ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಬಂಟಕಲ್ಲು: 8ನೇ ವರ್ಷದ ‘ಗಾದೆಂತ್‌ ಕ್ಹೇಳ್‌ ಮೇಳ್‌’ ಕೆಸರು ಗದ್ದೆ ಕ್ರೀಡೋತ್ಸವ ಸಂಪನ್ನ

KannadaprabhaNewsNetwork | Published : Jun 18, 2025 11:48 PM

ಬಂಟಕಲ್ಲಿನ ಸಡಂಬೈಲು ಅನಂತರಾಮ ವಾಗ್ಲೆ ಅವರ ದೊಡ್ಡಗದ್ದೆಯಲ್ಲಿ ರಾಜಾಪುರ ಸಾರಸ್ವತ ಸೇವಾ ವೃಂದ ಮತ್ತು ಶ್ರೀದುರ್ಗಾ ಮಹಿಳಾ ವೃಂದದ ಸಹಭಾಗಿತ್ವದಲ್ಲಿ ಸಮಾಜದ ಸಂಘಟನೆ, ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ಮನೋರಂಜನೆಗಾ ೮ನೇ ವರ್ಷದ ‘ಗಾದೆಂತ್ ಕ್ಹೇಳ್ ಮೇಳ್’ ಕೆಸರು ಗದ್ದೆ ಕ್ರೀಡೋತ್ಸವ ನೆರವೇರಿತು.

ಕನ್ನಡಪ್ರಭ ವಾರ್ತೆ ಕಾಪು

ನಮ್ಮ ಹಿರಿಯರು ಪ್ರಕೃತಿಯ ಜೊತೆಗೆ ಬೆಳೆದವರು, ಅವರ ಅಂದಿನ ಶ್ರಮ ಜೀವನ, ನಿಷ್ಠೆ, ಪ್ರಾಮಾಣಿಕತೆ ಇಂದು ಮರೆಯಾಗುತ್ತಿದೆ. ಅವರ ಬದುಕು ನಮಗೆ ಆದರ್ಶವಾಗಿರಬೇಕು. ಆದ್ರಿಂದ ನಮ್ಮ ಹಿರಿಯರ ಕೃಷಿ ಸಂಸ್ಕೃತಿ, ಪ್ರಕೃತಿಯ ನಂಟು ನವಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮಗಳು ನಡೆಯಬೇಕು ಎಂದು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಎಳ್ಳಾರೆ ಸದಾಶಿವ ಪ್ರಭು ಹೇಳಿದ್ದಾರೆ.

ಇಲ್ಲಿನ ಬಂಟಕಲ್ಲಿನ ಸಡಂಬೈಲು ಅನಂತರಾಮ ವಾಗ್ಲೆ ಅವರ ದೊಡ್ಡಗದ್ದೆಯಲ್ಲಿ ರಾಜಾಪುರ ಸಾರಸ್ವತ ಸೇವಾ ವೃಂದ ಮತ್ತು ಶ್ರೀದುರ್ಗಾ ಮಹಿಳಾ ವೃಂದದ ಸಹಭಾಗಿತ್ವದಲ್ಲಿ ಸಮಾಜದ ಸಂಘಟನೆ, ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ಮನೋರಂಜನೆಗಾಗಿ ಏರ್ಪಡಿಸಿದ ೮ನೇ ವರ್ಷದ ‘ಗಾದೆಂತ್ ಕ್ಹೇಳ್ ಮೇಳ್’ ಕೆಸರು ಗದ್ದೆ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಮಣಿಪಾಲದ ಸಾರಸ್ವತ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ಕೃಷ್ಣ ನಾಯಕ್ ಸ್ಪರ್ಧಾ ವಿಜೇಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಬೆಳಗ್ಗೆ ಬಿರುಸು ಮಳೆಯ ನಡುವೆ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದ ಬೈಲು, ಸ್ಥಳೀಯ ಉದ್ಯಮಿ ರಾಮಚಂದ್ರ ನಾಯಕ್ ಪಡುಬೆಳ್ಳೆ, ಗದ್ದೆಯ ಯಜಮಾನ ಅನಂತರಾಮ ವಾಗ್ಲೆ, ಆರ್‌ಎಸ್‌ಬಿ ಸೇವಾ ವೃಂದದ ಅಧ್ಯಕ್ಷ ಕೆ.ಆರ್ ಪಾಟ್ಕರ್, ಶ್ರೀದುರ್ಗಾ ಮಹಿಳಾ ಮಹಿಳಾ ವೃಂದದ ಅಧ್ಯಕ್ಷೆ ಸುನೀತಾ ದೇವೇಂದ್ರ ನಾಯಕ್, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ ಬಾಂದೇಲ್ಕರ್ ಗದ್ದೆಗೆ ಹಾಲು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿಶೇಷ ಆಕರ್ಷಣೆಯಾಗಿ ಕೆಸರುಗದ್ದೆಯಲ್ಲಿ ಮೂಡುಬೆಳ್ಳೆ ಜಡ್ಡು ಉಮೇಶ್ ನಾಯಕ್‌ ಅವರ ಕಂಬಳದ ಕೋಣಗಳ ಓಟವನ್ನು ಪ್ರದರ್ಶಿಸಲಾಯಿತು.

ನಂತರ ಕೆಸರು ಗದ್ದೆಯಲ್ಲಿ ನಿಧಿ ಶೋಧ, ಮಕ್ಕಳಿಗೆ ಕೆಸರುಗದ್ದೆ ಓಟ, ಅಡಿಕೆ ಹಾಳೆ ಓಟ, ಚೆಂಡು ಹೆಕ್ಕುವುದು, ಹಲಸಿನ ಬೀಜ ಹೆಕ್ಕುವುದು, ಯುವಕರಿಗೆ ಕಂಬಳ ಓಟ, ರಿಲೇ, ಬಲೂನ್ ಓಟ, ಹಿರಿಯರಿಗೆ ದಂಪತಿ ಉಪ್ಪುಮೂಟೆ ಓಟ, ಕಂಬಳ ಓಟ, ರಿಲೇ ಓಟ, ಮಡಲು ಹೆಣೆಯುವುದು, ಬೈಹುಲ್ಲಿನ ಹಗ್ಗ ತಯಾರಿ, ಬಲೂನ್ ಓಟ, ಹಗ್ಗ ಜಗ್ಗಾಟ, ಮಡಕೆ ಒಡೆಯುವುದು ಇತ್ಯಾದಿ ಸ್ಪರ್ಧೆಗಳು ನಡೆದವು.ಪ್ರಧಾನ ಸಂಘಟಕ ಸೇವಾ ವೃಂದದ ಅಧ್ಯಕ್ಷ ಕೆ.ಆರ್ ಪಾಟ್ಕರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್ ಸ್ಫರ್ಧಾ ವಿಜೇತರನ್ನು ಪರಿಚಯಿಸಿದರು. ದೇವದಾಸ್ ಪಾಟ್ಕರ್ ನಿರೂಪಿಸಿದರು.