ಕಾರ್ಕಳ : ಬೆಂಗಳೂರು ನಗರದಲ್ಲಿ ನಡೆದ ಆರ್ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಚಿನ್ಮಯಿ ಶೆಟ್ಟಿ (19) ಅವರ ಕುಟುಂಬ ಸರ್ಕಾರದ ನಿರ್ಲಕ್ಷ್ಯವನ್ನು ಟೀಕಿಸಿ ಆಕ್ರೋಶ ವ್ಯಕ್ತಪಡಿಸಿದೆ. ಮೃತಳ ತಂದೆ ಕರುಣಾಕರ ಶೆಟ್ಟಿ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸಿದ್ದಾರೆ.
ಚಿನ್ಮಯಿ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಕುಚ್ಚೂರು ನಿವಾಸಿಯಾಗಿದ್ದು, ಬೆಂಗಳೂರಿನ ತಿಪ್ಪಸಂದ್ರದಲ್ಲಿ ನೆಲೆಸಿದ್ದರು. ಜ್ಯೋತಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ಚಿನ್ಮಯಿ, ಯಕ್ಷಗಾನ ಕಲಾವಿದೆಯೂ ಆಗಿದ್ದರು. ಆರ್ಸಿಬಿ ವಿಜಯೋತ್ಸವಕ್ಕೆ ಸ್ನೇಹಿತರೊಂದಿಗೆ ಹೋಗಿದ್ದಾಗ ದುರಂತ ಸಂಭವಿಸಿತ್ತು.
ಈ ಬಗ್ಗೆ ಪ್ರತಿಕ್ರಯಿಸಿದ ಆಕೆಯ ತಂದೆ ಕರುಣಾಕರ ಶೆಟ್ಟಿ, ಇದು ಮರೆಯಲು ಸಾಧ್ಯವಿಲ್ಲದ ದುರ್ಘಟನೆ. ಸರ್ಕಾರವೇ ಹೊಣೆಗಾರ. ನನ್ನ ಮಗಳು ಕ್ರಿಕೆಟ್ ಅಭಿಮಾನಿಯೂ ಅಲ್ಲ, ಸ್ನೇಹಿತರ ಒತ್ತಾಯಕ್ಕೆ ಹೋಗಿದ್ದಳು. ಆರ್ಸಿಬಿ ಒಂದು ಕ್ಲಬ್ ಮಾತ್ರ. ಇಂತಹ ಸಂಭ್ರಮಕ್ಕೆ ವಿಧಾನಸೌಧದ ಮುಂದೆ ಜಮಾವಣೆ ಮಾಡುವುದು ಯೋಗ್ಯವಲ್ಲ. ಈ ಪ್ರಕರಣದಲ್ಲಿ 11 ಮಂದಿ ಹೇಗೆ ಮೃತಪಟ್ಟರು ಎಂಬ ಸತ್ಯ ಬಯಲಾಗಬೇಕು. ಪಕ್ಕಾ ತನಿಖೆಯ ಅಗತ್ಯವಿದೆ ಎಂದ ಅವರು, ಸರ್ಕಾರಿ ಉದ್ಯೋಗವೊಂದನ್ನು ಕುಟುಂಬ ಸದಸ್ಯನಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪರಿಹಾರ ಚೆಕ್ ಹಸ್ತಾಂತರ:
ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಎಸ್ಪಿ ಹರಿರಾಮ್ ಶಂಕರ್ ಮತ್ತು ಉಪ ಜಿಲ್ಲಾಧಿಕಾರಿ ರಶ್ಮಿ ಅವರು ಕುಚ್ಚೂರಿನ ಚಿನ್ಮಯಿ ಮನೆಯವರನ್ನು ಭೇಟಿ ನೀಡಿ 25 ಲಕ್ಷ ರು. ಪರಿಹಾರದ ಚೆಕ್ ಹಸ್ತಾಂತರಿಸಿದರು. ಅಧಿಕಾರಿಗಳು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಸರ್ಕಾರದ ಆದೇಶದಂತೆ ಪರಿಹಾರ ಹಣ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ನೆರವಿಗೆ ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಉಡುಪಿ ಎಸ್ಪಿ ಹರಿಶಂಕರ್, ಕುಂದಾಪುರ ಎಸಿ ರಶ್ಮಿ, ಹೆಬ್ರಿ ತಹಸೀಲ್ದಾರ್ ಎಸ್.ಎ. ಪ್ರಸಾದ್, ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ.ಎಂ., ಹೆಬ್ರಿ ಕಂದಾಯ ಅಧಿಕಾರಿ ಹಿತೇಶ್, ಗ್ರಾಮ ಆಡಳಿತ ಅಧಿಕಾರಿ ನವೀನ್ ಸೇರಿದಂತೆ ಮೃತ ಚಿನ್ಮಯಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.