುಗ ಎಂದರು. ಲೇಖಕ ಶಾಮಲಿಂಗ ಜವಳಗಿ ಇಂತಹ ಬೃಹತ್ ಗ್ರಂಥವನ್ನು ತಯಾರಿಸಲು 40 ವರ್ಷಗಳ ನಿರಂತರ ಶ್ರಮವಿದೆ. 1986 ರಲ್ಲಿ ಬಿಡುಗಡೆಯಾದ ಶರಣರ ದರ್ಶನ ಪುಸ್ತಕದಿಂದ ಪ್ರೇರೇಪಿತಗೊಂಡು ಈ ಕೃತಿಯ ರಚನೆಗೆ ಇಳಿದೆ. 2012 ರಿಂದ 2013ರವರೆಗೆ ನಿರಂತರವಾಗಿ ಓಡಾಟ ನಡೆಸಿ, ಹಲವು ಧರ್ಮ, ಜಾತಿಯ ಪ್ರಾಜ್ಞರನ್ನು ಭೇಟಿಯಾಗಿ, ಅವರ ಮಾತುಗಳನ್ನು ಆಲಿಸಿ ಹಲವು ಮಠ ಮಾನ್ಯಗಳಿಗೆ ಪ್ರವಾಸ ಮಾಡಿ ಯಾರಿಂದಲೂ ಈ ಕೃತಿಯ ಬಗ್ಗೆ ವಿವಾದ ಏರ್ಪಡದಂತೆ ನೋಡಿಕೊಂಡಿದ್ದೇನೆ. ಇದುವರೆಗೂ 150ಕ್ಕೂ ಹೆಚ್ಚು ವಿದ್ವಾಂಸರು,ಸಂಶೋಧಕರು ಈ ಕೃತಿಯನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇಂತಹ ಕೃತಿಯನ್ನು ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟ ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗಸ್ವಾಮೀಜಿ ಅವರಿಗೆ ಕೃತ್ಯಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಪತ್ರಕರ್ತ ಎಸ್.ನಾಗಣ್ಣ, ವಿದ್ವಾನ್ ಡಾ.ಎಂ.ಜಿ. ಸಿದ್ದರಾಮಯ್ಯ, ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕಾರ್ಯಕ್ರಮದಲ್ಲಿ ಯುವ ಚಿಂತಕ ಮಹೇಶ್ ರೆಡ್ಡಿ ವೆಂಕಟರೆಡ್ಡಿ ಮುದ್ನಾಳ, ವಿನ್ಯಾಸಕರಾದ ರವಿಕಿರಣ್ ನರಗುಂದ, ಮುದ್ರಕರಾದ ಬಿ.ವಿ.ಪಾಟೀಲ್, ಅಕ್ಷರ ಜೋಡಿಸಿದ ಶರಣಕುಮಾರ್ ಮಠಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ರೀಮಠದ ಮಕ್ಕಳಿಂದ ಸಂಜೆಯ ಸಾಮೂಹಿಕ ಪ್ರಾರ್ಥನೆ ಜರುಗಿತು.