ಆನ್ಲೈನ್ ಗೇಮ್, ಗೋವಾದಲ್ಲಿ ಮೋಜು ಮಸ್ತಿಗೆ ಕನ್ನ । ಅನ್ನ, ನೌಕರಿ ಕೊಟ್ಟ ಬ್ಯಾಂಕ್ನಲ್ಲೇ ಕೃತ್ಯ ಎಸಗಿದ್ದ ಉದ್ಯೋಗಿ
ಕನ್ನಡಪ್ರಭ ವಾರ್ತೆ ದಾವಣಗೆರೆಆನ್ ಲೈನ್ ಗೇಮ್ ಹಾಗೂ ಗೋವಾದಲ್ಲಿ ಮೋಜು ಮಸ್ತಿ ಮಾಡಲು ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ನಲ್ಲೇ 3.5 ಕೆಜಿ ಚಿನ್ನಾಭರಣ ಕಳವು ಮಾಡಿ, ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು, ಅದೇ ಬ್ಯಾಂಕ್ನಿಂದ ಕೋಟ್ಯಂತರ ರು. ಸಾಲ ಪಡೆದಿದ್ದ ಮಹಾನ್ ಚಾಲಕಿ ನೌಕರರನ್ನು ಇಲ್ಲಿನ ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ದಾವಣಗೆರೆ ದೇವರಾಜ ಅರಸು ಬಡಾವಣೆಯ ಸಿಎಸ್ಬಿ ಬ್ಯಾಂಕ್ ಉದ್ಯೋಗಿ ಟಿ.ಪಿ.ಸಂಜಯ್ (35) ಬಂಧಿತ ಆರೋಪಿ ಎಂದರು.ಇಲ್ಲಿನ ದೇವರಾಜ ಅರಸು ಬಡಾವಣೆಯ ಸಿಎಸ್ಬಿ ಬ್ಯಾಂಕ್ನಲ್ಲಿ ಕಳೆದ ಏಪ್ರಿಲ್ನಲ್ಲಿ ವಾರ್ಷಿಕ ಆಡಿಟ್ ವೇಳೆ ಬ್ಯಾಂಕ್ನ ಇತರೆ ಸಿಬ್ಬಂದಿಗೆ ಅನುಮಾನ ಕಂಡು ಬಂದ ಹಿನ್ನೆಲೆ ವ್ಯವಸ್ಥಾಪಕ ಶಿವಕುಮಾರ ನೀಡಿದ ದೂರನ್ನು ಆಧರಿಸಿ, ತನಿಖೆ ಕೈಗೊಂಡಾಗ ಅದೇ ಬ್ಯಾಂಕ್ನ ಗೋಲ್ಡ್ ಲೋನ್ ವಿಭಾಗದ ಸಿಬ್ಬಂದಿ ಟಿ.ಪಿ.ಸಂಜಯ್ ಹಣವನ್ನು ಕಳವು ಮಾಡಿರುವುದು ತಿಳಿದು ಬಂದಿದೆ ಎಂದು ಹೇಳಿದರು.
ಬಿಸಿಎ ಪದವೀಧರನಾದ ಸಂಜಯ್ ಸಿಎಸ್ಬಿ ಬ್ಯಾಂಕ್ ಕೆಲಸಕ್ಕೆ ಸೇರುವ ಮುನ್ನ ಮುತ್ತೂಟ್ ಫೈನಾನ್ಸ್ ಸೇರಿದಂತೆ ಒಂದೆರೆಡು ಕಡೆ ಕೆಲಸ ಮಾಡಿದ್ದ. ಸಿಎಸ್ಬಿ ಬ್ಯಾಂಕ್ಗೆ ಕೆಲಸಕ್ಕೆ ಸೇರಿದ 6 ತಿಂಗಳಲ್ಲೇ ಅಲ್ಲಿನ ಆಭರಣ ಕದ್ದು, ನಕಲಿ ಆಭರಣಗಳನ್ನು ಅಡ ಇಟ್ಟು, ಸಾಲವನ್ನೂ ಪಡೆದಿದ್ದ. ಆಡಿಟ್ ಮಾಡುವ ವೇಳೆ ಬಂಗಾರದಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಆತನ ಕೈಚಳವೆಲ್ಲಾ ಬಯಲಾಗಿದೆ ಎಂದು ತಿಳಿಸಿದರು.ಗ್ರಾಹಕರು ಅಡಮಾನ ಮಾಡಿದ ಸಾಲದ ಖಾತೆಗಳಲ್ಲಿನ ಒಟ್ಟು 1,86,22,000 ರು. ಮೌಲ್ಯದ 3157.10 ಗ್ರಾಂ ತೂಕದ ಚಿನ್ನಾಭರಣಗಳನ್ನು ಬ್ಯಾಂಕ್ನಿಂದ ಕಳವು ಮಾಡಿಕೊಂಡು ಹೋಗಿದ್ದ. ಅಲ್ಲದೇ, ಬ್ಯಾಂಕ್ನ ಗಮನಕ್ಕೆ ಬರದಂತೆ ತನ್ನ ಸ್ನೇಹಿತರು, ಹಿತೈಷಿಗಳು, ಬಂಧುಗಳ ಹೆಸರಿನಲ್ಲಿ ನಕಲಿ ಬಂಗಾರದ ಆಭರಣ ಅಡಮಾನ ಮಾಡಿ ಸಾಲ ಪಡೆದಿದ್ದ ಎಂದರು.
ಕಳವು ಮಾಡಿದ ಆಭರಣಗಳನ್ನು ಫೆಡರಲ್ ಬ್ಯಾಂಕ್, ಫೆಡ್ ಬ್ಯಾಂಕ್, ಪಿ.ವಿ.ರಸ್ತೆಯ ಮಣಪ್ಪುರಂ ಗೋಲ್ಡ್ ಲೋನ್ ಫೈನಾನ್ಸ್ ಶಾಖೆಯಲ್ಲಿ ಅಡಮಾನ ಮಾಡಿ, ಸಾಲ ಪಡೆದಿದ್ದನು. ಇಷ್ಟು ಮೊತ್ತದ ಚಿನ್ನಾಭರಣಗಳನ್ನು ಒಬ್ಬನೇ ವ್ಯಕ್ತಿಯು ಖಾಸಗಿ ಫೈನಾನ್ಸ್ಗಳಲ್ಲಿ ಅಡಮಾನ ಇಡಲು ಅವಕಾಶ ಇಲ್ಲ. ಆದರೂ, ಫೈನಾನ್ಸ್ನವರೂ ಸಹ ನಿಯಮ ಮೀರಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದ್ದು, ಈ ಪ್ರಕರಣದಲ್ಲಿ ಫೈನಾನ್ಸ್ನವರ ಮೇಲೂ ದೂರು ದಾಖಲಿಸಿ, ತನಿಖೆ ನಡೆಸಲಾಗುವುದು ಎಂದರು.ಖಾಸಗಿ ಫೈನಾನ್ಸ್ನವರು ಪ್ರಕರಣದ ತನಿಖೆಗೆ ಸಹಕಾರ ನೀಡಲಿಲ್ಲ. ಹಾಗಾಗಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು, ತಿಜೋರಿಗಳನ್ನು ಒಡೆಯಲಾಗಿದೆ. ಇದೇ ಮೊದಲ ಸಹ ಇಂತಹ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಕೆಟಿಜೆ ನಗರ ಠಾಣೆ ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ, ಅಧಿಕಾರಿ, ಸಿಬ್ಬಂದಿ ಇದ್ದರು.ದಾವಣಗೆರೆ ನಗರ, ಜಿಲ್ಲೆಯಲ್ಲಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಬ್ಯಾಂಕ್ಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಾಗ ಅಂತಹವರ ಅಪರಾಧಿಕ ಹಿನ್ನೆಲೆ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿದ ನಂತರವಷ್ಟೇ ನೇಮಕ ಮಾಡಿಕೊಳ್ಳಬೇಕು.
ಉಮಾ ಪ್ರಶಾಂತ, ಜಿಲ್ಲಾ ಪೊಲೀಸ್ ಅಧೀಕ್ಷಕಿ.