ಮಂಗಳೂರು: ಪ್ರಕೃತಿ ವಿಕೋಪ ಯಾವಾಗ ಸಂಭವಿಸುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಅಸಾಧ್ಯ. ಮಳೆಗಾಲದ ಮುಂದಿನ ಮೂರು ತಿಂಗಳು ಇಲಾಖೆಗಳು, ಅಧಿಕಾರಿಗಳು ತಂಡವಾಗಿ ಕೆಲಸ ಮಾಡಿ ಪ್ರಾಕೃತಿಕ ವಿಕೋಪ ಎದುರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.ಅವರು ಭಾನುವಾರ ಪಡೀಲ್ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆ ಮತ್ತು ಕುಡಿಯುವ ನೀರಿನ ನಿರ್ವಹಣೆ ಬಗ್ಗೆ ಸಭೆ ನಡೆಸಿ ಮಾತನಾಡಿದರು.
ಜನವರಿಯಿಂದ ಈವರಗೆ ಶೇ.41 ಮಳೆಯಾಗಿದೆ, ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಈ ಬಾರಿ ಮಳೆ ತಡವಾಗಿದ್ದರಿಂದ ಭತ್ತದ ನಾಟಿಗೆ ಸಮಸ್ಯೆ ಆಗಿದೆ. ತಗ್ಗು ಪ್ರದೇಶದ ಗದ್ದೆಯಲ್ಲಿ ಸದ್ಯ ನೀರಿನ ಪ್ರಮಾಣ ಇದ್ದು, ಎತ್ತರದ ಗದ್ದೆಗಳಲ್ಲಿ ನೀರು ಇಲ್ಲದಂತಾಗಿದೆ. ನಮ್ಮಲ್ಲಿ ಬೀಜಗಳು ಸ್ಟಾಕ್ ಇದೆ ಎಂದು ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.
ಮಳೆಮಾಪನ ಸುಸ್ಥಿಯಲ್ಲಿರಲಿ:ಮಳೆಮಾಪನ ಸುಸ್ಥಿತಿಯಲ್ಲಿ ಇಲ್ಲದ ಪರಿಣಾಮ ಕಳೆದ ವರ್ಷ ಬೆಳೆವಿಮೆ ನ್ಯಾಯವಾಗಿ ಸಿಕ್ಕಿಲ್ಲ. ಆದ್ದರಿಂದ ರೈತರು ಸಂಕಷ್ಟ ಎದುರಿಸಿದ್ದಾರೆ. ಈ ಬಾರಿಯಾದರೂ ಮಳೆಮಾಪಕಗಳ ದುರಸ್ತಿ ನಡೆಸಲಾಗಿದೆಯಾ ಎಂದು ಶಾಸಕರಾದ ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್, ಐವನ್ ಡಿಸೋಜಾ ಪ್ರಶ್ನಿಸಿದರು. ಜಿಲ್ಲೆಯಲ್ಲಿ 274 ಘಟಕಗಳಿದ್ದು, 108 ಘಟಕಗಳು ಕೆಲಸ ಮಾಡುತ್ತಿದ್ದು, 166 ಘಟಕದ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಒಂದು ಗ್ರಾಮದಲ್ಲಿ ಮಳೆ ಮಾಪಕ ಇಲ್ಲ ಅಥವಾ ಸರಿ ಇಲ್ಲ ಎಂದಾದರೆ ಪಕ್ಕದ ಗ್ರಾಮದ ಮಳೆಮಾಪಕದ ವರದಿ ಪಡೆಯುವ ಬಗ್ಗೆ ಚರ್ಚೆ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಎಪ್ರಿಲ್ನಲ್ಲೇ ಮಳೆ ಮಾಪಕಗಳನ್ನು ದುರಸ್ತಿ ಮಾಡಬೇಕಾಗಿದ್ದರೂ ಇನ್ನೂ ಮಾಡಿಲ್ಲ ಎಂದಾದರೇ, ಮಳೆ ಮುಗಿದ ಬಳಿಕ ದುರಸ್ತಿ ಮಾಡುತ್ತೀರಾ ಎಂದು ಸುಳ್ಯ ಶಾಸಕರು ಪ್ರಶ್ನಿಸಿದರು. ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ರಸ್ತೆ ಬದಿಗಳ ಅಪಾಯಕಾರಿ ಮರಗಳ ತೆರವು ಮಾಡುವಂತೆ ಆಗ್ರಹಿಸಲಾಯಿತು. ಮರಗಳನ್ನು ಅರಣ್ಯ ಇಲಾಖೆ ತೆರವು ಮಾಡಿಸಬೇಕು ಎಂದು ಸಚಿವರು ಸೂಚಿಸಿದರು. ಸಂಭವನೀಯ ಭೂಕುಸಿತ, ನೆರೆ ಪ್ರದೇಶಗಳಲ್ಲಿ ಅಧಿಕಾರಿಗಳು, ಸ್ಥಳೀಯಾಡಳಿ ನಿಗಾ ಇರಿಸಬೇಕು. ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಬೇಕು. ಸ್ಥಳಾಂತರ ಮಾಡುವ ಅನಿವಾರ್ಯತೆ ಇದ್ದಲ್ಲಿ ಸ್ಥಳಾಂತರ ಮಾಡಿಸಿ, ನೋಟೀಸ್ ನೀಡಿ ಎಂದು ಸಚಿವರು ಸೂಚಿಸಿದರು. ಮನೆ ಇರುವ ಕಡೆಗಳಲ್ಲಿ ಭೂ ಕುಸಿತ, ಧರೆ ಕುಸಿತ ಆಗುವಲ್ಲಿ ಸರ್ಕಾರದಿಂದ ತಡೆಗೋಡೆ ನಿರ್ಮಿಸಲು ವಿಶೇಷ ಅನುದಾನ ತರಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಪ್ರಸ್ತಾಪಿಸಿದರು.
ಕುಕ್ಕೆ ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 24 ಗಂಟೆಯೂ ವೈದ್ಯರ ಬೇಡಿಕೆ ಇದ್ದು, ವೈದ್ಯರ ನಿಯೋಜಿಸುವಂತೆ ಶಾಸಕಿ ಭಾಗೀರಥಿ ಮುರುಳ್ಯ ಪ್ರಸ್ತಾಪಿಸಿದರು. ಅದು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದು, ಅಲ್ಲಿ ಹಗಲು ಕರ್ತವ್ಯ ನಿರ್ವಹಿಸಲು ವೈದ್ಯರು ಇದ್ದಾರೆ ಎಂದು ಡಿಎಚ್ಒ ಡಾ.ತಿಮ್ಮಯ್ಯ ತಿಳಿಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ಜೊತೆ ಆರೋಗ್ಯ ಸಚಿವರು ಸಭೆ ನಡೆಸಿ ದೇವಸ್ಥಾನದಿಂದ ವೈದ್ಯರ ನೇಮಕ ಮಾಡಿ, ಸಮಸ್ಯೆ ಬಗೆಹರಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಸಲಹೆ ನೀಡಿದರು. ಶಿಕ್ಷಣ ಇಲಾಖೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ-ಹಿಂದುಳಿದ ವರ್ಗಗಳ ಇಲಾಖೆ, ಅಗ್ನಿಶಾಮಕ ಇಲಾಖೆ, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಮತ್ತಿತರ ಇಲಾಖೆಗಳ ಅಹವಾಲುಗಳನ್ನು ಸಚಿವರು ಆಲಿಸಿದರು.