ಉಡುಪಿ: ಬ್ಯಾಂಕಿಂಗ್ ವಹಿವಾಟುಗಳಲ್ಲಿ ವಂಚನೆ ತಡೆಗಟ್ಟಲು 1600ರಿಂದ ಪ್ರಾರಂಭವಾಗುವ ದೂರವಾಣಿ ಸಂಖ್ಯೆ ಸರಣಿಯನ್ನು ಮಾತ್ರ ಬಳಸುವಂತೆ ಬ್ಯಾಂಕುಗಳಿಗೆ ಆರ್.ಬಿ.ಐ ನಿರ್ದೇಶನ ನೀಡಿದೆ. ಈ ಬಗ್ಗೆ ಎಲ್ಲ ಬ್ಯಾಂಕುಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಪಂ ಸಿಇಒ ಪ್ರತೀಕ್ ಬಾಯಲ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಡಿ ಅನುಪಾತ ಶೇ 49.64: ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ 1 ರ ಪ್ರಾದೇಶಿಕ ವ್ಯವಸ್ಥಾಪಕ ತದಿನಾಡ ಶ್ರೀನಾಗ ಪೂರ್ಣಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಜೂನ್ ಮಾಹೆಯ ಅಂತ್ಯದವರೆಗೆ ಜಿಲ್ಲೆಯ ಒಟ್ಟು 440 ಶಾಖೆಗಳಲ್ಲಿ 48715.93 ಕೋಟಿ ರು. ಠೇವಣಿ ಮತ್ತು 24,184.84 ಕೋಟಿ ರು. ಮುಂಗಡ ಸೇರಿದಂತೆ ಒಟ್ಟು 72,900.77 ಕೋಟಿ ರು. ವಹಿವಾಟು ನಡೆದಿದೆ, ಬ್ಯಾಂಕುಗಳ ಸಾಲ ಠೇವಣಿ ಅನುಪಾತ ಶೇ. 49.64 ಇದೆ. ಈ ಪ್ರಮಾಣವು ರೀಸರ್ವ್ ಬ್ಯಾಂಕ್ ಮಾರ್ಗ ಸೂಚಿಯಂತೆ ಕನಿಷ್ಠ ಶೇ. 60 ಇರಬೇಕಾಗಿದ್ದು, ಈ ಬಗ್ಗೆ ಎಲ್ಲ ಬ್ಯಾಂಕುಗಳು ಪ್ರಯತ್ನಿಸಬೇಕು ಎಂದರು.
ಲೋಕ್ ಕಲ್ಯಾಣ್ ಮೇಳ: ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಮಾತನಾಡಿ. ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗಾಗಿ ಸೆಯ 1 ರಿಂದ 30ರವರೆಗೆ ಲೋಕ್ ಕಲ್ಯಾಣ್ ಮೇಳ ವಿಶೇಷ ಅಭಿಯಾನವನ್ನು ಆಯೋಜಿಸಲಾಗುತ್ತಿದ್ದು, ಈ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಹೆಚ್ಚಿನ ಬೀದಿಬದಿ ವ್ಯಾಪಾರಿಗಳಿಗೆ ತಮ್ಮ ವ್ಯವಹಾರವನ್ನು ಅಭಿವೃದ್ಧಿಗೆ ಬ್ಯಾಂಕುಗಳು ಸಹಕರಿಸಬೇಕು ಎಂದರು. ಸಭೆಯಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ನ ಉಪಮಹಾಪ್ರಬಂಧಕ ರಾಜೇಶ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.