ಕನ್ನಡಪ್ರಭ ವಾರ್ತೆ ಇಂಡಿ
ಬಿಜೆಪಿಯಿಂದ ಬಂಜಾರ ಸಮಾಜಕ್ಕೆ ಯಾವುದೇ ಅನ್ಯಾಯ ಆಗಿರುವುದಿಲ್ಲ. ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡಿ ಪ್ರತಿ ಕುಟುಂಬಕ್ಕೆ ಹಕ್ಕುಪತ್ರ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಬಂಜಾರ ಸಮಾಜವನ್ನು ಎಸ್ಸಿಯಿಂದ ತೆಗೆದಿದ್ದಾರೆ ಎಂದು ಅಪಪ್ರಚಾರ ಮಾಡಿ ಕಾಂಗ್ರೆಸ್ಸಿನವರು ವಿಧಾನಸಭೆ ಚುನಾವಣೆಯಲ್ಲಿ ಮತಪಡೆಯಲು ಹುನ್ನಾರ ನಡೆಸಿದ್ದರು ಎಂದು ಬಿಜೆಪಿ ಜಿಲ್ಲಾ ಪ್ರಕೋಷ್ಟಗಳ ಸಂಚಾಲಕ ಭೀಮಸಿಂಗ ರಾಠೋಡ ಹೇಳಿದರು.ಅವರು ಭಾನುವಾರ ಪಟ್ಟಣದ ಅಮರ ಇಂಟರ್ ನ್ಯಾಷನಲ್ ಹೊಟೇಲ್ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಳಮೀಸಲಾತಿಯಿಂದ ಬಂಜಾರ ಸಮಾಜಕ್ಕೆ ಅನ್ಯಾಯ ಆಗುವುದಿಲ್ಲ. ರಾಜಕೀಯವಾಗಿ ಅನ್ಯಾಯ ಆಗಿದ್ದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದು ಆರೋಪಿಸಿದರು.ಬಂಜಾರ ಸಮಾಜದವರ ಮತ ಬೇಡ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಹೇಳಿದ್ದಾರೆ ಎಂದು ಕಾಂಗ್ರೆಸ್ನವರು ಸುಳ್ಳು ಆರೋಪ ಮಾಡುತ್ತಾ ಹೊರಟಿದ್ದಾರೆ. ಟಿಕೆಟ್ ಕೇಳುವುದು ಎಲ್ಲರ ಹಕ್ಕು. ಬಂಜಾರ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಎಲ್ಲಿಯೂ ಎಂಪಿ ಟಿಕೆಟ್ ನೀಡಿರುವುದಿಲ್ಲ. ಕಾಂಗ್ರೆಸ್ಸಿನವರು ಹಿಂದೆ ಎಂಪಿ ಟಿಕೆಟ್ ಬಂಜಾರ ಸಮಾಜಕ್ಕೆ ನೀಡಿ, ಕೆಡವಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ ಅವರು, ಜಿಲ್ಲೆಯಲ್ಲಿ 6 ರಿಂದ 7 ಜನ ಕಾಂಗ್ರೆಸ್ ಶಾಸಕರು ವಿಜಯಪುರ ಜಿಲ್ಲೆಯಲ್ಲಿ ಇದ್ದರೂ ಕಾಂಗ್ರೆಸ್ ಪಕ್ಷದಿಂದ ಬಂಜಾರ ಸಮಾಜದ ನಾಯಕ ಎಂಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದರೂ ಏಕೆ ಗೆಲುವು ಸಾಧಿಸಲಿಲ್ಲ. ಕಾಂಗ್ರೆಸ್ ಪಕ್ಷದವರು ಬಂಜಾರ ಸಮಾಜಕ್ಕೆ ಬೆಳೆಸಿರುವುದಿಲ್ಲ ಎಂದು ಆರೋಪಿಸಿದರು.
ಬಿಜೆಪಿಯಿಂದಾಗಲಿ, ಬಿಜೆಪಿ ಪಕ್ಷದ ಅಭ್ಯರ್ಥಿಯಿಂದಾಗಲಿ ಬಂಜಾರ ಸಮಾಜಕ್ಕೆ ಯಾವುದೇ ಅನ್ಯಾಯ ಆಗಿರುವದಿಲ್ಲ ಎಂದು ಅವರು ಹೇಳಿದರು.ಈ ವೇಳೆ ಪುರಸಭೆ ಮಾಜಿ ಸದಸ್ಯ ಗೋವಿಂದ ರಾಠೋಡ, ಸೀನು ಚವ್ಹಾಣ, ಬಾಬು ರಾಠೋಡ, ಜಯರಾಮ ರಾಠೋಡ, ವಿಜಯ ರಾಠೋಡ, ಕಾಶೀರಾಮ ರಾಠೋಡ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.