ಇನ್ನೂ ಆರು ತಿಂಗಳಲ್ಲಿ ಮಾಗಡಿ ಕೆ-ಶಿಪ್ ಕಾಮಗಾರಿ ಪೂರ್ಣ

KannadaprabhaNewsNetwork |  
Published : Jun 11, 2025, 11:42 AM IST
ಮಾಗಡಿ ತಾಲ್ಲುಕಿನ ಹೊಸಪಾಳ್ಯದಲ್ಲಿ ಸಾರ್ವಜನಿಕರ ಸಮಸ್ಯೆ ಕೇಳಿದ ಶಾಸಕ ಬಾಲಕೃಷ್ಣ | Kannada Prabha

ಸಾರಾಂಶ

ಗುತ್ತಿಗೆದಾರರು ವಿಳಂಬ ಮಾಡಿದ ಪರಿಣಾಮ ಕಾಮಗಾರಿ ಕುಂಟುತ್ತ ಸಾಗಿದ್ದು, ಈಗ ಕಾಮಗಾರಿಗೆ ವೇಗ ಸಿಕ್ಕಿರುವುದರಿಂದ ಇನ್ನೂ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಾಗಡಿ

ಮಾಗಡಿ ಬೆಂಗಳೂರು ಕೆ-ಶಿಪ್ ರಸ್ತೆ ಕಾಮಗಾರಿಯನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಪರಿಶೀಲನೆ ನಡೆಸಿದರು.

ತಾಲೂಕಿನ ತಾಳೆಕೆರೆ ಹ್ಯಾಂಡ್ ಪೋಸ್ಟ್‌ನಿಂದ ಶಾನಭೋನಹಳ್ಳಿಯ ಬಾಚೇನಹಟ್ಟಿ ಗ್ರಾಮ ಪಂಚಾಯಿತಿವರೆಗೂ ರಸ್ತೆ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಲತಾಣಗಳಲ್ಲಿ ರಸ್ತೆ ವಿಚಾರವಾಗಿ ಸಮಸ್ಯೆಗಳಿದೆ ಎಂಬುದರ ಬಗ್ಗೆ ನನ್ನ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆಗಳಿರುವ ಜಾಗಕ್ಕೆ ಹೋಗಿ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಗುತ್ತಿಗೆದಾರರು ವಿಳಂಬ ಮಾಡಿದ ಪರಿಣಾಮ ಕಾಮಗಾರಿ ಕುಂಟುತ್ತ ಸಾಗಿದ್ದು, ಈಗ ಕಾಮಗಾರಿಗೆ ವೇಗ ಸಿಕ್ಕಿರುವುದರಿಂದ ಇನ್ನೂ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಧಿಕಾರಿಗಳ ಜೊತೆ 15ಕ್ಕೂ ಹೆಚ್ಚು ಬಾರಿ ಸಭೆ ನಡೆಸಿ ಕೆ-ಶಿಫ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ವಾಹನ ಸವಾರರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಿಕೊಡಲಾಗುತ್ತದೆ ಎಂದು ಬಾಲಕೃಷ್ಣ ತಿಳಿಸಿದರು.

ಟ್ರಾಫಿಕ್ ಜಾಮ್ ಆಗದಂತೆ ಕ್ರಮ ವಹಿಸಿ:

ಶನಿವಾರ ಮತ್ತು ಭಾನುವಾರ ಮಾಗಡಿ ಬೆಂಗಳೂರು ಮುಖ್ಯರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಬರುತ್ತಿರುವುದರಿಂದ ಮಾಗಡಿ ಪಟ್ಟಣದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿದ್ದು, ಪೊಲೀಸರು ಸರ್ಕಲ್‌ಗಳಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವ ವಾಹನಗಳನ್ನು ತಡೆಯುವ ಕೆಲಸ ಮಾಡಬೇಕು. ಇಲ್ಲವಾದರೆ ಸರ್ಕಲ್‌ಗಳಲ್ಲಿ ವಾಹನ ಅಡ್ಡಾದಲ್ಲಿ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಜೊತೆಗೆ ಅಪಘಾತಗಳು ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಮಾಗಡಿ ಪೊಲೀಸರು ಶನಿವಾರ ಮತ್ತು ಭಾನುವಾರ ಎರಡು ದಿನ ಸಿಬ್ಬಂದಿಗೆ ಟ್ರಾಫಿಕ್ ಜಾಮ್ ಆಗದಂತೆ ಎಚ್ಚರ ವಹಿಸಬೇಕು.

ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಧೂಳು ಬರುತ್ತಿದ್ದು ಕಾಮಗಾರಿ ನಡೆಯುವ ವೇಳೆ ರಸ್ತೆಗೆ ನೀರು ಹಾಕಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇಂದಿನ ಶಾಸಕರು ಈ ರೀತಿ ಸಭೆಗಳನ್ನು ಮಾಡಿ ಒತ್ತಡ ಹಾಕಿದ್ದರೆ ಇಷ್ಟು ಹೊತ್ತಿಗೆ ನಾಲ್ಕು ಪಥದ ರಸ್ತೆ ಕಾಮಗಾರಿ ಪೂರ್ಣ ಆಗುತ್ತಿತ್ತು. ಕೊಳ್ಳೇಗಾಲದಲ್ಲಿ ಇದೇ ಗುತ್ತಿಗೆದಾರ ಕಾಮಗಾರಿ ಮಾಡಿ ಅಲ್ಲಿ ಕೆಲಸ ಮುಗಿದಿದೆ. ಆದರೆ ಇಲ್ಲಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಇದಕ್ಕೆ ವೇಗ ಕೊಡುವ ಕೆಲಸ ಮಾಡಲಾಗಿದೆ. ರಸ್ತೆ ಪಕ್ಕದಲ್ಲಿ ಎತ್ತರ ಮಾಡಿರುವುದರಿಂದ ಮನೆಗಳಿಗೆ ಜಮೀನಿಗಳಿಗೆ ಹೋಗಲು ಸಮಸ್ಯೆ ಆಗುತ್ತಿದೆ ಎಂದು ದೂರುಗಳು ಬಂದಿದೆ. ಜೊತೆಗೆ ರಸ್ತೆಗೆ ಬೀದಿ ದೀಪ ವ್ಯವಸ್ಥೆ ಮಾಡುವಂತೆ ಆಗ್ರಹ ಕೇಳಿ ಬಂದಿದ್ದು ಅಧಿಕಾರಿಗಳಿಂದ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಹೇಳಿದರು.

ಶ್ರೀರಂಗ ಏತ ನೀರಾವರಿಗೆ ವೇಗ:

ತಾಲೂಕಿನ 63 ಕೆರೆಗಳನ್ನು ತುಂಬಿಸುವ ಶ್ರೀರಂಗ ಏತ ನೀರಾವರಿ ಕಾಮಗಾರಿ ಪ್ರಗತಿಯಲ್ಲಿದ್ದು ಹೇಮಾವತಿ ಹರಿಯುವ ಗೊಟ್ಟಿಗೆರೆ ಜಾಗಕ್ಕೆ ನೀರಾವರಿ ಎಂಡಿ ಅಧಿಕಾರಿ ಭೇಟಿ ನೀಡಿದ್ದು ಸ್ಥಳಕ್ಕೆ ನಾವು ಕೂಡ ಭೇಟಿ ನೀಡಿ ನಮ್ಮ ನೀರಾವರಿ ಯೋಜನೆ, ಪೂರ್ಣ ಮಾಡುವ ಹಿನ್ನೆಲೆಯಲ್ಲಿ ಅರಣ್ಯ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮಸ್ಯೆಗಳು ಇದ್ದ ಪರಿಣಾಮ ಎಲ್ಲವನ್ನು ಬಗೆಹರಿಸಲಾಗಿದೆ. ರೈಸಿಂಗ್ ಮೈನ್ ಕಾಮಗಾರಿ 450 ಮೀಟರ್ ಮುಗಿದರೆ ಕಾಮಗಾರಿ ಪೂರ್ಣಗೊಳ್ಳಲಿದ್ದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಂದ ಶೀಘ್ರದಲ್ಲೇ ಶ್ರೀರಂಗ ಏತ ನೀರಾವರಿಗೆ ಪ್ರಾಯೋಗಿಕವಾಗಿ ಚಾಲನೆ ನೀಡುವ ಕೆಲಸ ಆಗಲಿದೆ ಎಂದು ಬಾಲಕೃಷ್ಣ ಹೇಳಿದರು.

ಹೇಮಾವತಿ ವಿಚಾರವಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲು ಈಗಾಗಲೇ ಮಾಹಿತಿಯನ್ನು ಪಡೆಯಲಾಗುತ್ತಿದೆ. ಕುದೂರಿನ ವ್ಯಕ್ತಿಯೊಬ್ಬರು ಯೋಜನೆ ಅನುಷ್ಠಾನದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದೇವೆ. ಜೊತೆಗೆ ಮುಖ್ಯಮಂತ್ರಿಗಳ ಜೊತೆ ಹೇಮಾವತಿ ಯೋಜನೆ ಬಗ್ಗೆ ಮಾತುಕತೆ ಮಾಡಿಸಿ ನಮ್ಮ ಹೋರಾಟ ಮುಂದುವರಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು.ಇದೆ ವೇಳೆ ತಹಸೀಲ್ದಾರ್ ಶರತ್ ಕುಮಾರ್, ಸೇರಿದಂತೆ ಕೆ-ಶಿಫ್ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ