ತಲಪಾಡಿ-ಪೊನ್ನೋಡಿ: ಮಳೆಗೆ ಅಲ್ಲಲ್ಲಿ ಗುಡ್ಡದ ಧರೆ ಕುಸಿತ

KannadaprabhaNewsNetwork |  
Published : Jul 06, 2026, 03:00 AM IST
*ತಲಪಾಡಿ-ಪೊನ್ನೋಡಿ: ಮಳೆಗೆ ಅಲ್ಲಲ್ಲಿ ಗುಡ್ಡದ ಧರೆ ಕುಸಿತ:**ಅಪಾಯದ ಅಂಚಿನಲ್ಲಿವೆ ಮನೆಗಳು, ಪ್ರಾಣಭೀತಿಯಲ್ಲಿ ನಿವಾಸಿಗಳು**ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯ* | Kannada Prabha

ಸಾರಾಂಶ

ಮೂರ್ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಬಂಟ್ವಾಳ ತಾಲೂಕಿನ ಪುರಸಭೆ ವ್ಯಾಪ್ತಿಯ ತಲಪಾಡಿ-ಪೊನ್ನೋಡಿ ಸಮೀಪದ ಕೋಡಿಬೆಟ್ಟು ಪ್ರದೇಶದ ಅಲ್ಲಲ್ಲಿ ಧರೆ ಕುಸಿದು ಬಿದ್ದಿದ್ದು, ನಾಲ್ಕು ಮನೆಗಳು ಅಪಾಯದಲ್ಲಿವೆ.

ಬಂಟ್ವಾಳ: ಮೂರ್ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಬಂಟ್ವಾಳ ತಾಲೂಕಿನ ಪುರಸಭೆ ವ್ಯಾಪ್ತಿಯ ತಲಪಾಡಿ-ಪೊನ್ನೋಡಿ ಸಮೀಪದ ಕೋಡಿಬೆಟ್ಟು ಪ್ರದೇಶದ ಅಲ್ಲಲ್ಲಿ ಧರೆ ಕುಸಿದು ಬಿದ್ದಿದ್ದು, ನಾಲ್ಕು ಮನೆಗಳು ಅಪಾಯದಲ್ಲಿವೆ.

ಬಿ.ಸಿ.ರೋಡ್ ಸಮೀಪದ ತಲಪಾಡಿ-ಕೋಡಿಬೆಟ್ಟು ನಿವಾಸಿಗಳಾದ ಕುಂಞಿ ಬಾವ, ಬಾವಂಞಿ, ಲತೀಫ್ ಎಂಬವರ ಮನೆ ಹಾಗೂ ಬಾಡಿಗೆ ಮನೆಯೊಂದಿದ್ದು, ಇಲ್ಲಿ 10 ಮಕ್ಕಳು ಸೇರಿ 25 ಜನರು ವಾಸಿಸುತ್ತಿದ್ದಾರೆ. ಕಳೆದ ರಾತ್ರಿಯ ಮಳೆಯಿಂದ ಈ ಭಾಗದಲ್ಲಿ ಧರೆ ಕುಸಿದಿದ್ದು, ಇಲ್ಲಿನ ನಿವಾಸಿಗಳು ಆತಂಕದಲ್ಲಿದ್ದಾರೆ. ಇನ್ನಷ್ಟು ಧರೆ ಕುಸಿದರೆ ಮನೆಗಳಿಗೆ ಅಪಾಯವಾಗುವ ಸಂಭವವಿದೆ.

ತಡೆಗೋಡೆ ಇಲ್ಲ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ಗುಡ್ಡ ಅಗೆದ ಜಾಗದ ಮಣ್ಣು ಹದಗೊಂಡು ಕುಸಿದು ಬಿದ್ದಿದೆ. ಈ ಪ್ರದೇಶದಕ್ಕೆ ಹೊಂದಿಕೊಂಡಿರುವ ಗುಡ್ಡವನ್ನು ಅಗೆಯದಂತೆ ಸಂಬಂಧಪಟ್ಟ ಜಾಗದ ಮಾಲೀಕರಿಗೆ ಮೊದಲೇ ತಿಳಿಸಿದ್ದೆವು. ಆದರೆ ಇಲ್ಲಿನ ಮನೆ ಮಂದಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ ಮತ್ತೆ ಗುಡ್ಡವನ್ನು ಅಗೆಯಲಾಗಿದೆ. ಇದರಿಂದ ಈ ಪ್ರದೇಶ ಸುತ್ತಲೂ ಗೋಪುರದಂತಾಗಿದೆ. ಗುಡ್ಡ ಅಗೆದ ಬಳಿಕ ತಡೆಗೋಡೆಯನ್ನೂ ನಿರ್ಮಾಣ ಮಾಡಿಲ್ಲ. ಇದಕ್ಕೆ ಬೇಕಾದ ಪೂರಕ ಸ್ಪಂದನೆಯೂ ನಮಗೆ ಸಿಕ್ಕಿಲ್ಲ ಎಂದು ಇಲ್ಲಿನ ನಿವಾಸಿ ನಾಸಿರ್ ಕೋಡಿಬೆಟ್ಟು ಆರೋಪಿಸಿದ್ದಾರೆ.

ಇಲ್ಲಿ ಇನ್ನಷ್ಟು ಧರೆ ಕುಸಿಯುವ ಅಪಾಯವಿದ್ದು, ಧರೆ ಕುಸಿದರೆ ಮನೆಗೆ ಹಾನಿಯಾಗುವ ಸಂಭವವಿದೆ. ಆದ್ದರಿಂದ ಇಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ. ಸುಮಾರು 44 ವರ್ಷಗಳಿಂದ ಈ ಪ್ರದೇಶದಲ್ಲಿ ನೆಲೆಸಿದ್ದೇವೆ. ಇದು ಗುಡ್ಡ ಪ್ರದೇಶವಾಗಿದೆ. ಇಲ್ಲಿನ ಸುತ್ತಲಿನ ಜಾಗದ ಮಾಲೀಕರು ಗುಡ್ಡ ಜಾಗವನ್ನು ಹಿಟಾಚಿ ಮೂಲಕ ಸಮತಟ್ಟು ಮಾಡಿದ್ದಾರೆ. ನಮ್ಮ ಮನೆಯ ಹತ್ತಿರದಲ್ಲೇ ಗುಡ್ಡವನ್ನು ಅವೈಜ್ಞಾನಿಕವಾಗಿ ಅಗೆಯಲಾಗಿದೆ. ಇದರಿಂದ ಗುಡ್ಡದ ಧರೆ ಅಲ್ಲಲ್ಲಿ ಕುಸಿದು ಬಿದ್ದಿದೆ. ಅದಲ್ಲದೆ ಮನೆಯ ಎದುರಿನ ಮರವೊಂದು ವಾಲಿಕೊಂಡಿದ್ದು, ಇಂದೋ-ನಾಳೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇಲ್ಲಿ ಇನ್ನಷ್ಟು ಧರೆ ಕುಸಿಯುವ ಅಪಾಯವಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.

-ಕುಂಞಿ ಬಾವ, ಕೋಡಿಬೆಟ್ಟು ನಿವಾಸಿ ಎರಡೂ ಕಡೆಯು ಧರೆ ಕುಸಿತದಿಂದ ಈ ಭಾಗದ ರಸ್ತೆಯೂ ಹದಗೆಟ್ಟಿದೆ. ಮಕ್ಕಳಿಗೆ ಆಟವಾಡಲು ಸ್ಥಳವಕಾಶವೂ ಇಲ್ಲ. ಈ ಭಾಗದ ಮಕ್ಕಳು ಶಾಲೆಗೆ ಆತಂಕದಲ್ಲೇ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ. ಮಕ್ಕಳ ಸುರಕ್ಷತೆಯ ಬಗ್ಗೆಯೂ ಪೋಷಕರಲ್ಲಿ ಭಯ ಹೆಚ್ಚಾಗಿದೆ. ದುರಂತ ಸಂಭವಿಸುವ ಮೊದಲು ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.

-ನಾಸಿರ್, ಕೋಡಿಬೆಟ್ಟು ನಿವಾಸಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಗೆ ರೈತ ಸಂತಸ, ನಗರದಲ್ಲಿ ಅವಾಂತರ
ಮತದಾರರ ಪಟ್ಟಿವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಜಾಥಾ