ಕುಷ್ಟಗಿ: ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸುವಂತೆ ಒತ್ತಾಯಿಸಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಬೇಲಾಮೀನಾ ಅವರಿಗೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಮನವಿ ಸಲ್ಲಿಸಿದರು.
ಗದಗ ರೈಲ್ವೆ ಹೋರಾಟ ಸಮಿತಿಯವರು ಈಗಾಗಲೇ ಆಂದೋಲನ ಪ್ರಾರಂಭಿಸಿದ್ದು, ಈ ರೈಲನ್ನು ಗದಗಕ್ಕೆ ವಿಸ್ತರಿಸುವಂತೆ ಒತ್ತಾಯಿಸಿ ಹಲವಾರು ಮನವಿ ಸಲ್ಲಿಸಿದ್ದಾರೆ. ಮುಂದಿನ ಹಂತವಾಗಿ, ಈ ರೈಲನ್ನು ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಗೆ ವಿಸ್ತರಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಈ ಸೌಲಭ್ಯ ಕುಷ್ಟಗಿ ತಾಲೂಕು ಮಾತ್ರವಲ್ಲದೆ,ಗಜೇಂದ್ರಗಡ, ಇಲಕಲ್, ಯಲಬುರ್ಗಾ, ಕುಕನೂರು ಮತ್ತು ಗದಗ ಜಿಲ್ಲೆಯ ಜನರಿಗೂ ಪ್ರಯೋಜನ ನೀಡುತ್ತದೆ. ಇದು ವೈದ್ಯಕೀಯ ಅಗತ್ಯ, ಹೈಕೋರ್ಟ್, ಶಿಕ್ಷಣ ಮತ್ತು ವ್ಯವಹಾರಕ್ಕೆ ಅನುಕೂಲಕರವಾಗಲಿದೆ ಕಾರ್ಮಿಕರಿಗೂ ಇದು ಪ್ರಯೋಜನ ನೀಡುತ್ತದೆ ಎಂದರು.ಹಬ್ಬಗಳ ಸಮಯದಲ್ಲಿ ಖಾಸಗಿ ಬಸ್ಗಳಿಂದ ಅಕ್ರಮವಾಗಿ ಅಧಿಕ ಶುಲ್ಕ ವಿಧಿಸುವುದನ್ನು ಇದು ತಡೆಯುತ್ತದೆ. ಬೆಂಗಳೂರು-ಹುಬ್ಬಳ್ಳಿ ರೈಲನ್ನು ಗದಗ ಮೂಲಕ ಕುಷ್ಟಗಿಗೆ ವಿಸ್ತರಿಸುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಸರ್ಕಾರಿ ಮತ್ತು ಖಾಸಗಿ ಬಸ್ಗಳಲ್ಲಿ ಬೆಂಗಳೂರಿಗೆ ಪ್ರತಿ ದಿನ ಪ್ರಯಾಣಿಸುವ ಜನರಿಗೆ ಸಹಕಾರಿಯಾಗಲಿದೆ ಎಂದರು.
ಕುಷ್ಟಗಿಯಿಂದ ಹುಬ್ಬಳ್ಳಿಗೆ ಒಂದೇ ಒಂದು ರೈಲು ಚಲಿಸುತ್ತದೆ. ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಲಾದ ಈ ರೈಲು ನಿಲ್ದಾಣ ಬೆಳಗ್ಗೆ 6-7 ಮತ್ತು ರಾತ್ರಿ 8-9 ರವರೆಗೆ ಮಾತ್ರ ಪ್ರಯಾಣಿಕರು ಇರುತ್ತಿದ್ದು ಉಳಿದ ಸಮಯಗಳಲ್ಲಿ ನಿರ್ಜನ ಪ್ರದೇಶವಾಗಿರುತ್ತದೆ. ಆದ್ದರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ಮತ್ತೊಂದು ರೈಲು ಮತ್ತು ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸಂಪರ್ಕದ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಈ ಕುರಿತು ಈಗಾಗಲೆ ಸಂಬಂಧಿಸಿದ ಸಚಿವರಿಗೆ ಹಾಗೂ ಸಂಸದರಿಗೂ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಶ್ರೀಧರ ಘೋರ್ಪಡೆ, ಮಂಜುನಾಥ ಮಹಾಲಿಂಗಪೂರ, ಬಸವರಾಜ ಸಾಲಿಮಠ ಸೇರಿದಂತೆ ಅನೇಕರು ಇದ್ದರು.
ಕುಷ್ಟಗಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಕುಡಿಯುವ ನೀರಿನ ಸೌಲಭ್ಯ, ಕಳ್ಳತನ ಪ್ರಕರಣಗಳ ತಡೆಗೆ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡಬೇಕಿದೆ, ರೈಲ್ವೆ ಪೊಲೀಸರನ್ನು ನಿಯೋಜಿಸಬೇಕು ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ, ನಿರಂತರ ವಿದ್ಯುತ್ ಒದಗಿಸುವುದು, ಕುಷ್ಟಗಿಯಿಂದ ಹುಬ್ಬಳ್ಳಿಗೆ ಬೆಳಗ್ಗೆ 7 ಗಂಟೆಗೆ ರೈಲು ಓಡಿಸಬೇಕಿದೆ, ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮೊದಲನೆ ಪ್ಲಾಟ್ ಫಾರಂಗೆ ನಿಲ್ಲುವಂತೆ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.