;Resize=(412,232))
ಗದಗ: ಮಧ್ಯರಾತ್ರಿ ಮನೆಗೆ ನುಗ್ಗಿದ ಗುಂಪು ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದು, ಇನ್ನಿಬ್ಬರ ಹತ್ಯೆಗೆ ವಿಫಲ ಯತ್ನ ನಡೆಸಿದ ಘಟನೆ ನಗರದ ದಾಸರ ಓಣಿಯಲ್ಲಿ ಗುರುವಾರ ರಾತ್ರಿ ನಡೆದೆ.
ಅದೇ ಮನೆಯ ನೆಲ ಮಹಡಿಯ ಕೋಣೆಯಲ್ಲಿ ಮಲಗಿದ್ದ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಹಾಗೂ ಪತಿ, ಮಾಜಿ ನಗರಸಭಾ ಸದಸ್ಯ ಪ್ರಕಾಶ ಬಾಕಳೆ ಅವರ ಹತ್ಯೆಗೂ ಈ ಗುಂಪು ಯತ್ನಿಸಿದ್ದು, ಕೋಣೆಯ ಬಾಗಿಲನ್ನು ಜೋರಾಗಿ ಬಡಿಯುತ್ತಿದ್ದಂತೆ ಪೊಲೀಸರಿಗೆ ಕರೆ ಮಾಡಿ ಎತ್ತರ ಧ್ವನಿಯಲ್ಲಿ ಮಾತನಾಡುತ್ತಿರುವುದನ್ನು ಕೇಳುತ್ತಿದ್ದಂತೆ ಹಂತಕರು ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಘಟನೆಯಿಂದ ಗದಗ ನಗರ ಅಕ್ಷರಶಃ ಬೆಚ್ಚಿ ಬಿದ್ದಿದೆ. ಈ ಹತ್ಯೆಯ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಸಾರ್ವಜನಿಕರು ಕ್ಷಣಕಾಲ ದಂಗಾಗಿ ಹೋದರು. ಘಟನಾ ಸ್ಥಳ ಸೇರಿದಂತೆ ಅವಳಿ ನಗರದ ಪ್ರಮುಖ ಸ್ಥಳಗಳಲ್ಲಿ ಜನ ಗುಂಪು, ಗುಂಪಾಗಿ ನಿಂತು ಚರ್ಚಿಸುತ್ತಿದ್ದರು.ಮುಗಿಲು ಮುಟ್ಟಿದ ಆಕ್ರಂದನ: ಘಟನಾ ಸ್ಥಳದಲ್ಲಿ ನೆರೆದಿದ್ದ ಸಾವಿರಾರು ಜನರು ಕಣ್ಣೀರು ಸುರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರಾಥಮಿಕ ತನಿಖೆ ಆಧಾರದಲ್ಲಿ ಕೊಲೆಯಾಗಿರುವರು ಕೊಪ್ಪಳ ಜಿಲ್ಲೆಯ ಭಾಗ್ಯ ನಗರದ ನಿವಾಸಿಗಳಾಗಿದ್ದು, ಗದಗ ನಗರದ ಬಾಕಳೆ ಕುಟುಂಬದ ಸಂಬಂಧಿಕರಾಗಿದ್ದು, ಏ.17 ರಂದು ಗದಗ ನಗರಕ್ಕೆ ಆಗಮಿಸಿದ್ದರು. ಕೊಲೆಯಾಗಿರುವ ಕಾರ್ತಿಕ್ ನಿಶ್ಚಿತಾರ್ಥ ಕುರಿತು ಚರ್ಚಿಸಲು ಬಂದಿದ್ದರು ಎನ್ನಲಾಗಿದ್ದು, ಶುಕ್ರವಾರವೇ ಮರಳಿ ಕೊಪ್ಪಳಕ್ಕೆ ಬರುವುದಾಗಿ ಹೇಳಿದ್ದರು ಎನ್ನಲಾಗಿದೆ.
ಈ ಬರ್ಬರ ಹತ್ಯೆಯ ಹಿಂದೆ ಹಲವು ಸಂಶಯ ವ್ಯಕ್ತವಾಗುತ್ತಿದ್ದು, ಇದು ಕುಟುಂಬದ ವೈಷಮ್ಯದಿಂದ ಮಾಡಿದ್ದಾ ಅಥವಾ ಆಸ್ತಿ ವಿವಾದಕ್ಕಾಗಿ ನಡೆದಿದೆಯೇ ಎಂಬುದರ ಕುರಿತು ತನಿಖೆಯಿಂದ ಗೊತ್ತಾಗಬೇಕಿದೆ. ಆದರೆ ಕೊಲೆಯಾಗಿರುವ ಮನೆಯ ಮಾಲೀಕ ಪ್ರಕಾಶ ಬಾಕಳೆ ಸಾಕಷ್ಟು ಹಣಕಾಸಿನ ವ್ಯವಹಾರ ಹೊಂದಿದ್ದರು. ಪ್ರಕಾಶ ಬಾಕಳೆ ಅವರ ಮೊದಲ ಪತ್ನಿಯ ಮಗ, ಕೆಲವು ತಿಂಗಳುಗಳ ಹಿಂದೆ ಬ್ಯಾಂಕ್ ನಲ್ಲಿ ನಕಲಿ ಚಿನ್ನವಿಟ್ಟು ಕೋಟ್ಯಂತರ ಹಣ ಪಡೆದ ವಿಷಯದಲ್ಲಿ ಬಂಧಿತನಾಗಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ನಾಲ್ವರ ಕೊಲೆಯ ನಂತರ ಈ ಎಲ್ಲ ವಿಷಯಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಸತ್ಯ ಪೊಲೀಸರ ತನಿಖೆಯಿಂದಲೇ ಬಹಿರಂಗವಾಗಬೇಕಿದೆ.
ಒಂದೇ ಕುಟುಂಬದ ನಾಲ್ವರ ಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಘಟನೆಯ ತೀವ್ರತೆ ಕಂಡು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕುಟುಂಬಸ್ಥರು ಕೊಲೆಗಡುಕರಿಗೆ ಗಲ್ಲು ಶಿಕ್ಷೆ ಕೊಡಿಸಿ ಎಂದು ಆಕ್ರಂದಿಸುತ್ತಲೇ ಆಗ್ರಹಿಸಿದರು. ಕಟ್ಟುನಿಟ್ಟಿನ ತನಿಖೆಗೆ ಪೊಲೀಸ್ ಇಲಾಖೆಗೆ ಸಚಿವರು ಸೂಕ್ತ ನಿರ್ದೇಶನ ನೀಡಿದರು.
ಕಾರ್ತಿಕ್ ಮದುವೆ ನಿಶ್ಚಯ ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರು ಸೇರಿದಂತೆ ನಾಲ್ವರ ಹತ್ಯೆಯಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲ ಕೋನಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ತನಿಖೆ ಚುರುಕುಗೊಂಡಿದೆ ಎಂದು ಎಸ್ಪಿ ಬಿ.ಎಸ್.ನೇಮಗೌಡ್ರ ಹೇಳಿದರು.